ADVERTISEMENT

DH Bengaluru 2040 Summit: ಬೆಂಗಳೂರು ದಕ್ಷಿಣದಲ್ಲೇ 2ನೇ ವಿಮಾನ ನಿಲ್ದಾಣವಾಗಲಿ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2025, 17:04 IST
Last Updated 21 ಫೆಬ್ರುವರಿ 2025, 17:04 IST
<div class="paragraphs"><p>ಡಿಎಚ್ ಬೆಂಗಳೂರು–2040 ಶೃಂಗ ಸಭೆಯಲ್ಲಿ ‘ಬೆಂಗಳೂರಿಗೆ ಎಷ್ಟು ವಿಮಾನ ನಿಲ್ದಾಣ ಅಗತ್ಯ’ ಸಂವಾದದಲ್ಲಿ ಎಂ.ಜಿ. ಬಾಲಕೃಷ್ಣ ಖುಷ್ಬೂ ಗೋಯಲ್‌ ಚೌಧರಿ ಕ್ಯಾಪ್ಟನ್‌ ಜಿ.ಆರ್‌. ಗೋಪಿನಾಥ್‌ ವಿವೇಕ್‌ ಮೆನನ್‌ ಭಾಗವಹಿಸಿದ್ದರು</p></div>

ಡಿಎಚ್ ಬೆಂಗಳೂರು–2040 ಶೃಂಗ ಸಭೆಯಲ್ಲಿ ‘ಬೆಂಗಳೂರಿಗೆ ಎಷ್ಟು ವಿಮಾನ ನಿಲ್ದಾಣ ಅಗತ್ಯ’ ಸಂವಾದದಲ್ಲಿ ಎಂ.ಜಿ. ಬಾಲಕೃಷ್ಣ ಖುಷ್ಬೂ ಗೋಯಲ್‌ ಚೌಧರಿ ಕ್ಯಾಪ್ಟನ್‌ ಜಿ.ಆರ್‌. ಗೋಪಿನಾಥ್‌ ವಿವೇಕ್‌ ಮೆನನ್‌ ಭಾಗವಹಿಸಿದ್ದರು

   

ಬೆಂಗಳೂರು: ಬೆಂಗಳೂರು ನಗರಕ್ಕೆ ಎರಡನೇ ವಿಮಾನ ನಿಲ್ದಾಣ ಅತ್ಯಗತ್ಯವಾಗಿದ್ದು, ಬಹುದಿಕ್ಕಿನಲ್ಲಿ ನಗರ ಬೆಳೆದರೆ ಕೈಗಾರಿಕೆ ಸೇರಿದಂತೆ ಎಲ್ಲ ರೀತಿಯಲ್ಲೂ ಅಭಿವೃದ್ಧಿಯಾಗುತ್ತದೆ. ಉತ್ತರದಲ್ಲಿ ಈಗಾಗಲೇ ವಿಮಾನ ನಿಲ್ದಾಣ ಇರುವುದರಿಂದ, ದಕ್ಷಿಣದಲ್ಲಿ ಹೊಸ ವಿಮಾನ ನಿಲ್ದಾಣವಾಗುವುದು ಸೂಕ್ತ ಎಂದು ತಜ್ಞರು ಅಭಿಪ್ರಾಯಪಟ್ಟರು.

ಡಿಎಚ್ ಬೆಂಗಳೂರು–2040 ಶೃಂಗ ಸಭೆಯಲ್ಲಿ ‘ಬೆಂಗಳೂರಿಗೆ ಎಷ್ಟು ವಿಮಾನ ನಿಲ್ದಾಣ ಅಗತ್ಯ’ ಎಂಬ ವಿಷಯವಾಗಿ ಮಾತನಾಡಿದ ವೈಮಾನಿಕ ಕ್ಷೇತ್ರ ತಜ್ಞ ಕ್ಯಾಪ್ಟನ್‌ ಜಿ.ಆರ್‌. ಗೋಪಿನಾಥ್‌, ‘ಅತ್ಯಂತ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ನಗರಕ್ಕೆ ಹೆಚ್ಚು ವಿಮಾನ ನಿಲ್ದಾಣಗಳ ಅಗತ್ಯವಿದೆ. ಇದರಿಂದ ವಿಮಾನ ನಿಲ್ದಾಣಗಳ ನಡುವೆ ಸ್ಪರ್ಧೆ ಹೆಚ್ಚಾಗಲಿದ್ದು, ಪ್ರಯಾಣದ ಟಿಕೆಟ್‌ ದರ ಕಡಿಮೆಯಾಗಲಿದೆ’ ಎಂದರು.

