ಮೈಸೂರು: ‘ಜನರು ಕೊಟ್ಟಿರುವ ಶಿಕ್ಷೆಯನ್ನು ಅನುಭವಿಸಲೇಬೇಕಿದೆ. ಹಿಂದೆ ಮಾಡಿರುವ ತಪ್ಪುಗಳಿಂದ ನಾವು ಪಾಠ ಕಲಿಯಬೇಕಿದೆ’ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಬುಧವಾರ ಇಲ್ಲಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ‘ಮೈತ್ರಿ ಪಕ್ಷಗಳ ಸೋಲಿಗೆ ಯಾರು ಹೊಣೆ ಎಂದು ಹೇಳುವ ಹೊತ್ತು ಇದಲ್ಲ. ಇದು ಸರ್ಕಾರವನ್ನು ಉಳಿಸುವ ಸಮಯ. ಜನರ ಬಳಿಗೆ ಸರ್ಕಾರದ ಕಾರ್ಯಕ್ರಮಗಳನ್ನು ಕೊಂಡೊಯ್ಯ ಬೇಕು. ಹೀಗಾಗಿ, ಸೋಲಿಗೆ ಯಾರನ್ನೂ ಹೊಣೆ ಮಾಡುವುದಿಲ್ಲ’ ಎಂದರು.
‘ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಉತ್ತಮ ಸರ್ಕಾರ ನಡೆಸಿದರು. ಅವರು ಇನ್ನೂ ಜನನಾಯಕರಾಗಿಯೇ ಉಳಿದಿದ್ದಾರೆ. ಕಾಂಗ್ರೆಸ್ನಲ್ಲೂ ಅವರೇ ನಾಯಕರು. ಅವರು ನನ್ನನ್ನು ‘ಟಾರ್ಗೆಟ್’ ಮಾಡಿಲ್ಲ. ನಾನೂ ಮಾಡುವುದಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಗ್ರಾಮ ವಾಸ್ತವ್ಯದ ಮೂಲಕ ಸರ್ಕಾರದ ಕಾರ್ಯಕ್ರಮಗಳನ್ನು ತಲುಪಿಸುವುದೇ ಪ್ರಮುಖ ಆದ್ಯತೆಯಾಗಿದೆ. ಸೋಲಿನ ಕುರಿತು ಪ್ರತಿಕ್ರಿಯೆ ನೀಡಬಾರದು ಎಂಬ ಸೂಚನೆ ಪಕ್ಷದಿಂದ ಬಂದಿದೆ ಎಂದು ಹೇಳಿದರು.
‘ಕಾಂಗ್ರೆಸ್ ಆಗಲಿ, ಜನತಾ ಪರಿವಾರವೇ ಆಗಲಿ ಉಳಿಯಬೇಕಾದರೆ ಅದು ಕರ್ನಾಟಕದಿಂದ ಮಾತ್ರ ಸಾಧ್ಯ. ಇಲ್ಲಿಂದಲೇ ಈ ಎರಡೂ ಪಕ್ಷಗಳು ಮತ್ತೆ ಶಕ್ತಿ ಪಡೆದು ಬೆಳೆಯಲಿವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ಎಚ್.ವಿಶ್ವನಾಥ್ ಅವರು ತಮ್ಮ ಅಭಿಪ್ರಾಯ ಹೇಳಿದ್ದಾರೆ. ಅವರು ಪಕ್ಷದ ಅಧ್ಯಕ್ಷ ಹುದ್ದೆಯಲ್ಲೇ ಮುಂದುವರಿಯಬೇಕು ಎನ್ನುವುದು ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರ ಇಚ್ಛೆ. ಅವರೊಂದಿಗೆ ಮಾತನಾಡಿದ ನಂತರ ವಿಶ್ವನಾಥ್ ತಮ್ಮ ನಿಲುವು ಬದಲಿಸಿಕೊಳ್ಳುವರು’ ಎಂದು ನುಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.