ADVERTISEMENT

ನರ್ಸ್‌ಗಳಿಗೆ ಕೊರೊನಾ ಸೋಂಕು: ವರದಿಗೆ ಸಚಿವ ಡಾ.ಕೆ.ಸುಧಾಕರ್‌ ಸೂಚನೆ

​ಪ್ರಜಾವಾಣಿ ವಾರ್ತೆ
Published 13 ಜೂನ್ 2020, 11:15 IST
Last Updated 13 ಜೂನ್ 2020, 11:15 IST
ಕೊರೊನಾ ವೈರಸ್‌ ಸೋಂಕು ಪರೀಕ್ಷಾ ಸಿಬ್ಬಂದಿ– ಸಾಂದರ್ಭಿಕ ಚಿತ್ರ
ಕೊರೊನಾ ವೈರಸ್‌ ಸೋಂಕು ಪರೀಕ್ಷಾ ಸಿಬ್ಬಂದಿ– ಸಾಂದರ್ಭಿಕ ಚಿತ್ರ   

ರಾಯಚೂರು: ನಗರದ ಓಪೆಕ್‌ ಆಸ್ಪತ್ರೆ ಕೋವಿಡ್‌ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಆರು ಸ್ಟಾಫ್‌ ನರ್ಸ್‌ಗಳಿಗೆ ಮತ್ತು ಇಬ್ಬರು ಅಟೆಂಡರ್‌ಗಳಿಗೆ ಸೋಂಕು ಹೇಗೆ ತಗುಲಿದೆ ಎಂಬುದರ ಬಗ್ಗೆ ಸ್ಪಷ್ಟ ವರದಿಯೊಂದನ್ನು ಎರಡು ದಿನಗಳಲ್ಲಿ ಕಳುಹಿಸುವಂತೆ ರಿಮ್ಸ್‌ ನಿರ್ದೇಶಕರಿಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಸೂಚಿಸಿದರು.

ಶನಿವಾರ ಏರ್ಪಡಿಸಿದ್ದ ಕೋವಿಡ್‌ ಕ್ರಮಗಳ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ರಾಜ್ಯದ ಯಾವ ಜಿಲ್ಲೆಯಲ್ಲೂ ಕೋವಿಡ್‌ ವಾರ್ಡ್‌ನಲ್ಲಿ ಕೆಲಸ ಮಾಡುವವರಿಗೆ ಇಷ್ಟು ಪ್ರಮಾಣದಲ್ಲಿ ಸೋಂಕು ಪತ್ತೆಯಾಗಿಲ್ಲ. ಪ್ರತಿಯೊಂದಕ್ಕೂಸ್ಪಷ್ಟ ನಿರ್ದೇಶನ ಇದ್ದರೂ ತಪ್ಪು ಎಲ್ಲಿಂದ ಆಗಿದೆ ಎಂಬುದನ್ನು ಪತ್ತೆ ಮಾಡುವುದಕ್ಕೆ ಇತರೆ ಅಧಿಕಾರಿಗಳು ಕೂಡಾ ಸಹಕಾರ ನೀಡಬೇಕು ಎಂದರು.

ಗುಣಮುಖರ ಬಗ್ಗೆ ಪ್ರಚಾರ

ADVERTISEMENT

ಮಾಧ್ಯಮಗಳಲ್ಲಿ ಕೋವಿಡ್‌ ಕುರಿತು ಹೊಸ ಹೊಸ ಪದ ಬಳಸಿ ಸೋಂಕಿತರ ಸಂಖ್ಯೆಯೊಂದನ್ನೆ ಹೆಚ್ಚು ಪ್ರಚಾರ ಮಾಡುತ್ತಿರುವುದರಿಂದ ಜನಸಾಮಾನ್ಯರಲ್ಲಿ ಆತಂಕ ಹೆಚ್ಚಿದೆ. ಸೋಂಕಿತರಲ್ಲಿ ಎಷ್ಟು ಜನರು ಗುಣಮುಖರಾಗಿದ್ದಾರೆ. ಸಾವಿನ ಪ್ರಮಾಣ ಎಷ್ಟಿದೆ ಎಂಬುದರ ಅಂಕಿ–ಅಂಶವನ್ನು ಜನರ ಮುಂದೆ ಇಡಬೇಕು ಮನವಿ ಮಾಡಿದರು

ನಿಫಾ, ಸಾರ್ಸ್‌ನಂತಹ ಸೋಂಕುಗಳಿಗೆ ಹೋಲಿಸಿದರೆ ಕೊರೊನಾ ಸೋಂಕಿನ ಮರಣ ಪ್ರಮಾಣ ಕಡಿಮೆ ಇದೆ. ರಾಜ್ಯದಲ್ಲಿ ಇದುವರೆಗೂ 6,516 ಜನರಿಗೆ ಸೋಂಕು ತಗುಲಿದೆ. ಅದರಲ್ಲಿ ಶೇ 52.8 ರಷ್ಟು ಜನರು ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಶೇ 1.2 ರಷ್ಟು ಮಾತ್ರ ಸಾವಿದೆ. ಉಸಿರಾಟದ ತೊಂದರೆಯಿಂದ ಬಳಲುವವರಿಗೆ ಮಾತ್ರ ಸೋಂಕು ಅಪಾಯಕಾರಿ. ರಾಷ್ಟ್ರೀಯ ಸರಾಸರಿ ಪ್ರಮಾಣಕ್ಕಿಂತಲೂ ಸಾವಿನ ಸಂಖ್ಯೆ ಕಡಿಮೆ ಇದೆ. ಜನರು ಆತಂಕ ಪಡುವ ಅಗತ್ಯವಿಲ್ಲ. ಆದರೆ, ಜಾಗೃತಿ ವಹಿಸಿ, ಮಾಸ್ಕ್‌ ಧರಿಸಬೇಕು. ಸ್ಯಾನಿಟೈಜರ್‌ ಬಳಕೆ ಮಾಡಬೇಕು. ಇಷ್ಟು ಸಣ್ಣ ಕೆಲಸದಿಂದ ದೊಡ್ಡಮಟ್ಟದ ಬದಲಾವಣೆ ತರಬಹುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.