ADVERTISEMENT

‘ನಗರ ಬಹುದಿಕ್ಕಿನಲ್ಲಿ ಬೆಳೆದಾಗ ಸರ್ವರೀತಿಯಲ್ಲೂ ಅಭಿವೃದ್ಧಿಯಾಗುತ್ತದೆ. ಉತ್ತರದಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಿರುವುದರಿಂದ ಆ ದಿಕ್ಕಿನಲ್ಲೇ ಮತ್ತೊಂದು ವಿಮಾನ ನಿಲ್ದಾಣವಾದರೆ ಮತ್ತಷ್ಟು ದಟ್ಟಣೆ, ಸಮಸ್ಯೆ ಉಂಟಾಗುತ್ತದೆ. ಹೊಸ ವಿಮಾನ ನಿಲ್ದಾಣಗಳ ಜೊತೆಗೆ ‘ಲ್ಯಾಂಡಿಂಗ್‌ ಸ್ಪೇಸ್‌’ಗಳನ್ನೂ ನಿರ್ಮಿಸಬೇಕು’ ಎಂದು ಅಭಿಪ್ರಾಯಪಟ್ಟರು.

ಸಾಮಾಜಿಕ ಕಾರ್ಯಕರ್ತ ವಿವೇಕ್‌ ಮೆನನ್ ಮಾತನಾಡಿ, ‘ಹಿಂದೆ ದಕ್ಷಿಣದಲ್ಲಿಯೇ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ನಿರ್ಧರಿಸಲಾಗಿತ್ತು. ಕೊನೆಗೆ ಬದಲಾಯಿತು. ಉತ್ತರದಲ್ಲಿ ಮತ್ತಷ್ಟು ಸಮಸ್ಯೆಯನ್ನು ಉಂಟುಮಾಡದೆ, ದಕ್ಷಿಣದಲ್ಲಿ ವಿಮಾನ ನಿಲ್ದಾಣ ನಿರ್ಮಿಸುವುದು ಸೂಕ್ತ’ ಎಂದರು.

‘ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ 2030ರ ದಶಕದ ಮಧ್ಯದ ವೇಳೆಗೆ ತನ್ನ ಸಾಮರ್ಥ್ಯ ಮೀರಲಿದೆ ಎಂದು ಅ‌ಂದಾಜಿಸಲಾಗಿದೆ. ಎಚ್‌ಎಎಲ್‌ ವಿಮಾನ ನಿಲ್ದಾಣವನ್ನೂ ಮತ್ತೆ ನಾಗರಿಕ ಪ್ರಯಾಣಕ್ಕೆ ತೆರವು ಮಾಡುವ ಬಗ್ಗೆಯೂ ಚಿಂತನೆ ನಡೆದಿದೆ. ಅದು ಸಾಧ್ಯವಾರೂ, ಎರಡನೇ ವಿಮಾನ ನಿಲ್ದಾಣವನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ’ ಎಂದು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಖುಷ್ಬೂ ಗೋಯಲ್‌ ಚೌಧರಿ ತಿಳಿಸಿದರು. ಎಫ್‌ಕೆಸಿಸಿಐ ಅಧ್ಯಕ್ಷ ಎಂ.ಜಿ. ಬಾಲಕೃಷ್ಣ ಭಾಗವಹಿಸಿದ್ದರು.

ಕನ್ನಡ ಚಿತ್ರರಂಗದಲ್ಲಿ ಬದಲಾವಣೆ ಅಗತ್ಯ: ರಮ್ಯಾ

‘ಹಲವು ವರ್ಷಗಳಿಂದ ಒಂದೇ ರೀತಿಯಲ್ಲಿರುವ ಕನ್ನಡ ಚಿತ್ರರಂಗದಲ್ಲಿ ಬದಲಾವಣೆ ಅಗತ್ಯವಾಗಿದೆ. ಮಲಯಾಳ ಚಿತ್ರರಂಗ ಕಳೆದ 20 ವರ್ಷಗಳಲ್ಲಿ ಬದಲಾವಣೆಯಾಗಿ ಅತ್ಯುತ್ತಮ ಯಶಸ್ಸು ಗಳಿಸುತ್ತಿದೆ. ಈ ರೀತಿಯ ಬದಲಾವಣೆ ನಮ್ಮಲ್ಲಿ ಬೇಕಿದೆ’ ಎಂದು ನಟಿ ರಮ್ಯಾ ಅಭಿಪ್ರಾಯಪಟ್ಟರು. ‘ಕೆಜಿಎಫ್ ಚಿತ್ರದಲ್ಲಿನ ದೃಶ್ಯ ಸಂಯೋಜನೆ ಎಲ್ಲ ಚಿತ್ರರಂಗಕ್ಕೂ ಮಾದರಿಯಾಗಿದೆ. ಅದನ್ನು ಹೊರತುಪಡಿಸಿದರೆ ಉತ್ತಮ ಕಥೆಯನ್ನು ಒಳಗೊಂಡ ಮಹಿಳಾ ಪ್ರಧಾನವಾದ ಚಿತ್ರಗಳು ಬರುತ್ತಿಲ್ಲ’ ಎಂದರು. ‘ಒಟಿಟಿಯಲ್ಲಿ ಕನ್ನಡ ಚಿತ್ರಗಳಿಗೆ ಹೆಚ್ಚಿನ ಪ್ರಾತಿನಿಧ್ಯ ಸಿಗುತ್ತಿಲ್ಲ. ಈ ಬಗ್ಗೆ ಚರ್ಚೆಯಾಗಬೇಕಿದೆ. ಕೋವಿಡ್‌ ನಂತರದ ವರ್ಷಗಳಿಂದ ಸರ್ಕಾರ ಚಿತ್ರಗಳಿಗೆ ಸಬ್ಸಿಡಿಯನ್ನೂ ನೀಡಿಲ್ಲ. ಕಲಾ ಪ್ರದರ್ಶಕರಿಗೆ ಸುರಕ್ಷಿತ ತಾಣ ರೂಪಿಸಲು ಪ್ರೋತ್ಸಾಹಿಸಲು ಸರ್ಕಾರದ ನಿಯಮಗಳು ಅಗತ್ಯ’ ಎಂದು ಹೇಳಿದರು. ‘ಉತ್ತಮ ಕಥೆ ಸಿಕ್ಕರೆ ನಾನು ಚಿತ್ರಗಳಲ್ಲಿ ಅಭಿನಯಿಸುತ್ತೇನೆ. ಉತ್ತಮ ಕಥೆ ಇದ್ದರೆ ಯಾರಾದರೂ ಹೇಳಿ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ನಗರದಲ್ಲಿ ಜನಾಂಗೀಯ ವಾದ ಹೆಚ್ಚಳ: ಖರ್ಗೆ

