ಮಂಡ್ಯ: ಕೋವಿಡ್– 19ನಿಂದ ಮೃತಪಟ್ಟ ಕಲಬುರ್ಗಿಯ ಮೊಹಮ್ಮದ್ ಹುಸೇನ್ ಸಿದ್ದಿಕಿ ಪ್ರಯಾಣಿಸಿದ್ದ ವಿಮಾನದಲ್ಲೇ ಬಂದಿದ್ದ ನಾಗಮಂಗಲದ ಮಹಿಳೆಯೊಬ್ಬರಿಗೆ ಕೊರೊನಾ ಸೋಂಕು ಶಂಕೆ ಇದ್ದು ನಗರದ ಮಿಮ್ಸ್ ಆಸ್ಪತ್ರೆಯ ಪ್ರತ್ಯೇಕ ವಾರ್ಡ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕುಟುಂಬ ಸದಸ್ಯರೊಂದಿಗೆ ದುಬೈ ಪ್ರವಾಸಕ್ಕೆ ತೆರಳಿದ್ದ ಮಹಿಳೆ ಮಾರ್ಚ್ 1ರಂದು ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಇಳಿದು ಬೆಂಗಳೂರಿಗೆ ಪ್ರಯಾಣಿಸಿದ್ದರು. ಅದೇ ವಿಮಾನದಲ್ಲಿ ಮೊಹಮದ್ ಸಿದ್ದಿಕಿ ಕೂಡ ಇದ್ದರು ಎಂದು ಮಹಿಳೆ ಹೇಳಿಕೊಂಡಿದ್ದಾರೆ. ಆಕೆಗೆ ಕೊರೊನಾ ಲಕ್ಷಣ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಸೋಮವಾರ ಸಂಜೆ ಮಿಮ್ಸ್ನ ಪ್ರತ್ಯೇಕ ವಾರ್ಡ್ಗೆ ದಾಖಲು ಮಾಡಿದ್ದಾರೆ.
‘14 ದಿನಗಳ ನಂತರವೂ ಮಹಿಳೆಯ ಆರೋಗ್ಯದಲ್ಲಿ ಚೇತರಿಕೆ ಕಂಡುಬಾರದ ಕಾರಣ ಪ್ರತ್ಯೇಕ ವಾರ್ಡ್ಗೆ ದಾಖಲು ಮಾಡಲಾಗಿದೆ. ಆಕೆಯ ರಕ್ತ, ಕಫ ಹಾಗೂ ಗಂಟಲು ದ್ರವವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಮೊಹಮ್ಮದ್ ಸಿದ್ದಕಿ ಇದ್ದ ವಿಮಾನದಲ್ಲಿ ಪ್ರಯಾಣ ಮಾಡಿರುವುದಾಗಿ ಹೇಳುತ್ತಿರುವ ಕಾರಣ ವಿಶೇಷ ನಿಗಾ ವಹಿಸಲಾಗಿದೆ. ಅದೇ ವಿಮಾನದಲ್ಲಿ ಪ್ರಯಾಣಿಸಿದ್ದ ಮಹಿಳೆ ಕುಟುಂಬದ ಇತರ ಸದಸ್ಯರಿಗೆ ಕೋರೊನಾ ಸೋಂಕಿನ ಲಕ್ಷಣ ಕಂಡು ಬಂದಿಲ್ಲ’ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.