ADVERTISEMENT

ಮಳೆಯಿಂದ ಬೆಳೆ ಹಾನಿ; ಹೆಕ್ಟೇರ್‌ಗೆ ₹25,000 ಪರಿಹಾರ ನೀಡಿ: ನಿಖಿಲ್‌ ಒತ್ತಾಯ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2025, 13:30 IST
Last Updated 3 ಸೆಪ್ಟೆಂಬರ್ 2025, 13:30 IST
ನಿಖಿಲ್‌ ಕುಮಾರಸ್ವಾಮಿ 
ನಿಖಿಲ್‌ ಕುಮಾರಸ್ವಾಮಿ    

ಬೆಂಗಳೂರು: ‘ಅತೀವ ಮಳೆಯಿಂದ ಮಲೆನಾಡು ಮತ್ತು ಕಲ್ಯಾಣ ಕರ್ನಾಟಕದ ಹಲವೆಡೆ ಬೆಳೆ ನಾಶವಾಗಿದೆ. ಸರ್ಕಾರವು ಹೆಕ್ಟೇರ್‌ಗೆ ₹25,000–₹30,000 ಪರಿಹಾರ ಘೋಷಿಸಬೇಕು’ ಎಂದು ಜೆಡಿಎಸ್‌ ಯುವಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯ ಸರ್ಕಾರಕ್ಕೆ ರೈತರು ಮತ್ತು ಜನರ ಬಗ್ಗೆ ಕಾಳಜಿಯೇ ಇಲ್ಲ. ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಅವರು ತಾವು ಓಡಾಡಲು ₹80 ಕೋಟಿಯ ಹೆಲಿಕಾಪ್ಟರ್‌ ಹಾಗೂ ₹150 ಕೋಟಿ ವೆಚ್ಚದಲ್ಲಿ ವಿಮಾನ ಖರೀದಿಸಲು ಮುಂದಾಗಿದ್ದಾರೆ. ಆದರೆ, ಅವರಿಗೆ ಮಳೆ ಸಂತ್ರಸ್ತರ ಬಗ್ಗೆ ಮಾತನಾಡಲು ಸಮಯವಿಲ್ಲ’ ಎಂದರು.

‘ಈ ಬಗ್ಗೆ ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ನೆರೆ ಪೀಡಿತ ಪ್ರದೇಶಗಳಿಗೆ ಇದೇ 9 ರಿಂದ ಪ್ರವಾಸ ಕೈಗೊಳ್ಳಲಿದ್ದೇವೆ. ನಷ್ಟಕ್ಕೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸಿ, ಸರ್ಕಾರಕ್ಕೆ ಸಲ್ಲಿಸುತ್ತೇವೆ. ಸರ್ಕಾರವು ರೈತರ ಬೆಳೆ ಸಾಲ ಮನ್ನಾ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತೇವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ADVERTISEMENT

‘ಕೃಷಿ ಸಚಿವರಿಗೆ ರೈತರ ಬಗ್ಗೆ ಕಾಳಜಿಯೇ ಇಲ್ಲ. ₹250 ಬೆಲೆಯ ಗೊಬ್ಬರವನ್ನು ₹1,000 ಕೊಟ್ಟು ರೈತರು ಖರೀದಿಸಿದ್ದಾರೆ. ಆದರೆ ಈ ಬಗ್ಗೆ ತಮಗೆ ಮಾಹಿತಿಯೇ ಇಲ್ಲ ಎಂದು ಕೃಷಿ ಸಚಿವರು ಹೇಳಿದ್ದಾರೆ. ಅವರು ರೈತರ ಪರವಾಗಿ ಹೇಗೆ ಕೆಲಸ ಮಾಡಬಹುದು ಎಂಬುದು ಈ ಮಾತಿನಿಂದ ಗೊತ್ತಾಗುತ್ತದೆ’ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

