ADVERTISEMENT

ದೇವೇಗೌಡರೇ ಸಂಘದ ಸಿದ್ಧಾಂತ ಒಪ್ಪಿದ್ದಾರೆ: ಎಚ್‌ಡಿಕೆಗೆ ಸಿ.ಟಿ. ರವಿ

ಆರ್‌ಎಸ್‌ಎಸ್ ಹೊಗಳಿದ್ದ ಗೌಡರು

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2021, 7:20 IST
Last Updated 7 ಅಕ್ಟೋಬರ್ 2021, 7:20 IST
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ   

ಬೆಂಗಳೂರು: ‘ಕುಮಾರಸ್ವಾಮಿಯವರೇ ನಿಮಗೆ ಆರ್‌ಎಸ್‌ಎಸ್‌ ಬಗ್ಗೆಇನ್ನೂ ಅನುಮಾನಗಳಿದ್ದರೆ ನಿಮ್ಮ ತಂದೆ ದೇವೇಗೌಡರಲ್ಲಿ ಆ ಬಗ್ಗೆ ಕೇಳಿ. ದೇವೇಗೌಡರೇ ಆರ್‌ಎಸ್‌ಎಸ್‌ ಸಿದ್ಧಾಂತವನ್ನು ಒಪ್ಪಿಕೊಂಡಿದ್ದಾರೆ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

ಎಚ್‌.ಡಿ.ದೇವೇಗೌಡರು ಆರ್‌ಎಸ್‌ಎಸ್‌ ಅನ್ನು ಹೊಗಳಿರುವ ಪತ್ರಿಕೆಗಳ ಹೇಳಿಕೆಗಳನ್ನು ಟ್ಯಾಗ್‌ ಮಾಡಿ ಟ್ವೀಟ್‌ ಮಾಡಿರುವ ರವಿ, ‘ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ಚಾಮುಂಡೇಶ್ವರಿ ಚುನಾವಣಾ ಪ್ರಚಾರದ ವೇಳೆ ನಿಮ್ಮ ತಂದೆ ದೇವೇಗೌಡರು ಆರ್‌ಎಸ್‌ಎಸ್‌ ಉತ್ತಮ ಸಂಘಟನೆ, 1977 ರಲ್ಲಿ ತುರ್ತುಪರಿಸ್ಥಿತಿಯಲ್ಲಿ ಬಂಧನಗೊಂಡ ಸಂದರ್ಭದಲ್ಲಿ ಎಲ್‌.ಕೆ.,ಆಡ್ವಾಣಿ ಮತ್ತಿತ್ತರರು ನಡೆದುಕೊಂಡ ರೀತಿ ಮೆಚ್ಚುಗೆಯಾಗಿತ್ತು. ಹೀಗಾಗಿ ನಾನು ಆರ್‌ಎಸ್‌ಎಸ್‌ ಹೊಗಳುತ್ತೇನೆ ಎಂದು ತಿಳಿಸಿದ್ದರು’ ಎಂದಿದ್ದಾರೆ.

1977ರಲ್ಲಿ ಬೆಂಗಳೂರಿನಲ್ಲಿ ನಡೆದ ಸಂಘದ ಕಾರ್ಯಕ್ರಮದಲ್ಲಿ ಅಂದಿನ ಸರಸಂಘ ಚಾಲಕರಾದ ಬಾಳಾಸಾಹೇಬ್‌ ದೇವರಸ್‌, ಕೆ.ಎಸ್‌.ಹೆಗ್ಡೆ, ಡಾ.ಜಾನ್‌ ಜತೆಯಲ್ಲಿ ದೇವೇಗೌಡರು ಕುಳಿತ್ತಿದ್ದಾರೆ. ಅಂದರೆ ದೇವೇಗೌಡರಿಗೆ ಆರ್‌ಎಸ್‌ಎಸ್ ಸಿದ್ಧಾಂತದಲ್ಲಿ ನಂಬಿಕೆ ಇದೆ ಎಂದು ಅರ್ಥವಲ್ಲವೇ ಕುಮಾರಸ್ವಾಮಿಯವರೇ ಎಂದು 1977 ರ ಫೋಟೊವನ್ನೂ ಟ್ಯಾಗ್‌ ಮಾಡಿದ್ದಾರೆ.

ADVERTISEMENT

ದೇವೇಗೌಡರ ‍ಪುತ್ರರಾಗಿ ಸಂಘದ ಸಿದ್ಧಾಂತಗಳ ಬಗ್ಗೆ ಹಗುರವಾಗಿ ಮಾತನಾಡಿರುವುದು ಅವರ ಅಪ್ರಬುದ್ಧತೆಗೆ ಸಾಕ್ಷಿ. ಭಾರತೀಯರನ್ನು ಭಾರತಕ್ಕಾಗಿ ಮಿಡಿಯುವಂತೆ ಮಾಡಬಲ್ಲ ಸಂಸ್ಥೆ ಆರ್‌ಎಸ್‌ಎಸ್‌ ಎಂದೇ ವಿಶ್ವ ಖ್ಯಾತಿ ಆಗಿದೆ. ಮನೆ ಮಠ, ಸ್ವಂತ ಬದುಕು ಬಿಟ್ಟು ಸಂಘ ಬಯಸುತ್ತಿರುವ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸುತ್ತಿರುವ ದೊಡ್ಡ ತ್ಯಾಗಿಗಳ ದೊಡ್ಡ ಪಡೆಯೇ ಇಲ್ಲಿದೆ ಎಂದು ರವಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.