ರಾಯಚೂರು: ದಿನಕ್ಕೆ 22 ಲೀಟರ್ ಹಾಲು ಕೊಡುವ 'ಜೂಲಿಯಾ' ತಳಿ ಎಮ್ಮೆಯು ಹೈನುಗಾರಿಕೆ ಮಾಡಬೇಕೆನ್ನುವ ರೈತರ ಗಮನ ಸೆಳೆಯಿತು. ಭಾರಿ ಸಂಖ್ಯೆಯಲ್ಲಿ ನೆರೆದಿದ್ದ ರೈತ ಸಮೂಹ ಎಮ್ಮೆಯ ವಿಶೇಷತೆಗಳನ್ನು ವಿಚಾರಿಸುತ್ತಿದ್ದರು.
ಜಿಲ್ಲೆಯ ಸಿಂಧನೂರಿನಲ್ಲಿ ಮಂಗಳವಾರ ಮುಕ್ತಾಯವಾದ ರಾಜ್ಯಮಟ್ಟದ ಪಶುಮೇಳದ ಸಮಾರೋಪ ಸಮಾರಂಭದಲ್ಲಿ ಜೂಲಿಯಾ ಎಮ್ಮೆಗೆ ಪ್ರಥಮ ಬಹುಮಾನ ಕೂಡಾ ನೀಡಲಾಯಿತು. ಹಾಲು ಕರೆಯುವ ಸ್ಪರ್ಧೆಯಲ್ಲಿ ಅತಿಹೆಚ್ಚು ಹಾಲು ನೀಡಿದ ಎಮ್ಮೆ ಎನ್ನುವ ಗೌರವಕ್ಕೆ ಅದು ಪಾತ್ರವಾಯಿತು.
ಮಾನ್ವಿ ತಾಲ್ಲೂಕಿನ ಕುರವಿ ಗ್ರಾಮದ ರೈತ ಜನಾರ್ಧನ ಚೌದರಿ ಅವರು 15 ವರ್ಷಗಳ ಹಿಂದೆ ಅಪರೂಪದ ಜೂಲಿಯಾ ಎಮ್ಮೆ ಕರುವನ್ನು ರಾಯಚೂರು ಜಾನುವಾರು ಸಂತೆಯಲ್ಲಿ ಖರೀದಿಸಿದ್ದರು. ತುಂಬಾ ಪ್ರೀತಿಯಿಂದ ಸಾಕಾಣಿಕೆ ಮಾಡಿಕೊಂಡು ಬಂದಿದ್ದಾರೆ. 15 ವರ್ಷಗಳಲ್ಲಿ 10 ಕಾರುಗಳನ್ನು ಹಾಕಿದೆ. ಎಂಟು ಕೋಣಗಳು ಮತ್ತು ಎರಡು ಎಮ್ಮೆ ಕರುಗಳನ್ನು ನೀಡಿದೆ.
ಎಮ್ಮೆ ಕರುಗಳ ಖರೀದಿಗೆ ಭಾರಿ ಬೇಡಿಕೆ ಬಂದಿದ್ದರೂ ಮಾರಾಟ ಮಾಡಿಲ್ಲ. ಕೋಣಗಳು ದಷ್ಟಪುಷ್ಠವಾಗಿ ಬೆಳವಣಿಗೆ ಆಗುತ್ತವೆ. ಒಂದು ಕೋಣವನ್ನು ₹75 ಸಾವಿರಕ್ಕೆ ಮಾರಾಟ ಮಾಡಿದ್ದಾರೆ. ಜೂಲಿಯಾ ಎಮ್ಮೆಗೆ ₹10 ಲಕ್ಷ ಹಣದೊಂದಿಗೆ ಬೇಡಿಕೆ ಸಲ್ಲಿಸಿದ್ದರೂ ಜನಾರ್ಧನ ಅವರು ಒಪ್ಪಿಲ್ಲ.
'ವರ್ಷದ ಎಂಟು ತಿಂಗಳು ಎಮ್ಮೆ ಹಾಲು ಕೊಡುತ್ತಾ ಬಂದಿದೆ. ಕರು ಹಾಕಿದ ಮೂರು ತಿಂಗಳು ಮಾತ್ರ ದಿನಕ್ಕೆ 22 ಲೀಟರ್ ಹಾಲು ಕೊಡುತ್ತದೆ. ಆನಂತರ ಕಡಿಮೆ ಆಗುತ್ತಾ ಹೋಗುತ್ತದೆ. ಕನಿಷ್ಠ 15ಲೀಟರ್ ವರೆಗೂ ಹಾಲು ಸಿಗುತ್ತದೆ. ಎಲ್ಲ ದನಕರುಗಳಂತೆಯೇ ಅದಕ್ಕೂ ಮೇವು ಹಾಕುತ್ತಾ ಸಾಕಾಣಿಕೆ ಮಾಡಿಕೊಂಡು ಬರುತ್ತಿದ್ದೇನೆ' ಎಂದು ಜನಾರ್ದನ ಅವರು 'ಪ್ರಜಾವಾಣಿ'ಗೆ ತಿಳಿಸಿದರು.
ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಜಾನುವಾರು ಪ್ರದರ್ಶನ ಏರ್ಪಡಿಸಿದರೆ ಜೂಲಿಯಾ ತೆಗೆದುಕೊಂಡು ಭಾಗವಹಿಸುತ್ತೇವೆ. ಸಿಂಧನೂರಿನಲ್ಲಿ ನಡೆದ ಮೇಳದಲ್ಲಿ ಬಹಳಷ್ಟು ರೈತರು ಬಂದಿದ್ದರು. ನೋಡಿದವರೆಲ್ಲ ಖುಷಿ ವ್ಯಕ್ತಪಡಿಸಿದ್ದಾರೆ. ಜೂಲಿಯಾ ಮೇಲೆ ಜನರ ಕಣ್ಣು ಬಿದ್ದಿದೆ. ಹೀಗಾಗಿ ಜೂಲಿಯಾ ಮೇವು ತಿನ್ನುತ್ತಿಲ್ಲ. ಮೇಳ ಮುಗಿಯುತ್ತಿದ್ದಂತೆ ಪಶು ವೈದ್ಯರಿಗೆ ತೋರಿಸುತ್ತೇನೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.