ಸುಂಟಿಕೊಪ್ಪ: ಜಿಲ್ಲಾಡಳಿತ ಸಾರ್ವಜನಿಕರ ಅನುಕೂಲಕ್ಕಾಗಿ ಶುಕ್ರವಾರ ಬೆಳಿಗ್ಗೆ 6ರಿಂದ ಮಧ್ಯಾಹ್ನ 12ರವರೆಗೆ ಕರ್ಫ್ಯೂ ಸಡಿಲಿಕೆ ಮಾಡಿ ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳಲು ಅವಕಾಶ ಕಲ್ಪಿಸಿತ್ತು. ಆದರೆ ಪಟ್ಟಣದ ಜನರು ಹೊರತು ಪಡಿಸಿ ಹೋಬಳಿ ವ್ಯಾಪ್ತಿಯ ಗ್ರಾಮಗಳ ಜನ ಇತ್ತ ಆಗಮಿಸದೆ ಇರುವುದರಿಂದ ಜನದಟ್ಟಣೆ ಕಡಿಮೆಯಾಗಿತ್ತು. ಆದರೆ ವಾಹನ ಸಂಚಾರ ಮಾತ್ರ ದ್ವಿಗುಣವಾಗಿತ್ತು.
ಗ್ರಾಹಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಪೊಲೀಸ್ ಇಲಾಖೆ ಮತ್ತು ಗ್ರಾಮ ಪಂಚಾಯಿತಿಯು ವಾಹನ ಚಾಲಕರ ನಿಲ್ದಾಣದಲ್ಲಿ 5 ತರಕಾರಿ, 2 ದಿನಸಿ ಅಂಗಡಿಗೆ ನಡೆಸಲು ಅವಕಾಶ ಕಲ್ಪಿಸಿತ್ತು. ಆದರೆ ಹೆಚ್ಚಿನ ಜನ ಸೋಮವಾರವೇ ತಮಗೆ ಬೇಕಾದ ತರಕಾರಿ ಸೇರಿದಂತೆ ಅಗತ್ಯ ವಸ್ತುಗಳನ್ನು ಖರೀದಿಸಿದ್ದರಿಂದ ಶುಕ್ರವಾರ ಹೆಚ್ಚಿನ ಜನ ಕಂಡುಬಂದಿಲ್ಲ. ಇದರಿಂದಾಗಿ ವ್ಯಾಪಾರವಾಗದೇ ಉಳಿದ ತರಕಾರಿಗಳನ್ನು ವ್ಯಾಪಾರಿಗಳು ಗಂಟುಮೂಟೆ ಕಟ್ಟಿ ಮನೆಯತ್ತ ಹೆಜ್ಜೆ ಹಾಕಿದರು.
ಹಾಗೆಯೇ ದಿನಸಿ, ಕೋಳಿ, ಕುರಿ ಮಾಂಸದ ಅಂಗಡಿಗಳಲ್ಲೂ ಪಟ್ಟಣದ ಜನ ಮಾತ್ರ ಕಂಡುಬಂದರು. ಇದರಿಂದಾಗಿ ವಾಹನ ದಟ್ಟಣೆ ಹೆಚ್ಚಾಗಿತ್ತು. ಬಂದಂತಹ ಗ್ರಾಹಕರು ಅಂತರ ಕಾಯ್ದುಕೊಂಡರು.ಉಳಿದಂತೆ ಗ್ರಾಮ ಪಂಚಾಯಿತಿಯ ಪೌರ ಕಾರ್ಮಿಕರು, ಸಿಬ್ಬಂದಿಗಳು, ಬ್ಯಾಂಕುಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಪೊಲೀಸ್ ಇಲಾಖೆಯವರು, ಆರೋಗ್ಯ ಇಲಾಖೆಯವರು ಯಾವುದೇ ಗೊಂದಲ, ಭಯವಿಲ್ಲದ ತಮ್ಮ ಸೇವೆಯಲ್ಲಿ ತೊಡಗಿದ್ದರು.
ಮದ್ಯಾಹ್ನ 12 ಗಂಟೆಯಾಗುತ್ತಿದ್ದಂತೆ ಅಂಗಡಿಗಳ ಮಾಲೀಕರು ಸ್ವಪ್ರೇರಣೆಯಿಂದ ಮುಚ್ಚಿದರು. ಆನಂತರ ಪೊಲೀಸರನ್ನು ಹೊರತುಪಡಿಸಿ ಪಟ್ಟಣದಲ್ಲಿ ಯಾರೂ ಕಂಡುಬಂದಿಲ್ಲ. ಇದರಿಂದ ಇಡೀ ಪಟ್ಟಣ ಬಿಕೋ ಎನ್ನುತ್ತಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.