ಬೆಂಗಳೂರು: ಕೋವಿಡ್–19 ಹಿನ್ನೆಲೆಯಲ್ಲಿ ಪ್ರತಿನಿತ್ಯವೂ ಮಾನವ ಹಕ್ಕುಗಳ ಉಲ್ಲಂಘನೆಗಳು ಆಗುತ್ತಿದ್ದರೂ ರಾಜ್ಯ ಮಾನವ ಹಕ್ಕುಗಳ ಆಯೋಗ ಮೂಕ ಪ್ರೇಕ್ಷಕನಂತೆ ಕುಳಿತಿದೆ ಎಂದು ಕಾಂಗ್ರೆನ್ ಹಿರಿಯ ನಾಯಕ ಎಚ್.ಕೆ.ಪಾಟೀಲ ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಸಂಬಂಧ ಅವರು ಆಯೋಗದ ಅಧ್ಯಕ್ಷರಿಗೆ ಪತ್ರ ಬರೆದು, ರೋಗಿಗಳಿಗೆ ಸಕಾಲದಲ್ಲಿ ಆಸ್ಪತ್ರೆಗೆ ಒಯ್ಯಲು ಸಾಧ್ಯವಾಗುತ್ತಿಲ್ಲ. ಆಂಬುಲೆನ್ಸ್ ವ್ಯವಸ್ಥೆ ಇಲ್ಲ, ಗೌರವಯುತ ಶವಸಂಸ್ಕಾರವೂ ನಡೆಯುತ್ತಿಲ್ಲ. ಸರ್ಕಾರ ಇವೆಲ್ಲವುಗಳನ್ನು ಉಲ್ಲಂಘಿಸುತ್ತಾ ಇದ್ದರೂ ಆಯೋಗ ಸುಮ್ಮನೆ ಕುಳಿತಿರುವುದು ಜನ ವಿರೋಧಿ ಕ್ರಮವಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಗಲು– ರಾತ್ರಿ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿದ್ದರೂ ಕಾನೂನು ಪ್ರಕಾರ ರಚನೆ ಆಗಿರುವ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ ಮೌನವಾಗಿ ಕೂರಬಹುದೇ ಎಂದು ಅವರು ಪ್ರಶ್ನಿಸಿದ್ದಾರೆ.
ಮಾನವ ಹಕ್ಕುಗಳ ಆಯೋಗಕ್ಕೆ ಹೈಕೋರ್ಟ್ ಮುಖ್ಯ ನ್ಯಾಯಾಧೀಶರ ಮಟ್ಟಕ್ಕೆ ಏರಿದ ವ್ಯಕ್ತಿ ಮತ್ತು ಇಬ್ಬರು ಶ್ರೇಷ್ಠ ವ್ಯಕ್ತಿಗಳನ್ನು ನೇಮಕ ಮಾಡಲಾಗುತ್ತದೆ. ಅವರಿಗೆ ಹಲವಾರು ಅಧಿಕಾರಗಳನ್ನೂ ನೀಡಲಾಗುತ್ತದೆ. ಇದರ ಉದ್ದೇಶ ಆಯೋಗ ಪಾದರಸದಂತೆ ಕೆಲಸ ಮಾಡಿ, ಮಾನವ ಹಕ್ಕುಗಳ ಉಲ್ಲಂಘನೆಯನ್ನು ತಡೆಯಬೇಕು. ಸರ್ಕಾರವನ್ನು ಎಚ್ಚರಿಸಬೇಕು ಮತ್ತು ಉಲ್ಲಂಘನೆಗೆ ಕಾರಣರಾದವರನ್ನು ಶಿಕ್ಷಿಸಬೇಕು. ಇದು ಆರೋಗದ ಮಹತ್ವದ ಕಾರ್ಯ. ಇದ್ಯಾವುದೂ ನಡೆಯುತ್ತಿಲ್ಲ ಎಂದು ಪಾಟೀಲ ಕಿಡಿ ಕಾರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.