ತುಮಕೂರು: ತಿಂಗಳ ಹಿಂದೆ ಸಂಜೆ ವಾಯುವಿಹಾರಕ್ಕೆ ತೆರಳಿದ್ದಾಗ ನಾಪತ್ತೆಯಾಗಿದ್ದ ತುಮಕೂರು ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜಿನ ಪ್ರಾಧ್ಯಾಪಕ ಡಾ.ಎಚ್.ವೈ.ಈಶ್ವರಯ್ಯ ಅವರ ಶವ ಗುರುವಾರ ನಗರದ ಹೊರವಲಯದ ಇಸ್ರೋಗೆ ಸೇರಿದ ಜಮೀನಿನಲ್ಲಿ(ಎಚ್ಎಂಟಿ ಕಾರ್ಖಾನೆ ಇದ್ದ ಜಾಗ) ಪತ್ತೆಯಾಗಿದೆ.
ಮರಕ್ಕೆ ನೇಣು ಹಾಕಿಕೊಂಡಿರುವ ಭಂಗಿಯಲ್ಲಿರುವ ದೇಹವು ಕೊಳೆತು ಹೋಗಿದೆ. ಬುಧವಾರ ಇಸ್ರೋ ಸಂಸ್ಥೆಯ ಭದ್ರತಾ ಸಿಬ್ಬಂದಿ ಆವರಣದಲ್ಲಿರುವ ಆಡಳಿತ ಕಚೇರಿ ಕಟ್ಟಡ ಸಮೀಪ ಬಂದಾಗ ದುರ್ವಾಸನೆ ಬಂದಿದೆ.
ಕ್ಯಾತ್ಸಂದ್ರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ವಾರಸುದಾರರ ಹುಡುಕಾಟ ನಡೆಸಿದಾಗ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ ಡಾ.ಎಚ್.ವೈ ಈಶ್ವರಯ್ಯ ಅವರದ್ದೇ ಎಂದು ಗೊತ್ತಾಗಿದೆ. ಕುಟುಂಬದವರೂ ಶವ ಗುರುತಿಸಿದ್ದಾರೆ.
ಪ್ರಕರಣದ ವಿವರ: ಡಾ.ಈಶ್ವರಯ್ಯ ಅವರು ಬಟವಾಡಿ ಮಹಾಲಕ್ಷ್ಮಿ ಬಡಾವಣೆಯ ನಿವಾಸಿಯಾಗಿದ್ದರು. ಡಿಸೆಂಬರ್ 9ರಂದು ಸಂಜೆ ಎಂದಿನಂತೆ ವಾಯುವಿಹಾರಕ್ಕೆ ತೆರಳಿದ್ದವರು ನಂತರ ಮನೆಗೆ ಬಂದಿರಲಿಲ್ಲ. ಆ ದಿನ ರಾತ್ರಿ ಮತ್ತು ಮರುದಿನ ನಗರ ಮತ್ತು ಸುತ್ತಮುತ್ತ ಅವರ ಪುತ್ರ ಪವನ್ ಅವರು ಸಂಬಂಧಿಕರು, ಸ್ನೇಹಿತರೊಂದಿಗೆ ಹುಡುಕಿದ್ದರು. ಆದರೆ, ಪತ್ತೆಯಾಗಿರಲಿಲ್ಲ.
‘ನಮ್ಮ ತಂದೆ ತುಮಕೂರು ವಿವಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾಗಿದ್ದರು. ಅವರಿಗೆ ಈಚೆಗೆ ಹಿಂಬಡ್ತಿ ನೀಡಿದ್ದರಿಂದ ಮಾನಸಿಕವಾಗಿ ನೊಂದಿದ್ದರು. ಇದೇ ಕಾರಣಕ್ಕೆ ಮನೆಯಿಂದ ಹೋಗಿರಬಹುದು’ ಎಂದು ಅವರ ಮಗ ದೂರು ನೀಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.