ADVERTISEMENT

Covid Karnataka Update: ನಾಲ್ಕೂವರೆ ತಿಂಗಳಲ್ಲಿ ಕನಿಷ್ಠ ಕೋವಿಡ್ ಪ್ರಕರಣ

​ಪ್ರಜಾವಾಣಿ ವಾರ್ತೆ
Published 25 ಜುಲೈ 2021, 22:06 IST
Last Updated 25 ಜುಲೈ 2021, 22:06 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ರಾಜ್ಯದಲ್ಲಿ 1,001 ಮಂದಿ ಕೋವಿಡ್ ಪೀಡಿತರಾಗಿರುವುದು ಭಾನುವಾರ ದೃಢಪಟ್ಟಿದ್ದು, ಸೋಂಕು ದೃಢ ಪ್ರಮಾಣವು ಶೇ 0.68ಕ್ಕೆ ಇಳಿಕೆಯಾಗಿದೆ.

ನಾಲ್ಕೂವರೆ ತಿಂಗಳಲ್ಲಿ ವರದಿಯಾದ ಕನಿಷ್ಠ ಹೊಸ ಪ್ರಕರಣ ಹಾಗೂ ದೃಢ ಪ್ರಮಾಣ ಇದಾಗಿದೆ. ರಾಜ್ಯದಲ್ಲಿ ಮಾರ್ಚ್ ಎರಡನೇ ವಾರದ ಬಳಿಕ ಹೊಸ ಪ್ರಕರಣಗಳು ಸಾವಿರದ ಗಡಿ ದಾಟಿತ್ತು. ಕಳೆದ ಒಂದು ತಿಂಗಳಿನಿಂದ ಕೋವಿಡ್ ಇಳಿಮುಖ ಮಾಡಿದೆ. 13 ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಎರಡಂಕಿ ಹಾಗೂ 2 ಜಿಲ್ಲೆಗಳಲ್ಲಿ ಒಂದಂಕಿಯಲ್ಲಿದೆ. ರಾಯಚೂರು ಹಾಗೂ ಬಾಗಲಕೋಟೆಯಲ್ಲಿ ಹೊಸ ಪ್ರಕರಣ
ವರದಿಯಾಗಿಲ್ಲ.

ಬೆಂಗಳೂರಿನಲ್ಲಿ ಹೊಸಪ್ರಕರಣಗಳ ಸಂಖ್ಯೆ 165ಕ್ಕೆ ಇಳಿಕೆಯಾಗಿದ್ದು, ಈ ವರ್ಷ ವರದಿಯಾದ ಕನಿಷ್ಠ ಪ್ರಕರಣಗಳಾಗಿವೆ. ದಕ್ಷಿಣ ಕನ್ನಡದಲ್ಲಿ 115 ಹಾಗೂ ಉಡುಪಿಯಲ್ಲಿ 110 ಮಂದಿ ಕೋವಿಡ್ ಪೀಡಿತರಾಗಿದ್ದಾರೆ. ಉಳಿದ ಜಿಲ್ಲೆಗಳಲ್ಲಿ ಹೊಸ ‍ಪ್ರಕರಣಗಳು 100ರ ಗಡಿಯೊಳಗೆ ವರದಿಯಾಗಿವೆ. ಈವರೆಗೆ ಕೋವಿಡ್ ಪೀಡಿತರಾದವರ ಒಟ್ಟು ಸಂಖ್ಯೆ 28.94 ಲಕ್ಷ ದಾಟಿದೆ.

ADVERTISEMENT

ಕೋವಿಡ್ ಪೀಡಿತರಲ್ಲಿ 22 ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ. 15 ಜಿಲ್ಲೆಗಳಲ್ಲಿ ಹೊಸದಾಗಿ ಮರಣ ಪ್ರಕರಣಗಳು ವರದಿಯಾಗಿವೆ. ಬೆಂಗಳೂರಿನಲ್ಲಿ 3, ಮೈಸೂರು, ಕೋಲಾರ, ಹಾವೇರಿ, ಹಾಸನ ಹಾಗೂ ಬೆಳಗಾವಿಯಲ್ಲಿ ತಲಾ ಇಬ್ಬರು ಸಾವಿಗೀಡಾಗಿದ್ದಾರೆ. ಉಳಿದ ಜಿಲ್ಲೆಗಳಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಮರಣ ಪ್ರಮಾಣ ದರವು ಶೇ 2.19ರಷ್ಟು ವರದಿಯಾಗಿದೆ. ಈವರೆಗೆ ಕೋವಿಡ್‌ನಿಂದ ಸಾವಿಗೀಡಾದವರ ಒಟ್ಟು ಸಂಖ್ಯೆ 36,374ಕ್ಕೆ ಏರಿಕೆಯಾಗಿದೆ.

ಸೋಂಕಿತರಲ್ಲಿ 1,465 ಮಂದಿ ಚೇತರಿಸಿಕೊಂಡಿದ್ದಾರೆ. ಈವರೆಗೆ ಗುಣಮುಖರಾದವರ ಒಟ್ಟು ಸಂಖ್ಯೆ 28.34 ಲಕ್ಷ ದಾಟಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ ಮತ್ತಷ್ಟು ಇಳಿಕೆ ಕಂಡಿದ್ದು, ಸದ್ಯ 23,419 ಮಂದಿ ಆಸ್ಪತ್ರೆ ಸೇರಿದಂತೆ ವಿವಿಧೆಡೆ ಚಿಕಿತ್ಸೆಪಡೆದುಕೊಳ್ಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.