ಡಿಕೆಶಿ
ಬೆಂಗಳೂರು:‘ ಗ್ರೇಟರ್ ಬೆಂಗಳೂರು ಆಡಳಿತ ಮಸೂದೆ’ಯ ಕುರಿತು ವಿಸ್ತೃತ ಚರ್ಚೆಯ ಅಗತ್ಯವಿರುವುದರಿಂದ ಮಸೂದೆ ಹಿಂದಕ್ಕೆ ಪಡೆದು, ಸದನ ಸಮಿತಿಯನ್ನು ರಚಿಸಲಾಗುವುದು ಎಂದು ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ವಿಧಾನಸಭೆಯಲ್ಲಿ ಗುರುವಾರ ಮಸೂದೆಯನ್ನು ಪರ್ಯಾಲೋಚನೆಗೆ ಮಂಡಿಸಿದ ಶಿವಕುಮಾರ್ ಅವರು, ‘ಸುಮಾರು 1.40 ಕೋಟಿ ಜನಸಂಖ್ಯೆ ಇರುವ ಬೆಂಗಳೂರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಆಡಳಿತ ಸುಧಾರಣೆ ಆಗಬೇಕು, ನಾಗರಿಕ ಸೌಲಭ್ಯಗಳನ್ನು ನೀಡಬೇಕು. ಈ ಮೂಲಕ ಬೆಂಗಳೂರಿಗೆ ಹೊಸ ರೂಪ ಕೊಟ್ಟು, ಬ್ರ್ಯಾಂಡ್ ಬೆಂಗಳೂರು ಆಗಿಸುವುದೇ ನಮ್ಮ ಉದ್ದೇಶ’ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ವಿರೋಧಪಕ್ಷದ ನಾಯಕ ಆರ್.ಅಶೋಕ ಅವರು, ‘ಈ ಮಸೂದೆಯ ಬಗ್ಗೆ ಚರ್ಚೆ ಆಗಬೇಕು. ಮಸೂದೆಯನ್ನು ಈಗಿರುವ ರೂಪದಲ್ಲಿ ಜಾರಿ ಮಾಡಿದರೆ ಬೆಂಗಳೂರು ಛಿದ್ರ ಆಗುತ್ತದೆ. ಆದ್ದರಿಂದ ಮಸೂದೆಯನ್ನು ಹಿಂದಕ್ಕೆ ಪಡೆದು ಸದನ ಸಮಿತಿಯನ್ನು ರಚಿಸಬೇಕು ಎಂದು ಒತ್ತಾಯಿಸಿದರು.
ಬಿಜೆಪಿಯ ಎಸ್.ಟಿಸೋಮಶೇಖರ್ ಮಾತನಾಡಿ, ಈ ವಿಷಯದ ಬಗ್ಗೆ ವಿಸ್ತೃತ ಚರ್ಚೆಯ ಅಗತ್ಯ ಇರುವುದರಿಂದ ಸದನ ಸಮಿತಿ ರಚಿಸಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಿವಕುಮಾರ್ ಅವರು, ‘ನಮ್ಮ ಪಕ್ಷ ಮತ್ತು ವಿರೋಧ ಪಕ್ಷದ ಶಾಸಕರು ವಿಸ್ತೃತ ಚರ್ಚೆಗೆ ಒತ್ತಾಯಿಸಿದ್ದಾರೆ. ಇದಕ್ಕೆ ನನ್ನ ತಕರಾರಿಲ್ಲ. ಎಲ್ಲರ ಸಲಹೆ– ಸೂಚನೆಗಳನ್ನು ಕೇಳಿಯೇ ಮುಂದುವರೆಯುತ್ತೇನೆ. ಸದನಸಮಿತಿ ರಚಿಸಲು ತಯಾರಿದ್ದೇನೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.