ADVERTISEMENT

ವಿದೇಶದಿಂದ ಕರ್ನಾಟಕಕ್ಕೆ ಬರುವವರಿಗೆಲ್ಲ ಕೋವಿಡ್‌ ಪರೀಕ್ಷೆ: ಕೆ.ಸುಧಾಕರ್‌

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2021, 20:07 IST
Last Updated 30 ನವೆಂಬರ್ 2021, 20:07 IST
ಸಚಿವ ಡಾ.ಕೆ.ಸುಧಾಕರ್
ಸಚಿವ ಡಾ.ಕೆ.ಸುಧಾಕರ್   

ಬೆಂಗಳೂರು: ವಿದೇಶಗಳಿಂದ ರಾಜ್ಯಕ್ಕೆ ಬರುವ ಎಲ್ಲರಿಗೂ ಆರ್‌ಟಿ–ಪಿಸಿಆರ್‌ ವಿಧಾನದಲ್ಲಿ ಕೊರೊನಾ ಸೋಂಕು ಪತ್ತೆ ಪರೀಕ್ಷೆ ನಡೆಸಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದರು.

ಕೋವಿಡ್‌ ನಿಯಂತ್ರಣಕ್ಕೆ ಸಂಬಂಧಿಸಿದಂತೆ ತಜ್ಞರ ಜತೆ ಮಂಗಳವಾರ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವಿದೇಶಗಳಿಂದ ಪ್ರತಿದಿನ 2,500 ಜನರು ಬರುತ್ತಿದ್ದಾರೆ. ಓಮೈಕ್ರಾನ್‌ ತಳಿಯ ವೈರಾಣು ಪತ್ತೆಯಾಗಿರುವ ದೇಶಗಳಿಂದ ಬರುವವರಿಗೆ ಮಾತ್ರ ಆರ್‌ಟಿ–ಪಿಸಿಆರ್‌ ಪರೀಕ್ಷೆ ನಡೆಸಲಾಗುತ್ತಿತ್ತು. ಆದರೆ, ವಿದೇಶಗಳಿಂದ ಬರುವ ಎಲ್ಲರಿಗೂ ಆರ್‌ಟಿ–ಪಿಸಿಆರ್‌ ವಿಧಾನದಲ್ಲಿ ಪರೀಕ್ಷೆ ಮಾಡುವಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ’ ಎಂದರು.

ವಿದೇಶಗಳಿಂದ ಬರುವ ಎಲ್ಲರಿಗೂ ಆರ್‌ಟಿ–ಪಿಸಿಆರ್‌ ಪರೀಕ್ಷೆ ನಡೆಸುವ ವಿಷಯದಲ್ಲಿ ಇನ್ನೂ ಸ್ಪಷ್ಟತೆ ಇಲ್ಲ. ಕೇಂದ್ರ ಆರೋಗ್ಯ ಸಚಿವಾಲಯ ಹೊರಡಿಸಿರುವ ಮಾರ್ಗಸೂಚಿ ಪಾಲಿಸಲು ಆರೋಗ್ಯ ಇಲಾಖೆ ಸಿದ್ಧತೆ ಮಾಡಿಕೊಂಡಿದೆ ಎಂಬ ಮಾಹಿತಿ ಲಭಿಸಿದೆ.

ADVERTISEMENT

ಪರೀಕ್ಷೆ ನಂತರ ಮುಂದೇನು?

* ಕೋವಿಡ್‌ ದೃಢಪಟ್ಟ ಎಲ್ಲರನ್ನೂ ಕ್ವಾರಂಟೈನ್‌ ಕೇಂದ್ರಕ್ಕೆ ಸ್ಥಳಾಂತರ

* ರೋಗಲಕ್ಷಣ ಇರುವವರನ್ನು ಪ್ರತ್ಯೇಕಿಸಿ ಚಿಕಿತ್ಸೆ

*ರೋಗಲಕ್ಷಣ ಇಲ್ಲದೆಯೂ ಕೋವಿಡ್‌ ದೃಢಪಟ್ಟವರಿಗೆ ಕ್ವಾರಂಟೈನ್‌ ಕೇಂದ್ರದಲ್ಲಿ ಏಳು ದಿನಗಳ ವಾಸ

*ರೋಗಲಕ್ಷಣ ಇಲ್ಲದವರಿಗೆ ಏಳನೇ ದಿನ ಮತ್ತೆ ಪರೀಕ್ಷೆ, ನೆಗೆಟಿವ್ ಬಂದಲ್ಲಿ ಬಿಡುಗಡೆ

* ನೆಗೆಟಿವ್‌ ವರದಿ ಬಂದಲ್ಲಿ ಮನೆಯಲ್ಲೇ ಏಳು ದಿನಗಳ ಕ್ವಾರಂಟೈನ್‌ ಕಡ್ಡಾಯ

ಹೊಸ ಘಟಕ ಅಳವಡಿಕೆಗೆ ಸಿದ್ಧತೆ:

*ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸದ್ಯ ಒಂದು ಆರ್‌ಟಿ–ಪಿಸಿಆರ್‌ ಪರೀಕ್ಷಾ ಪ್ರಯೋಗಾಲಯವಿದ್ದು, ನಾಲ್ಕು ಗಂಟೆಗಳಲ್ಲಿ ವರದಿ ನೀಡಲಾಗುತ್ತಿದೆ. ಒಂದು ಗಂಟೆಯಲ್ಲೇ ವರದಿ ನೀಡಲು ಸಾಧ್ಯವಾಗುವಂತಹ ಸುಧಾರಿತ ಪ್ರಯೋಗಾಲಯ ಸ್ಥಾಪಿಸಲು ಸಿದ್ಧತೆ ನಡೆದಿದೆ

* ತ್ವರಿತವಾಗಿ ವರದಿ ಪಡೆಯಲು ಪ್ರತಿ ಪ್ರಯಾಣಿಕರು ₹ 3,000 ಪರೀಕ್ಷಾ ಶುಲ್ಕ ಪಾವತಿಸಬೇಕಾಗುತ್ತದೆ

*ಬೆಂಗಳೂರಿನಲ್ಲಿ ಬೌರಿಂಗ್‌ ಆಸ್ಪತ್ರೆ ಹಾಗೂ ಮಂಗಳೂರಿನಲ್ಲಿ ವೆನ್ಲಾಕ್‌ ಆಸ್ಪತ್ರೆ, ಮತ್ತು ಶಿವಭಾಗ್‌ನ ಇಎಸ್‌ಐ ಆಸ್ಪತ್ರೆಗಳನ್ನು ಕ್ವಾರಂಟೈನ್‌ ಕೇಂದ್ರಗಳನ್ನಾಗಿ ಗುರುತಿಸಲಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.