ADVERTISEMENT

ರಾಮನಗರ: ಅತ್ಯಾಚಾರ ಸಂತ್ರಸ್ತೆ ಜೊತೆ ಆಸ್ಪತ್ರೆಗಳಿಗೆ ಅಲೆದಿದ್ದ ಆರೋಪಿ!

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2023, 7:06 IST
Last Updated 26 ಮಾರ್ಚ್ 2023, 7:06 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ರಾಮನಗರ: ಕಗ್ಗಲೀಪುರ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದ ಬಾಲಕಿ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿ ವೆಂಕಟೇಶ್ ವಿರುದ್ಧ ಪೋಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ. ಆರೋಪಿಯೇ ಸಂತ್ರಸ್ತೆಯನ್ನು ಕರೆದುಕೊಂಡು ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ಅಲೆದಾಡಿದ್ದ ಸಂಗತಿಯೂ ಬೆಳಕಿಗೆ ಬಂದಿದೆ.

ಆರೋಪಿಯು ಪಿ.ಯು. ವಿದ್ಯಾರ್ಥಿನಿಯಾದ ಸಂತ್ರಸ್ಥೆಯನ್ನು ಪುಸಲಾಯಿಸಿ ಲೇಔಟ್‌ ಒಂದರ ಬಳಿ ಕರೆದುಕೊಂಡು ಹೋಗಿ ಹಲ್ಲೆ ನಡೆಸಿ, ಅತ್ಯಾಚಾರ ಎಸಗಿದ್ದ. ಇದರಿಂದ ಆಕೆ ತೀವ್ರ ರಕ್ತಸ್ರಾವಕ್ಕೆ ಒಳಗಾಗಿದ್ದಳು. ಇದರಿಂದ ಬೆದರಿದ ಆರೋಪಿಯು ಸಂತ್ರಸ್ಥೆಯ ತಂದೆಗೆ ಕರೆ ಮಾಡಿ, ನಿಮ್ಮ ಮಗಳು ಇದ್ದಕ್ಕಿದ್ದ ಹಾಗೇ ಅಸ್ತಸ್ಥಗೊಂಡಿದ್ದು, ಪ್ರಜ್ಞೆ ಸಹ ಇಲ್ಲ ಎಂದು ಕಥೆ ಕಟ್ಟಿದ್ದ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯುವಂತೆ ತಂದೆ ಮನವಿ ಮಾಡಿದ್ದರು. ನಂತರ ಆರೋಪಿಯು ಬಾಲಕಿಯನ್ನು ಅಗರ, ತಾತಗುಣಿ ಮೊದಲಾದ ಕಡೆಗಳಲ್ಲಿನ ಆಸ್ಪತ್ರೆಗೆ ಕರೆದೊಯ್ದಿದ್ದ. ಅಲ್ಲಿ ವೈದ್ಯರು ಸಿಕ್ಕಿರಲಿಲ್ಲ. ಬಯ್ಯನಪಾಳ್ಯದ ಖಾಸಗಿ ಆಸ್ಪತ್ರೆಯೊಂದಕ್ಕೆ ಕರೆದೊಯ್ದ ವೇಳೆ, ಸಂತ್ರಸ್ಥೆಯನ್ನು ಪರೀಕ್ಷಿಸಿದ್ದ ವೈದ್ಯರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದ್ದರು.

ಅಷ್ಟರಲ್ಲಿ ಸಂತ್ರಸ್ತೆಯ ತಾಯಿ ಸಹ ಬಂದಿದ್ದು, ಆಕೆಯನ್ನು ಆಂಬುಲೆನ್ಸ್ ಮೂಲಕ ಕೋಣನಕುಂಟೆ ಆಸ್ಪತ್ರೆಗೆ ಒಯ್ದಿದ್ದರು. ಅಲ್ಲಿ ಸರ್ಕಾರಿ ವೈದ್ಯರು ಸಿಗದ ಕಾರಣ ಕುಮಾರಸ್ವಾಮಿ ಲೇಔಟ್‌ ಬಳಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಯುವತಿ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು ಎಂದು ಪೊಲೀಸ್‌ ಮೂಲಗಳು ಮಾಹಿತಿ ನೀಡಿವೆ.

ADVERTISEMENT

ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಬಾಲಕಿಯ ಮರಣೋತ್ತರ ಪರೀಕ್ಷೆ ನಡೆಸಿ, ಪೋಷಕರಿಗೆ ಒಪ್ಪಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.