ADVERTISEMENT

ಕೋವಿಡ್ ಕೆಲಸಕ್ಕೆ ಕೈಕೊಟ್ಟ ವೈದ್ಯರ ಲೈಸನ್ಸ್ ಅಮಾನತು: ಡಿಸಿಎಂ ಅಶ್ವತ್ಥನಾರಾಯಣ

ಪಲಾಯನ ಮಾಡಿದ ನರ್ಸ್‌ಗಳು, ಪೂರಕ ಸಿಬ್ಬಂದಿಗೂ ಶಾಸ್ತಿ 

​ಪ್ರಜಾವಾಣಿ ವಾರ್ತೆ
Published 16 ಜುಲೈ 2020, 6:16 IST
Last Updated 16 ಜುಲೈ 2020, 6:16 IST
ಡಾ. ಸಿ.ಎನ್. ಅಶ್ವತ್ಥನಾರಾಯಣ
ಡಾ. ಸಿ.ಎನ್. ಅಶ್ವತ್ಥನಾರಾಯಣ   

ಬೆಂಗಳೂರು: ಜಗತ್ತಿನ ಪ್ರತಿಷ್ಟಿತ ನಗರಗಳಲ್ಲಿ ಒಂದಾದ ಬೆಂಗಳೂರಿನಲ್ಲಿಯೇ ಕೋವಿಡ್-19 ಸೋಂಕಿತರಿಗೆ ಚಿಕಿತ್ಸೆ ನೀಡಲು ವೈದ್ಯರ ಕೊರತೆ ಉಂಟಾಗಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ, ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಕೆಲಸ ಮಾಡದೇ ತಪ್ಪಿಸಿಕೊಂಡಿರುವ ವೈದ್ಯರು ಮತ್ತು ನರ್ಸ್‌ಗಳ ಲೈಸೆನ್ಸ್ ಮತ್ತು ನೋಂದಣಿಯನ್ನು ಅಮಾನತು ಮಾಡುವುದಾಗಿ ಎಚ್ಚರಿಕೆ ನೀಡಿದರು.

ಕೆಲಸದಿಂದ ಪಲಾಯನ ಮಾಡಿರುವ ವೈದ್ಯರು ಜತೆಗೆ ನರ್ಸುಗಳನ್ನು ಗುರುತಿಸಿ ಅವರನ್ನು ಕೂಡಲೇ ವೃತ್ತಿಯಿಂದ ಬಿಡುಗಡೆ ಮಾಡಲು ಈಗಾಗಲೇ ಸರ್ಕಾರವು ಮೆಡಿಕಲ್ ಕೌನ್ಸಿಲ್ ಹಾಗೂ ನರ್ಸಿಂಗ್ ಕೌನ್ಸಿಲ್’ಗೆ ಕರಾರುವಕ್ಕಾದ ಸೂಚನೆ ನೀಡಿದೆ ಎಂದು ಅವರು ತಿಳಿದರು.

ಬೆಂಗಳೂರಿನ ಕೋವಿಡ್ ಕೇಂದ್ರಗಳ ಉಸ್ತುವಾರಿಯೂ ಆಗಿರುವ ಡಿಸಿಎಂ ಅವರು, ನಗರದಲ್ಲಿ ಬುಧವಾರದಂದು ಕೋವಿಡ್ ಕೇರ್ ಕೇಂದ್ರಗಳ ವ್ಯವಸ್ಥೆ, ಅವುಗಳ ವಿವಿಧ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಜತೆ ಮಹತ್ವದ ಸಭೆ ನಡೆಸಿದರು.

ADVERTISEMENT

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇದು ಸೋಂಕಿನ ಕಾಯಿಲೆ. ವ್ಯಾಪಕವಾಗಿ ಹರಡುತ್ತಿದೆ. ಹೀಗಾಗಿ ಸಮರೋಪಾದಿಯಲ್ಲಿ ಚಿಕಿತ್ಸೆ ನೀಡಬೇಕಾದ ಹೊಣೆಗಾರಿಕೆ ವೈದ್ಯರ ಮೇಲಿದೆ. ನಿಯಂತ್ರಣಕ್ಕಾಗಿ ಹರಸಾಹಸ ಮಾಡುತ್ತಿರುವ ವೇಳೆಯಲ್ಲಿ ನಿರ್ಲಕ್ಷ್ಯ ಧೋರಣೆ ತಾಳಿರುವುದು ಅಮಾನವೀಯ. ಮುಂದೆ ಪರಿಸ್ಥಿತಿ ಕೈಮೀರಿ ಹೋಗಲಿದೆ ಎಂಬ ಪರಿಜ್ಞಾನವೂ ಇಲ್ಲದಿದ್ದರೆ ಹೇಗೆ? ಎಂದು ಡಿಸಿಎಂ ಬೇಸರ ವ್ಯಕ್ತಪಡಿಸಿದರು.

ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಈ ಕ್ಲಿಷ್ಟ ಸಮಯದಲ್ಲಿ ಖಾಸಗಿ ವೈದ್ಯರು ಹೆದರಿ ಹಿಂದೆ ಸರಿಯುತ್ತಿರುವುದು ಸರಿಯಲ್ಲ. ಯುದ್ಧದ ಪರಿಸ್ಥಿತಿ ರಾಜ್ಯದಲ್ಲಿ ತಲೆದೋರಿದ್ದು, ಸೇವಾ ಮನೋಭಾವದಿಂದ ಕೆಲಸ ಮಾಡಬೇಕಾಗಿದೆ. ಸರಕಾರ ಎಲ್ಲ ರೀತಿಯ ರಕ್ಷಣೆ ನೀಡುತ್ತಿದೆ. ಅದುಬಿಟ್ಟು ವೃತ್ತಿಗೆ ದ್ರೋಹ ಬಗೆದು ಸೋಂಕಿತರನ್ನು ನಡುನೀರಿನಲ್ಲಿ ಬಿಟ್ಟು ಪಲಾಯನ ಮಾಡುವುದು ತಪ್ಪು. ಇದನ್ನು ಸರಕಾರ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಕೂಡಲೇ ಸೇವೆಗೆ ಹಾಜರಾಗದ ವೈದ್ಯರು, ನರ್ಸುಗಳು ಹಾಗೂ ಪೂರಕ ಸಿಬ್ಬಂದಿಯ ಹೆಸರುಗಳ ಸಮೇತ ಪ್ರಕಟಿಸಲಾಗುವುದು. ಎಂದು ಅವರು ಖಡಕ್ ವಾರ್ನಿಂಗ್ ಕೊಟ್ಟರು.

ಕೊರತೆ ಎಷ್ಟು?:ಪ್ರಸ್ತುತ ಬೆಂಗಳೂರು ನಗರದ ಕೋವಿಡ್ ಕೇರ್ ಕೇಂದ್ರಗಳಲ್ಲಿ 2,624 ಹಾಸಿಗೆಗಳಿದ್ದು, ಅಲ್ಲಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕೇಂದ್ರಗಳಿಗೆ ಒಟ್ಟಾರೆ 86 ವೈದ್ಯರ ಅಗತ್ಯವಿದ್ದರೆ, 61 ವೈದ್ಯರು ಮಾತ್ರ ನಮಗೆ ಲಭ್ಯವಿದ್ದಾರೆ. ಇನ್ನು 134 ನರ್ಸುಗಳು ನಮಗೆ ಅಗತ್ಯವಿದ್ದು, ಕೇವಲ 54 ಜನ ಲಭ್ಯರಿದ್ದಾರೆ. 80 ನರ್ಸುಗಳ ಕೊರತೆ ಇದೆ. ಇದು ನಿಜಕ್ಕೂ ಕಳವಳಕಾರಿ. ಬಾಕಿವರೆಲ್ಲ ಕೆಲಸಕ್ಕೆ ಬಾರದೆ ತಪ್ಪಿಸಿಕೊಂಡಿರುವ ಕಾರಣ ಕೆಲಸ ಮಾಡುತ್ತಿರುವವರಿಗೆ ತೀವ್ರ ಒತ್ತಡ ಉಂಟಾಗುತ್ತಿದೆ. ರೋಗಿಗಳಿಗೂ ತುಂಬಾ ಕಷ್ಟವಾಗುತ್ತಿದೆ ಎಂದು ಉಪ ಮುಖ್ಯಮಂತ್ರಿ ಮಾಹಿತಿ ನೀಡಿದರು.

