ಮೈಸೂರು: ಎಂಟು ದಿನಗಳ ಕಾಲ ದೆಹಲಿಯ ಸಿಂಘು ಗಡಿಯಲ್ಲಿ ರೈತರ ಮುಷ್ಕರದ ಪ್ರಮುಖ ವೇದಿಕೆಯ ಹಿಂಭಾಗದ ಟೆಂಟ್ನಲ್ಲಿ ಕುಳಿತು ಬಳ್ಳಾರಿಯ ವೈದ್ಯ ಡಾ.ಎನ್.ಪ್ರಮೋದ್ ಸಾವಿರಾರು ಹೋರಾಟಗಾರರಿಗೆ ಆರೋಗ್ಯ ಸೇವೆ ನೀಡಿದ್ದರು.
ಎಐಡಿಎಸ್ಓ ಅಖಿಲ ಭಾರತ ಉಪಾಧ್ಯಕ್ಷ ಹಾಗೂ ಎಸ್ಯುಸಿಐಸಿ ಬಳ್ಳಾರಿ ಜಿಲ್ಲಾ ಸಮಿತಿ ಸದಸ್ಯರಾಗಿರುವ ಡಾ.ಪ್ರಮೋದ್, ರೈತರಿಗೆ ಬೆಂಬಲವಾಗಿ ನಿಂತಿರುವ ಮೆಡಿಕಲ್ ಸರ್ವಿಸ್ ಸೆಂಟರ್ನಿಂದ ಫೆ.27ರಂದು ಕರೆ ಬಂದ ಮಾರನೇ ದಿನವೇ ದೆಹಲಿಯಲ್ಲಿದ್ದರು. ಅವರು ವೈದ್ಯ ವೃತ್ತಿಯನ್ನು ಅವಲಂಬಿಸದೆ, ಪಕ್ಷ ಮತ್ತು ವಿದ್ಯಾರ್ಥಿ ಸಂಘಟನೆಗೇ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ.
ಮುಷ್ಕರದ ಸ್ಥಳಕ್ಕೆ ತೆರಳಲು ಪೊಲೀಸರೂ ಬಿಡದ ಕಾರಣ ಅಡ್ಡದಾರಿಯಲ್ಲಿ 3 ಕಿಮೀ ಅವರು ನಡೆದೇ ಹೋಗಿದ್ದರು. ಮಾರ್ಚ್ 3ರಂದು ವಾಪಸು ಬರುವಾಗಲೂ ಕಷ್ಟವಾಗಿತ್ತು. ಆ ಮಾರ್ಗದಲ್ಲಿ ಜನ ಬರಬಾರದು ಮತ್ತು ಹೋಗಬಾರದು ಎಂಬ ಕಾರಣಕ್ಕೆ 10 ಅಡಿಯ ಹಳ್ಳವನ್ನು ತೋಡಲಾಗಿತ್ತು.
‘ಆಗ ಹೆಮ್ಮೆಪಟ್ಟಿದ್ದೆ. ಐತಿಹಾಸಿಕ ಹೋರಾಟದ ಭಾಗವಾಗಿದ್ದಕ್ಕೆ ಈಗ ಇನ್ನಷ್ಟು ಹೆಮ್ಮೆಯಾಗುತ್ತಿದೆ’ ಎಂದು ಡಾ.ಪ್ರಮೋದ್ ಪ್ರತಿಕ್ರಿಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.