ADVERTISEMENT

ಜನರಿಗಾಗಿ ಹೆಚ್ಚು ಖರ್ಚು ಮಾಡುವ ಅಧಿಕಾರಿಗಳೇ ಪ್ರಾಮಾಣಿಕರು: ಡಿಸಿಎಂ ಕಾರಜೋಳ

​ಪ್ರಜಾವಾಣಿ ವಾರ್ತೆ
Published 2 ಮೇ 2020, 7:21 IST
Last Updated 2 ಮೇ 2020, 7:21 IST
   

ಕಲಬುರ್ಗಿ: ಕೊರೊನಾ ವಿಚಾರದಲ್ಲಿ ಜನರಿಗಾಗಿ ಹಣ ಖರ್ಚು ಮಾಡಲು ಜಿಲ್ಲಾಧಿಕಾರಿಗಳು ಹಿಂದೆ ಮುಂದೆ ನೋಡಬಾರದು. ಸರ್ಕಾರಕ್ಕೆ ನೀವು ಒಂದು ರುಪಾಯಿಯನ್ನೂ ಉಳಿಸಬೇಕಿಲ್ಲ. ಜನರಿಗೆ ಸೌಕರ್ಯ ಕಲ್ಪಿಸಿ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ತಾಕೀತು ಮಾಡಿದರು.

ನಗರದಲ್ಲಿ ಶನಿವಾರ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಈ ಸಂದರ್ಭದಲ್ಲಿ ಜನರಿಗಾಗಿ ಯಾವ ಅಧಿಕಾರಿ ಹೆಚ್ಚು ಹಣ ಖರ್ಚು ಮಾಡುತ್ತಾರೋ ಅವರೇ ನಿಜವಾದ ಪ್ರಾಮಾಣಿಕರು ಎಂದೇ ನಾನು ಪರಿಗಣಿಸುತ್ತೇನೆ ಎಂದರು.

ಜಿಲ್ಲಾ ಖಜಾನೆಯಲ್ಲಿ ಹಣ ಇದೆಯೋ ಇಲ್ಲೋ? ಇಲ್ಲದಿದ್ದರೆ ಹೇಳಿ ತಕ್ಷಣ ಬಿಡುಗಡೆ ಮಾಡಿಸುತ್ತೇನೆ. ನಿಮ್ಮ ಅಕೌಂಟಿನಲ್ಲಿ ಉಳಿಯುವ ಸರ್ಕಾರದ ಹಣ ಯಾರಿಗೆ ಬೇಕು. ಅದನ್ನು ಜನರಿಗಾಗಿ ಕೈ ಬಿಚ್ಚಿ ಖರ್ಚು ಮಾಡಿ ಎಂದೂ ಅವರು ತಾಕೀತು ಮಾಡಿದು.

ADVERTISEMENT

ಕೇಂದ್ರ ಸರ್ಕಾರ ಅಂತರರಾಜ್ಯ ಪ್ರವಾಸಕ್ಕೆ ಅವಕಾಶ ಕಲ್ಪಿಸಿದೆ. ಸರ್ಕಾರದ ಮಾರ್ಗಸೂಚಿಯಂತೆ ತಮ್ಮ ರಾಜ್ಯಗಳಿಗೆ ಮರಳಬಹುದು. ಈ ಸಂಬಂಧ ರಾಜ್ಯ ಸರ್ಕಾರ 11 ಜನ ಅಧಿಕಾರಿಗಳ ತಂಡ ರಚಿಸಿದೆ ಎಂದರು.

ಬೇರೆ ರಾಜ್ಯಗಳಿಂದ ಬರುವವರು ಯಾರೇ ಆಗಲಿ ತಮ್ಮ ಸ್ವಂತ ಖರ್ಚಿನಲ್ಲಿ ಬರಬೇಕು. ಸರ್ಕಾರ ವಾಹನಗಳ ವ್ಯವಸ್ಥೆ ಮಾಡುವುದಿಲ್ಲ. ಕಾರ್ಮಿಕರು ಸಾಮೂಹಿಕವಾಗಿ ಒಂದೇ ಸ್ಥಳಕ್ಕೆ ಬರುವವರಿಗೆ ಬೇಕಾದರೆ ಸಾರಿಗೆ ವ್ಯವಸ್ಥೆ ಮಾಡಲಾಗುತ್ತದೆ. ಇದರ ವೆಚ್ಚವನ್ನು ಅವರೇ ಭರಿಸಬೇಕೆಂದು ತಿಳಿಸಿದರು.

ಹಾಗೆ ಬರುವ ಕಾರ್ಮಿಕರನ್ನು ಗಡಿಯಲ್ಲೇ ತಡೆದು ತಪಾಸಣೆ ‌ನಡೆಸಬೇಕು. ನಂತರ ಅವರನ್ನು ಕಡ್ಡಾಯವಾಗಿ ಹೊಂ ಕ್ವಾರಂಟೈನ್ ಮಾಡಬೇಕೆಂದು ಡಿಸಿಎಂ ಕಾರಜೋಳ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.