ADVERTISEMENT

'3 ತಿಂಗಳೊಳಗೆ ಶೇ 80 ಜನರಿಗೆ ಲಸಿಕೆ ಹಾಕಬೇಕು'–ಡಿಕೆಶಿ ಸಲಹೆ

ಸರ್ಕಾರಕ್ಕೆ ತಾಕೀತು ಮಾಡಲು ರಾಜ್ಯಪಾಲರಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 4 ಜುಲೈ 2021, 9:16 IST
Last Updated 4 ಜುಲೈ 2021, 9:16 IST
ಕೋವಿಡ್‌ ಲಸಿಕೆ–ಸಾಂದರ್ಭಿಕ ಚಿತ್ರ
ಕೋವಿಡ್‌ ಲಸಿಕೆ–ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ಕೋವಿಡ್ ಮೂರನೇ ಅಲೆಯಿಂದ ಜನರನ್ನು ರಕ್ಷಿಸಲು ಸೆಪ್ಟೆಂಬರ್ ಅಂತ್ಯದೊಳಗೆ ರಾಜ್ಯದ ಶೇ 80 ಜನರಿಗೆ ಲಸಿಕೆ ಹಾಕುವ ಸವಾಲಿಗೆ ಸಿದ್ದಗೊಳ್ಳಬೇಕು’ ಎಂದು ಸರ್ಕಾರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಲಹೆ ನೀಡಿದರು.

‘ಮೂರು ತಿಂಗಳೊಳಗೆ ರಾಜ್ಯದ ಶೇ 80 ಮಂದಿಗೆ ಎರಡು ಡೋಸ್ ಲಸಿಕೆ ಹಾಕಿದರೆ ಕೋವಿಡ್‌ ಮೂರನೇ ಅಲೆಯಿಂದ ರಾಜ್ಯದ ರಕ್ಷಣೆ ಮಾಡಬಹುದು. ಈ ಬಗ್ಗೆ ಸರ್ಕಾರಕ್ಕೆ ತಾಕೀತು ಮಾಡಲು ಪಕ್ಷದ ವತಿಯಿಂದ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು’ ಎಂದು ಅವರು ತಿಳಿಸಿದರು

‘ಅಕ್ಟೋಬರ್‌ ತಿಂಗಳಲ್ಲಿ ಮೂರನೇ ಅಲೆ ತೀವ್ರವಾಗುವ ಸೂಚನೆಯನ್ನು ತಜ್ಞರು ನೀಡಿದ್ದಾರೆ. ಶೇ 80 ವಯಸ್ಕರಿಗೆ ಸೆಪ್ಟೆಂಬರ್ 30ರ ಒಳಗೆ ಎರಡು ಡೋಸ್ ಲಸಿಕೆ ನೀಡಿದರೆ ಮೂರನೇ ಅಲೆಯಿಂದ ರಕ್ಷಣೆ ಪಡೆಯಬಹುದು ಮತ್ತು ಅದರ ತೀವ್ರತೆ ತಡೆಯಬಹುದು’ ಎಂದಿದ್ದಾರೆ.

ADVERTISEMENT

‘ಕೋವಿಡ್‌ನಿಂದ ಪೂರ್ಣ ರಕ್ಷಣೆ ಸಾಧ್ಯವಾಗಲು ಎರಡೂ ಡೋಸ್ ಪಡೆದಿರಬೇಕು ಎಂಬುದು ಅಧ್ಯಯನದಿಂದ ಸಾಬೀತಾಗಿದೆ. ಹೀಗಾಗಿ ಸೆಪ್ಟೆಂಬರ್‌ ಅಂತ್ಯದೊಳಗೆ ಶೇ 80 ವಯಸ್ಕರಿಗೆ ಎರಡೂ ಡೋಸ್ ಹಾಕುವ ಹೊಣೆಗಾರಿಕೆಯನ್ನು ಸರ್ಕಾರ ನಿರ್ವಹಿಸಲೇಬೇಕು. ಈ ಸವಾಲಿನಲ್ಲಿ ವಿಫಲವಾದರೆ, ಮೂರನೇ ಅಲೆಯ ಪರಿಣಾಮಗಳಿಗೆ ಸರ್ಕಾರವೇ ಜವಾಬ್ದಾರಿ ಆಗಬೇಕಾಗುತ್ತದೆ’ ಎಂದು ಅವರು ಎಚ್ಚರಿಕೆ ನೀಡಿದರು.

‘ಈ ಸವಾಲು ಅಸಾಧ್ಯವಾದುದೇನೂ ಅಲ್ಲ. ವಿದೇಶಗಳಿಗೆ ಲಸಿಕೆ ಕಳುಹಿಸುವುದನ್ನು ತಗ್ಗಿಸಿ ನಮ್ಮ ಜನರಿಗೆ ಲಸಿಕೆ ಮಾಡಲು ಒತ್ತು ಕೊಡಬೇಕು. ಬಿಜೆಪಿ ನಾಯಕರು ಲಸಿಕೆ ನೀಡಿಕೆಯಲ್ಲೂ ಅಪರ- ತಪರಾ ಮಾಡುವುದನ್ನು ನಿಲ್ಲಿಸಿ, ಎಲ್ಲರಿಗೂ ಲಸಿಕೆ ಹಾಕಿಸಿ ಜನರನ್ನು ರಕ್ಷಿಸುವ ಕೆಲಸಕ್ಕೆ ಮುಂದಾಗಬೇಕು’ ಎಂದರು.

