ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ದೃಢಪ್ರಮಾಣ ಶೇ 1ರ ಆಸುಪಾಸಿನಲ್ಲಿಯೇ ಇದ್ದರೂ, ಸಾವಿನ ಸಂಖ್ಯೆ ಏರಿಕೆಯಾಗಿದೆ. ಹೊಸದಾಗಿ 1,639 ಮಂದಿಗೆ ಸೋಂಕು ತಗುಲಿರುವುದು ಬುಧವಾರ ದೃಢಪಟ್ಟಿದ್ದು, 36 ಸೋಂಕಿತರು ಸಾವಿಗೀಡಾಗಿದ್ದಾರೆ.
ಮಂಗಳವಾರಕ್ಕೆ ಹೋಲಿಸಿದರೆ ಸೋಂಕು ಪರೀಕ್ಷೆಗಳು 39 ಸಾವಿರ (1.52 ಲಕ್ಷಕ್ಕೆ) ಹೆಚ್ಚಾಗಿದ್ದರೆ, ಹೊಸ ಪ್ರಕರಣಗಳು 175, ಸೋಂಕಿತರ ಸಾವಿನ ಸಂಖ್ಯೆಯಲ್ಲಿ 6 ಜಾಸ್ತಿಯಾಗಿದೆ. ಆದರೆ, ಸೋಂಕು ದೃಢಪ್ರಮಾಣ ಶೇ.1.29 ರಿಂದ ಶೇ.1.07 ಕ್ಕೆ ತಗ್ಗುವ ಮೂಲಕ ಶೇ.2.2 ರಷ್ಟಾಗಿದೆ. 2,214 ಮಂದಿ ಗುಣಮುಖರಾಗಿದ್ದಾರೆ.
ಹೊಸ ಪ್ರಕರಣ ಹೆಚ್ಚಳ: ಎರಡು ದಿನಗಳಿಂದ ಸೋಂಕು ಹೊಸ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಸೋಮವಾರ 1,229 ಪ್ರಕರಣಗಳು ವರದಿಯಾಗಿದ್ದರೆ, ಮಂಗಳವಾರ 1,464 ಹೊಸ ಪ್ರಕರಣಗಳಿದ್ದವು. ಬುಧವಾರ ಈ ಸಂಖ್ಯೆ 1,639ಕ್ಕೆ ಏರಿಕೆಯಾಗಿವೆ.
ಇನ್ನು ಮೊದಲ ಮತ್ತು ಎರಡನೇ ಅಲೆ ಸೇರಿ ಒಟ್ಟು ಸೋಂಕಿತರ ಸಂಖ್ಯೆ 28.88 ಲಕ್ಷ ದಾಟಿದ್ದು, ಒಟ್ಟು ಗುಣಮುಖರ ಸಂಖ್ಯೆ 28.26 ಲಕ್ಷ ಮೀರಿದೆ. ಇದರೊಂದಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 25,645 ಕ್ಕೆ ಇಳಿಕೆಯಾಗಿದೆ. 36,262 ಸೋಂಕಿತರು ಮೃತಪಟ್ಟಿದ್ದಾರೆ. ಗುಣಮುಖ ದರ ಶೇ 98 ರಷ್ಟಿದ್ದು, ಮರಣ ದರ ಶೇ 1.1 ರಷ್ಟಿದೆ.
ರಾಜಧಾನಿಯಲ್ಲಿ 419 ಹೊಸ ಪ್ರಕರಣ: ಬೆಂಗಳೂರು ನಗರದಲ್ಲಿ 419 ಹೊಸ ಪ್ರಕರಣಗಳು ವರದಿಯಾಗಿವೆ. ದಕ್ಷಿಣ ಕನ್ನಡ 190, ಮೈಸೂರು 160, ಹಾಸನ 141 ಹಾಗೂ ಉಡುಪಿ 104 ಜನರಲ್ಲಿ ಕೋವಿಡ್ ದೃಢಪಟ್ಟಿದೆ. ಉಳಿದಂತೆ 16 ಜಿಲ್ಲೆಗಳಲ್ಲಿ ಸೋಂಕಿತರ ಸಂಖ್ಯೆ ಎರಡಂಕಿ ಹಾಗೂ 7 ಜಿಲ್ಲೆಗಳಲ್ಲಿ ಒಂದಂಕಿಗೆ ಇಳಿಕೆಯಾಗಿದೆ.
ಬೀದರ್ ಮತ್ತು ಯಾದಗಿರಿಯಲ್ಲಿ ಶೂನ್ಯವಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.