‘ಜೆಡಿಎಸ್‌ ಮತ್ತು ಬಿಜೆಪಿ ಪ್ರತ್ಯೇಕ ಪಕ್ಷಗಳು. ಅವರ ಹೋರಾಟ ಅವರದ್ದು, ನಮ್ಮ ಹೋರಾಟ ನಮ್ಮದು. ಧರ್ಮಸ್ಥಳದ ವಿಚಾರದಲ್ಲಿ ಪ್ರತ್ಯೇಕ ಹೋರಾಟ ನಡೆಸಿದರೂ, ನಾವು ಒಟ್ಟಿಗೇ ಇದ್ದೇವೆ. ಧರ್ಮಸ್ಥಳ ಪರವಾದ ಹೋರಾಟದಲ್ಲಿ ಎರಡೂ ಮಿತ್ರಪಕ್ಷಗಳು ಪರಸ್ಪರರನ್ನು ಬಿಟ್ಟುಕೊಟ್ಟಿಲ್ಲ’ ಎಂದರು.

ಬಿಜೆಪಿ ಪ್ರವಾಸ

‘ಬಿಜೆಪಿ ಜಿಲ್ಲಾ ಘಟಕಗಳ ಎಲ್ಲ ಅಧ್ಯಕ್ಷರೂ ತಮ್ಮ ಜಿಲ್ಲೆಗಳಲ್ಲಿ ಸಂಭವಿಸಿರುವ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಬೇಕು. ಹಾನಿಯ ಕುರಿತು ಸಂಗ್ರಹಿಸಿದ ಪ್ರತ್ಯಕ್ಷ ವರದಿಯನ್ನು ಸೆ. 8ರ ಒಳಗೆ ರಾಜ್ಯ ಕಾರ್ಯಾಲಯಕ್ಕೆ ಸಲ್ಲಿಸಬೇಕು’ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ ವಿಜಯೇಂದ್ರ ಪತ್ರ ಬರೆದಿದ್ದಾರೆ.

‘ಹಲವು ದಿನಗಳಿಂದ ರಾಜ್ಯದಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದೆ. ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಆದರೂ, ರಾಜ್ಯ ಸರ್ಕಾರ ಸೂಕ್ತ ಪರಿಹಾರ ಕಾರ್ಯಗಳನ್ನು ಕೈಗೊಂಡಿಲ್ಲ. ಸಾಂತ್ವನ ಹೇಳುವ ಕೆಲಸ ಮಾಡಿಲ್ಲ. ಈ ಸರ್ಕಾರ ರೈತರು, ಬಡಜನರ ಬಗ್ಗೆ ನಿರ್ಲಕ್ಷ್ಯ ತೋರುತ್ತಿದೆ’ ಎಂದು ದೂರಿದ್ದಾರೆ.

‘ಸಂಕಷ್ಟದ ಸಮಯದಲ್ಲಿ ಮೈಮರೆತು ಗಾಢ ನಿದ್ರೆಯಲ್ಲಿರುವ ಸರ್ಕಾರವನ್ನು ಪ್ರತಿ ಪಕ್ಷ ಬಿಜೆಪಿ ಎಚ್ಚರಿಸುವ ಕೆಲಸ ಮಾಡಬೇಕು. ಮಳೆ ಹಾನಿ ಪ್ರದೇಶಗಳಿಗೆ ತೆರಳಿ ಜನರ ಸಂಕಷ್ಟವನ್ನು ಆಲಿಸಬೇಕು. ಹಾನಿಗೊಳಗಾದ ಬೆಳೆ, ಸಾವು–ನೋವು, ರಸ್ತೆಗಳ ಸ್ಥಿತಿ ಸೇರಿದಂತೆ ಎಲ್ಲ ವಿವರಗಳನ್ನು ಚಿತ್ರಸಹಿತ ಪಟ್ಟಿ ಮಾಡಿ ವರದಿ ಸಿದ್ಧಪಡಿಸಬೇಕು’ ಎಂದು ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.