ADVERTISEMENT

Covid-19 Karnataka Update: 24 ಜಿಲ್ಲೆಗಳಲ್ಲಿ 500ಕ್ಕಿಂತ ಕಡಿಮೆ ಪ್ರಕರಣಗಳು

​ಪ್ರಜಾವಾಣಿ ವಾರ್ತೆ
Published 10 ಜೂನ್ 2021, 21:28 IST
Last Updated 10 ಜೂನ್ 2021, 21:28 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ರಾಜ್ಯದಲ್ಲಿ 24 ಗಂಟೆಗಳ ಅವಧಿಯಲ್ಲಿ 11,042 ಮಂದಿ ಕೋವಿಡ್ ಪೀಡಿತರಾಗಿರುವುದು ದೃಢಪಟ್ಟಿದೆ. ಇದರಲ್ಲಿ 24 ಜಿಲ್ಲೆಗಳಲ್ಲಿ 500ಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ಪ್ರಕರಣಗಳು ವರದಿಯಾಗಿವೆ.

ಕಳೆದ ಕೆಲ ದಿನಗಳಿಂದ ಸೋಂಕು ದೃಢ ಪ್ರಮಾಣವು ಇಳಿಮುಖದ ಹಾದಿ ಹಿಡಿದಿದ್ದು, ಗುರುವಾರ ಶೇ 6.58ಕ್ಕೆ ತಗ್ಗಿದೆ. ಜೂನ್‌ನ 10 ದಿನಗಳಲ್ಲಿ 1,34,859 ಮಂದಿ ಸೋಂಕಿತರಾಗಿರುವುದು ದೃಢಪಟ್ಟಿದೆ. ಕಳೆದ ತಿಂಗಳು ಕಡೆಯ 10 ದಿನಗಳಲ್ಲಿ 2,50,993 ಮಂದಿ ಕೋವಿಡ್ ಪೀಡಿತರಾಗಿದ್ದರು. ಎರಡು ವಾರಗಳಿಂದ ಕೋವಿಡ್ ಹೊಸ ಪ್ರಕರಣಗಳ ಸಂಖ್ಯೆ ಇಳಿಕೆ ಕಂಡಿದ್ದು, ಈವರೆಗೆ ಸೋಂಕಿತರಾದವರ ಒಟ್ಟು ಸಂಖ್ಯೆ 27.39 ಲಕ್ಷ ದಾಟಿದೆ.

ಬೆಂಗಳೂರಿನಲ್ಲಿ 24 ಗಂಟೆಗಳ ಅವಧಿಯಲ್ಲಿ 2,191 ಮಂದಿ ಸೋಂಕಿತರಾಗಿರುವುದು ದೃಢಪಟ್ಟಿದೆ. ಮೈಸೂರಿನಲ್ಲಿ 1,011 ಮಂದಿ ಕೋವಿಡ್ ಪೀಡಿತರಾಗಿದ್ದಾರೆ. ಉಳಿದ ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು ಸಾವಿರಕ್ಕಿಂತ ಕಡಿಮೆ ವರದಿಯಾಗಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ ಮತ್ತಷ್ಟು ಇಳಿಕೆ ಕಂಡಿದ್ದು, ಸದ್ಯ 2.10 ಲಕ್ಷ ಮಂದಿ ಆಸ್ಪತ್ರೆ ಸೇರಿದಂತೆ ವಿವಿಧೆಡೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಸೋಂಕಿತರಲ್ಲಿ 15,721 ಮಂದಿಗೆ ಕಾಯಿಲೆ ವಾಸಿಯಾಗಿದೆ. ಈವರೆಗೆ ಗುಣಮುಖರಾದವರ ಒಟ್ಟು ಸಂಖ್ಯೆ 25 ಲಕ್ಷದತ್ತ (24.96 ಲಕ್ಷ) ದಾಪುಗಾಲು ಇರಿಸಿದೆ.

ADVERTISEMENT

ಮರಣ ಪ್ರಕರಣ ವರದಿ ವಿಳಂಬ: ಕೊರೊನಾ ಸೋಂಕಿತರಲ್ಲಿ 194 ಮಂದಿ ಸಾವಿಗೀಡಾಗಿರುವುದು ಖಚಿತಪಟ್ಟಿದೆ. ಮರಣ ಪ್ರಮಾಣ ದರ ಶೇ 1.75 ರಷ್ಟು ವರದಿಯಾಗಿದೆ. ಕೆಲ ಪ್ರಕರಣಗಳಲ್ಲಿ ವ್ಯಕ್ತಿ ಮೃತಪಟ್ಟ ಹಲವು ದಿನಗಳ ಬಳಿಕ ಕೋವಿಡ್ ಮರಣ ಎಂದು ದೃಢಪಡುತ್ತಿದೆ. ಮೇ 19, ಮೇ 20ಕ್ಕೆ ಮೃತಪಟ್ಟವರ ವಿವರವನ್ನು ಕೂಡ ಆರೋಗ್ಯ ಇಲಾಖೆಯು ಗುರುವಾರ ದೃಢಪಟ್ಟ ಮರಣ ಪ್ರಕರಣಗಳ ಪಟ್ಟಿಯಲ್ಲಿ ಸೇರಿಸಿದೆ. ಇದೇ ರೀತಿ, ಕೆಲ ದಿನಗಳಿಂದ ಬಹುತೇಕ ಪ್ರಕರಣಗಳಲ್ಲಿ 2 ದಿನಗಳಿಂದ ಒಂದು ತಿಂಗಳವರೆಗಿನ ಅಂತರ ಕೂಡ ಕಾಣಿಸಿಕೊಳ್ಳುತ್ತಿದೆ.

ಈವರೆಗೆ ಕೋವಿಡ್‌ಗೆ ಮೃತಪಟ್ಟವರ ಒಟ್ಟು ಸಂಖ್ಯೆ 32,485ಕ್ಕೆ ಏರಿಕೆಯಾಗಿದೆ. ರಾಜ್ಯದ 29 ಜಿಲ್ಲೆಗಳಲ್ಲಿ ಹೊಸದಾಗಿ ಮರಣ ಪ್ರಕರಣಗಳು ವರದಿಯಾಗಿವೆ. ಬೆಂಗಳೂರಿನಲ್ಲಿ 47 ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ. ಮೈಸೂರಿನಲ್ಲಿ 18 ಮಂದಿ, ಬೆಳಗಾವಿಯಲ್ಲಿ 12 ಮಂದಿ, ಹಾಸನದಲ್ಲಿ 10 ಮಂದಿ ಸಾವಿಗೀಡಾಗಿದ್ದಾರೆ. ಉಳಿದ ಜಿಲ್ಲೆಗಳಲ್ಲಿ 10 ಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ಮರಣ ಪ್ರಕರಣಗಳು ವರದಿಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.