ನರೇಗಲ್ (ಗದಗ): ಸಮೀಪದ ಜಕ್ಕಲಿ ಗ್ರಾಮದ ಜಾನಪದ ಕಲಾವಿದ ವೀರಪ್ಪ ಕಾಳಿ ಕೋವಿಡ್ ಲಸಿಕೆ ಪಡೆಯುವಂತೆ ಶನಿವಾರ ಮಧ್ಯಾಹ್ನ ಗ್ರಾಮದ ತುಂಬಾ ಡಂಗೂರ ಬಾರಿಸಿ ಕೂಗಿ ಹೇಳುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ.
ಆ ವಿಡಿಯೊವನ್ನು ಆರೋಗ್ಯ ಸಚಿವ ಡಾ. ಸುಧಾಕರ ಕೆ. ಅವರು ತಮ್ಮ ಟ್ವಿಟರ್ ಹಾಗೂ ಫೇಸ್ಬುಕ್ ಖಾತೆಯಲ್ಲಿ ಅಪ್ಲೋಡ್ ಮಾಡುವ ಮೂಲಕ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ವಿಡಿಯೊವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ಯಾಗ್ ಮಾಡಿದ್ದಾರೆ.
ಗದಗ ಜಿಲ್ಲೆಯ ಜಕ್ಕಲಿ ಗ್ರಾಮದ ಹಳ್ಳಿಯಲ್ಲಿ ಲಸಿಕೆಯ ಪಡೆಯುವುದರ ಬಗ್ಗೆ ಗ್ರಾಮೀಣ ಸಾಂಪ್ರದಾಯಕ ಪದ್ಧತಿ ಮೂಲಕ ಡಂಗೂರ ಬಾರಿಸಿ ಜಾಗೃತಿ ಮೂಡಿಸುತ್ತಿರುವ ದೃಶ್ಯ ಪ್ರೇರಣಾದಾಯಕವಾಗಿದೆ. ಇದೇ ಮಾದರಿಯಲ್ಲಿ ಕೋವಿಡ್–19 ಲಸಿಕೆಯ ಕುರಿತು ಜನಾಂದೊಲನ ದೇಶಾದ್ಯಂತ ಆಗಬೇಕು ಎಂದು ಬರೆದುಕೊಂಡಿದ್ದಾರೆ.
ಈ ವಿಡಿಯೊವನ್ನು ಅದೇ ಗ್ರಾಮದ ಹಿರಿಯ ಸಂಗಮೇಶ ಮೆಣಸಗಿ ಮಾಡಿದ್ದರು. ತದನಂತರ ಸಾಮಾಜಿಕ ಜಾಲತಾಣದಲ್ಲಿ ಒಂದೇ ದಿನದಲ್ಲಿ ವೈರಲ್ ಆಗಿದೆ. ಜಾನಪದ ಹಾಡು ಹಾಗೂ ಗ್ರಾಮದಲ್ಲಿ ನಡೆಯುವ ಪೌರಾಣಿಕ ದೊಡ್ಡಾಟ, ನಾಟಕಗಳಿಗೆ ಹಿನ್ನಲೆ ಧ್ವನಿ ಕೊಡುವ ಕಲಾವಿದ ವೀರಪ್ಪ ಕಾಳಿ. ಜಕ್ಕಲಿಯಲ್ಲಿ ಏನೇ ಕಾರ್ಯಕ್ರಮ ನಡೆದರು ಕೇಳ್ರೇಪೊ ಕೇಳ್ರೀ... ಎಂದು ಡಂಗೂರ ಸಾರಿ ಪ್ರಚಾರ ಮಾಡುತ್ತಾರೆ ಎಂದು ಗ್ರಾಮದ ಹರ್ಷವರ್ಧನ ದೊಡ್ಡಮೇಟಿ ಮಾಹಿತಿ ನೀಡಿದರು.
‘ನರೇಗಲ್ ಆರೋಗ್ಯ ಕೇಂದ್ರದ ಸಿಬ್ಬಂದಿ ಹಾಗೂ ನಮ್ಮೂರಿನ ಗ್ರಾಮ ಪಂಚಾಯ್ತಿ ಸಿಬ್ಬಂದಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳುವಂತೆ ಡಂಗೂರ ಬಾರಿಸಿ ಜಾಗೃತಿ ಮೂಡಿಸು ಎಂದು ಹೇಳಿದರು. ಅದರಂತೆ ನಾನು ಮಾಡಿದೆ. ಆದರೆ ರಾಜ್ಯ ಆರೋಗ್ಯ ಸಚಿವರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ, ನನ್ನ ವಿಡಿಯೊ ಪ್ರಧಾನಿಯವರಿಗೆ ಟ್ಯಾಗ್ ಆಗುತ್ತದೆ ಎಂದು ಊಹಿಸಿರಲಿಲ್ಲ. ಸದ್ಯದಲ್ಲೇ ನಾನು ನರೇಗಲ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆ ಪಡೆಯುತ್ತೇನೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.