ಸೌಲಭ್ಯಗಳ ಬಗ್ಗೆ ತೀವ್ರ ನಿಗಾ:

ಪ್ರತಿ ಕೋವಿಡ್ ಸೆಂಟರ್ನಲ್ಲಿಯೂ ತುರ್ತು ನಿಗಾ ಘಟಕವನ್ನು ಸ್ಥಾಪಿಸಲಾಗಿದೆ. ಒಟ್ಟಾರೆ ನಗರದಲ್ಲಿರುವ ಹಾಸಿಗೆಗಳ ಪೈಕಿ ಶೇ.5ರಷ್ಟು ಹಾಸಿಗೆಗಳಿಗೆ ಆಮ್ಲಜನಕದ ವ್ಯವಸ್ಥೆ ಮಾಡಲಾಗುವುದು. 24/7 ಆಂಬುಲೆನ್ಸ್, ಪೂರಕ ಸಿಬ್ಬಂದಿ, ವೈದ್ಯರು ಮತ್ತು ನರ್ಸುಗಳು ಸಜ್ಜಾಗಿರುವ ಹಾಗೆ ನೋಡಿಕೊಳ್ಳಲಾಗುತ್ತಿದೆ. ಎಂತಹ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿರುವ ರೋಗಿ ಬಂದರೂ ಚಿಕಿತ್ಸೆ ನೀಡುವಂತಹ ಆಧುನಿಕ ಸೌಲಭ್ಯವನ್ನು ಮಾಡಲಾಗಿದೆ. ನಾನು ಮತ್ತು ನಮ್ಮ ಅಧಿಕಾರಿಗಳು ನಿರಂತರವಾಗಿ ಗಮನ ಕೊಟ್ಟು ಕೆಲಸ ಮಾಡುತ್ತಿದ್ದೇವೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.

ಈ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರತಿ 100 ರೋಗಿಗಳಿಗೆ ಒಬ್ಬ ವೈದ್ಯರು, ಇಬ್ಬರು ನರ್ಸುಗಳ ಅಗತ್ಯವಿದೆ. ವೈದ್ಯಕೀಯ ಶಿಕ್ಷಣ ಇಲಾಖೆ ಈ ಸಿಬ್ಬಂದಿಯನ್ನು ಒದಗಿಸಬೇಕು. ಇನ್ನು, ಔಷಧಿ, ಪಿಪಿಎ ಕಿಟ್ಟುಗಳು, ಎನ್-95 ಮಾಸ್ಕುಗಳು, ಫಲ್ಸಾಕ್ಸಿ ಮೀಟರ್ ಮತ್ತಿತರೆ ಪರಿಕರಗಳನ್ನು ಸಕಾಲಕ್ಕೆ ಒದಗಿಸುವಂತೆ ಆರೋಗ್ಯ ಇಲಾಖೆಯನ್ನು ಕೋರಲಾಗಿದೆ. ಇದರ ಜತೆಗೆ, ಈ ಕೇಂದ್ರಗಳಲ್ಲಿ ಬಯೋಮೆಡಿಕಲ್ ವೇಸ್ಟ್ ವಿಲೇವಾರಿ, ಊಟ, ಹೌಸ್ ಕೀಪಿಂಗ್ ಮತ್ತಿತರೆ ವಿಷಯಗಳ ಬಗ್ಗೆ ಸಂಬಂಧಪಟ್ಟ ಎಲ್ಲ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಒಂದು ಸಣ್ಣ ಅನಾನುಕೂಲ ಆಗದಂತೆ ಕಟ್ಟೆಚ್ಚರ ವಹಿಸಲಾಗಿದೆ ಎಂದು ಡಿಸಿಎಂ ವಿವರಿಸಿದರು.

ಕೋವಿಡ್ ಕೇಂದ್ರಗಳಿಗೆ ನಿರಂತರ ವಿದ್ಯುತ್ ಮತ್ತು ‌ನೀರು ಸರಬರಾಜಿನ ವ್ಯವಸ್ಥೆ ಮಾಡಬೇಕು ಎಂದೂ ಅವರು ತಿಳಿಸಿದರು.

ಸಭೆಯಲ್ಲಿ ಕೋವಿಡ್ ಉಸ್ತುವಾರಿ ಕೇಂದ್ರಗಳ ಅಧಿಕಾರಿ ರಾಜೇಂದ್ರ ಕುಮಾರ್ ಕಟಾರಿಯಾ, ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್, ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕ ಡಾ.ಗಿರೀಶ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.