‘ಕೇಂದ್ರದಲ್ಲಿ ಅವರದೇ ಪಕ್ಷದ ಸರ್ಕಾರ ಇದ್ದರೂ ರಾಜ್ಯ ಬಿಜೆಪಿ ಸರ್ಕಾರಕ್ಕೆ ಅವಶ್ಯಕ ಪ್ರಮಾಣದ ಲಸಿಕೆ ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಲಸಿಕೆ ಬಗ್ಗೆ ಒಂದು ದಿನದ ಅಬ್ಬರದ ಪ್ರಚಾರ ಪಡೆದು ಸರ್ಕಾರ ಸುಮ್ಮನಾದರೆ ಹೇಗೆ ? ಲಸಿಕೆ ಹಾಕುವ ಪ್ರಮಾಣ ಕಡಿಮೆಯಾಗಿದೆ. ಲಸಿಕೆ ಹಾಕುವಲ್ಲಿ ಉತ್ತರ ಕರ್ನಾಟಕದ ಜನರನ್ನು ಮಲತಾಯಿ ಮಕ್ಕಳಂತೆ ನೋಡಲಾಗುತ್ತಿದೆ. ಬೆಂಗಳೂರು ನಗರದಲ್ಲೂ ಲಸಿಕೆ ದಾಸ್ತಾನು ಕೊರತೆಯಿದೆ. ಜನ ಲಸಿಕೆಗಾಗಿ ಸರದಿಯಲ್ಲಿ ನಿಲ್ಲುವುದು ತಪ್ಪಿಲ್ಲ. ಅವಶ್ಯಕ ಪ್ರಮಾಣದಲ್ಲಿ ಲಸಿಕೆ ಪೂರೈಕೆ ಆಗಿಲ್ಲವಾದ ಕಾರಣ ದಿಲ್ಲಿಗೆ ಹೋಗುವುದಾಗಿ ಆರೋಗ್ಯ ಸಚಿವರು ಹೇಳುತ್ತಿದ್ದಾರೆ. ಈ ಸರ್ಕಾರ ಈಗಲಾದರೂ ಎಚ್ಚೆತ್ತು ಬದ್ದತೆಯಿಂದ ಕೆಲಸ ಮಾಡುತ್ತಾ ನೋಡೋಣ'' ಎಂದರು.

‘ಡೆಲ್ಟಾ ರೂಪಾಂತರಿ ವೈರಾಣು ವಿರುದ್ದ ರಕ್ಷಣೆಗಾಗಿ ಕೋವಿಶೀಲ್ಡ್ ಎರಡನೇ ಲಸಿಕೆಯನ್ನು ಎಂಟು ವಾರಗಳೊಳಗೆ ಕೊಡಬೇಕು. ಅದಕ್ಕಾಗಿ ಸರ್ಕಾರ ಮಾರ್ಗಸೂಚಿಯಲ್ಲಿ ಸೂಕ್ತ ಬದಲಾವಣೆ ಮಾಡಿಕೊಳ್ಳಲಿ’ ಎಂದು ಸಲಹೆ ಮಾಡಿದರು.

‘ಕಾಂಗ್ರೆಸ್ ಪಕ್ಷದ ನಾಯಕರು ಸ್ವಂತ ಖರ್ಚಿನಲ್ಲಿ ಲಸಿಕೆ ಶಿಬಿರಗಳನ್ನು ನಡೆಸಿ, 1 ಲಕ್ಷ ಮಂದಿಗೆ ಉಚಿತವಾಗಿ ಲಸಿಕೆ ಹಾಕಿಸಿದ್ದಾರೆ. ಉತ್ಪಾದಕರಿಂದ ನೇರವಾಗಿ ಲಸಿಕೆ ಖರೀದಿಸಲು ಅನುಮತಿ ಕೇಳಿದರೂ ಸರ್ಕಾರ ಕೊಡಲಿಲ್ಲ. ಈ ಉದ್ದೇಶಕ್ಕೆ ಶಾಸಕರ ನಿಧಿ ಬಳಸುವ ಸದಾಶಯಕ್ಕೆ ಸರ್ಕಾರ ಸಮ್ಮತಿಸಲಿಲ್ಲ. ನಮ್ಮ ಸಹಾಯ ಅಗತ್ಯವಿಲ್ಲ ಎಂದರೆ ತೊಂದರೆ ಇಲ್ಲ. ಕಾಲಮಿತಿಯಲ್ಲಿ ಸರ್ಕಾರ ತ್ವರಿತವಾಗಿ ಎಲ್ಲರಿಗೂ ಲಸಿಕೆ ಹಾಕಲಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.