ADVERTISEMENT

‘ಸಂವಿಧಾನವನ್ನು ಕಾಲು ಕಸ ಮಾಡಿದ ಕೇಂದ್ರ ಸರ್ಕಾರ’

ಪ್ರತಿಭಟನೆಯಲ್ಲಿ ಸಾಹಿತಿ ದೇವನೂರ ಮಹಾದೇವ ಕಿಡಿ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2020, 19:37 IST
Last Updated 8 ಡಿಸೆಂಬರ್ 2020, 19:37 IST
ಭಾರತ ಬಂದ್ ಬೆಂಬಲಿಸಿ ಮೈಸೂರಿನಲ್ಲಿ ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಸಾಹಿತಿ ದೇವನೂರ ಮಹಾದೇವ ಭಾಗಿಯಾದರು.
ಭಾರತ ಬಂದ್ ಬೆಂಬಲಿಸಿ ಮೈಸೂರಿನಲ್ಲಿ ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಸಾಹಿತಿ ದೇವನೂರ ಮಹಾದೇವ ಭಾಗಿಯಾದರು.   

ಮೈಸೂರು: ‘ಕೇಂದ್ರ ಸರ್ಕಾರವು ಸಂವಿಧಾನವನ್ನು ಕಾಲು ಕಸ ಮಾಡಿದೆ. ದೇಶವನ್ನು ಅವನತಿಯೆಡೆಗೆ ದೂಡುವಂತಹ ಗುಂಡಿ ತೋಡಿದೆ’ ಎಂದು ಸಾಹಿತಿ ದೇವನೂರ ಮಹಾದೇವ ಕಿಡಿಕಾರಿದರು.

‘ಭಾರತ್ ಬಂದ್’ ಬೆಂಬಲಿಸಿ ನಡೆದ ಪ್ರತಿಭಟನೆ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ಕೃಷಿಯು ರಾಜ್ಯದ ವ್ಯಾಪ್ತಿಗೆ ಬರುತ್ತದೆ. ಆದರೆ, ಕೇಂದ್ರ ಸರ್ಕಾರ ಕೃಷಿ ನೀತಿಗಳನ್ನು ರೂಪಿಸುವಾಗ ರಾಜ್ಯಗಳ ಜತೆ, ಸಂಸತ್ತಿನೊಳಗೆ ಎಲ್ಲೂ ಚರ್ಚೆಯನ್ನೇ ನಡೆಸಲಿಲ್ಲ. ಜಿಎಸ್‌ಟಿ ಜಾರಿಯಾದ ಬಳಿಕ ನರ ಸತ್ತಂತಿರುವ ರಾಜ್ಯಗಳು ತೀವ್ರ ಭಯದಲ್ಲಿದ್ದು, ಅವೂ ಕೂಡಾಕೇಂದ್ರ ಸರ್ಕಾರವನ್ನು ಪ್ರಶ್ನಿಸಲಿಲ್ಲ.ರಾಜ್ಯ, ಸಂವಿಧಾನ, ಒಕ್ಕೂಟ ವ್ಯವಸ್ಥೆ ಎಲ್ಲದರ ಸೂತ್ರವನ್ನು ಕಿತ್ತು ಹಾಕಲಾಗಿದೆ. ಇದು ಅತಿ ಕೆಟ್ಟ ಬೆಳವಣಿಗೆ’ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ADVERTISEMENT

‘ಪ್ರತಿಭಟನೆಗೆ ಮುಂದಾದ ರೈತರನ್ನು ತಡೆಯಲು ಸರ್ಕಾರವೇ ರಸ್ತೆಗಳನ್ನು ಅಗೆಸಿದೆ. ಇದನ್ನೇ ಜನರು ಮಾಡಿದ್ದರೆ ಸರ್ಕಾರ ಏನು ಮಾಡುತ್ತಿತ್ತು?’ ಎಂದು ಕೇಳಿದರು.

‘ತಮ್ಮನ್ನು ಹೊಡೆದ ಪೊಲೀಸರಿಗೆ ಊಟ ಹಾಕಿದ ಹೃದಯವಂತ ರೈತರನ್ನು, ದೇಶದ್ರೋಹಿಗಳು ಎನ್ನುವ ಸಂಘ ಪರಿವಾರಕ್ಕೆ ವಂಚನೆ, ದ್ರೋಹ, ಕಠೋರತೆ ಗುಣಗಳಿವೆ. ಇದನ್ನು ಬದಲಿಸಿಕೊಂಡು ಮನುಷ್ಯರಾಗುವಂತೆ ಸಂಘ ಪರಿವಾರದಲ್ಲಿರುವಒಳ್ಳೆಯವರಾದರೂ ತಿಳಿ ಹೇಳಬೇಕಿದೆ’ ಎಂದು ದೇವನೂರ ಮಹಾದೇವ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.