ADVERTISEMENT

ಕೊರೊನಾ: ಖಾಸಗಿ ಆಸ್ಪತ್ರೆಗಳಿಗೆ ನಿರ್ದೇಶನ ನೀಡಲು ಸರ್ಕಾರಕ್ಕೆ ಹೈಕೋರ್ಟ್ ಆದೇಶ

‘ಹಾಸಿಗೆ ಭರ್ತಿ ನೆಪ ಹೇಳಬಾರದು’

​ಪ್ರಜಾವಾಣಿ ವಾರ್ತೆ
Published 20 ಜುಲೈ 2020, 20:02 IST
Last Updated 20 ಜುಲೈ 2020, 20:02 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ‘ಹಣ ಪಾವತಿಸಲು ಸೋಂಕಿತರು ಒಪ್ಪಿದರೂ ಕೋವಿಡ್‌ ಸೋಂಕಿತರಿಗೆ ಕಾಯ್ದಿರಿಸಿದ ಹಾಸಿಗೆಗಳು ಭರ್ತಿಯಾಗಿವೆ ಎಂಬ ನೆಪ ಹೇಳಿ ವಾಪಸ್ ಕಳುಹಿಸಬಾರದು ಎಂಬ ನಿರ್ದೇಶನವನ್ನು ಖಾಸಗಿ ಆಸ್ಪತ್ರೆಗಳಿಗೆ ನೀಡಬೇಕು’ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಆದೇಶಿಸಿದೆ.

ಕೋವಿಡ್ ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಮತ್ತು ನ್ಯಾಯಮೂರ್ತಿ ಅಲೋಕ್ ಆರಧೆ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿತು.

‘ಖಾಸಗಿ ಆಸ್ಪತ್ರೆಗಳಲ್ಲಿ ಶೇ 50ರಷ್ಟು ಹಾಸಿಗೆಗಳನ್ನು ಕೋವಿಡ್ ಸೋಂಕಿತರಿಗೆ ಕಾಯ್ದಿರಿಸಲು ಸರ್ಕಾರ ನಿರ್ದೇಶನ ನೀಡಿದೆ’ ಎಂದು ಹೆಚ್ಚುವರಿ ಅಡ್ವೊಕೇಟ್ ಜನರಲ್ ವಿಚಾರಣೆ ವೇಳೆ ತಿಳಿಸಿದರು.

ADVERTISEMENT

‘ಕಾಯ್ದಿರಿಸಿದ ಹಾಸಿಗೆಗಳು ಭರ್ತಿಯಾಗಿದ್ದರೂ ಹಣ ಪಾವತಿಸುವವರಿಗೆ ಬೇರೆ ವ್ಯವಸ್ಥೆ ಮಾಡಬೇಕು. ಪ್ರಯೋಗಾಲಯದ ವರದಿ ಬರುವ ತನಕ ದಾಖಲಿಸಿಕೊಳ್ಳುವುದಿಲ್ಲ ಎಂದೂ ವಾಪಸ್ ಕಳಹಿಸಬಾರದು. ಸೋಂಕು ದೃಢಪಟ್ಟಿರುವುದಕ್ಕೆ ಸಂಬಂಧಿಸಿದ ಸ್‌ಎಂಎಸ್ ಅಥವಾ ಆರೋಗ್ಯ ಸೇತು ಆ್ಯಪ್‌ನಲ್ಲಿನ ಮಾಹಿತಿ ಆಧರಿಸಿಯೂ ದಾಖಲು ಮಾಡಿಕೊಳ್ಳಬೇಕು ಎಂಬ ನಿರ್ದೇಶನವನ್ನು ಸರ್ಕಾರ ನೀಡಬೇಕು. ಸೋಂಕಿತರನ್ನು ಕರೆ ತರಲು ಅವರ ಮನೆಗೆ ಬಿಬಿಎಂಪಿ ಸಿಬ್ಬಂದಿ ಹೋಗುವಷ್ಟರಲ್ಲೇ ಆಸ್ಪತ್ರೆ ಹುಡುಕುವ ವ್ಯವಸ್ಥೆ ಆಗಬೇಕು’ ಎಂದು ಪೀಠ ತಿಳಿಸಿತು.

‘ಸೋಂಕಿತರಲ್ಲದ ರೋಗಿಗಳನ್ನು ದಾಖಲು ಮಾಡಿಕೊಳ್ಳಲು ಸೋಂಕಿಲ್ಲ ಎಂಬದರ ವರದಿ ಕೇಳಬಾರದು. ಎಸ್‌ಎಂಎಸ್‌ ಇದ್ದರೆ ಸಾಕು ಅವರನ್ನು ದಾಖಲಿಸಿಕೊಳ್ಳಬಹುದು’ ಎಂದು ಹೇಳಿತು.

‘ಪರೀಕ್ಷಾ ವರದಿ ಬರುವುದು ವಿಳಂಬ ಆಗುತ್ತಿರುವುದೂ ಸೋಂಕು ಹರಡಲು ಕಾರಣವಾಗುತ್ತಿದೆ. ಎಲ್ಲಾ ಮನೆಗಳಲ್ಲೂ ಪ್ರತ್ಯೇಕವಾಗಿ ಇರಲು ವ್ಯವಸ್ಥೆ ಇರುವುದಿಲ್ಲ. ಅಂತವರನ್ನು ಗುರುತಿಸಿ ಆಸ್ಪತ್ರೆಗಳಿಗೆ ಸ್ಥಳಾಂತರ ಮಾಡುಬೇಕು’ ಎಂದೂ ಪೀಠ ಅಭಿಪ್ರಾಯಪಟ್ಟಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.