‘ನಗರದಲ್ಲಿ ಜನಾಂಗೀಯ ವಾದ ಹೆಚ್ಚಳವಾಗಿರುವುದು ಕಳವಳಕಾರಿ. ಇದು ಎರಡೂ ಕಡೆಯವರಿಂದ ಆಗುತ್ತಿದೆ. ಒಂದು ಪ್ರದೇಶವನ್ನು ತಮ್ಮದು ಇಲ್ಲಿ ಇನ್ನೊಬ್ಬರು ಬರಬಾರದು ಎಂದಾಗ ಸಮಸ್ಯೆ ಉಂಟಾಗುತ್ತದೆ. ವೈಟ್‌ಫೀಲ್ಡ್‌ ಸೇರಿದಂತೆ ಕೆಲವು ಭಾಗಗಳಲ್ಲಿ ನಮ್ಮ ಭಾಷೆಯಲ್ಲಿ ಯಾರೂ ಮಾತನಾಡುವುದಿಲ್ಲ’ ಎಂದು ಐಟಿಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು. ‘ಸ್ಟಾರ್ಟ್‌ಅಪ್‌ ರಾಜಧಾನಿಯಾಗಿ ಬೆಂಗಳೂರು ತನ್ನ ಅಗ್ರಸ್ಥಾನ ಮರುಸ್ಥಾಪಿಸುವುದು ಹೇಗೆ?’ ವಿಷಯದ ಬಗ್ಗೆ ಮಾತನಾಡಿದ ಅವರು ‘ಜನಾಂಗೀಯ ವಾದ ಹೆಚ್ಚಾಗಲು ಕಾರಣ ಸಾಮಾಜಿಕ ಜಾಲತಾಣಗಳು. ಕೃತಕ ಬುದ್ಧಿಮತ್ತೆ (ಎಐ) ಬಗ್ಗೆ ಹೆಚ್ಚು ಮಾತನಾಡುವ ನಾವು ಸಾಮಾನ್ಯ ಜ್ಞಾನದಿಂದ ವರ್ತಿಸಿದರೆ ಸಮಸ್ಯೆಗಳಾಗುವುದಿಲ್ಲ’ ಎಂದರು. 

‘ತ್ಯಾಜ್ಯ ನಿರ್ವಹಣೆಗೆ ಬಿಬಿಎಂಪಿ ನೇತೃತ್ವ ಇರಲಿ’

‘ನಗರದಲ್ಲಿ ಘನತ್ಯಾಜ್ಯ ನಿರ್ವಹಣೆಯಲ್ಲಿ ಬಿಬಿಎಂಪಿ ಮೂಲವಾಗಿ ನಿರ್ವಹಿಸಬೇಕಾದ ಕೆಲಸವನ್ನೂ ಮಾಡುತ್ತಿಲ್ಲ. ಹತ್ತಾರು ಯೋಜನೆಗಳು ಅಲ್ಲೇ ಉಳಿದಿವೆ. ವಿಂಗಡಣೆಯಾದ ಕಸವೂ ಭೂಭರ್ತಿಗೆ ಸೇರುತ್ತಿದೆ. ಎಲ್ಲಿ ಎಷ್ಟು ಗೊಬ್ಬರ ತಯಾರಿಸಿದ್ದೇವೆ ಎಂಬುದು ಬಿಬಿಎಂಪಿಗೂ ಗೊತ್ತಿಲ್ಲ. ರಾಜಕೀಯ ಮರೆತು ನಗರವನ್ನು ತ್ಯಾಜ್ಯ ಮುಕ್ತ ನಗರವನ್ನಾಗಿಸಬೇಕಿದೆ’ ಎಂದು ಶಾಸಕ ಡಾ. ಸಿ.ಎನ್‌. ಅಶ್ವತ್ಥನಾರಾಯಣ ಹೇಳಿದರು. ‘ಭವಿಷ್ಯಕ್ಕಾಗಿ ಸ್ವಚ್ಛ ಬೆಂಗಳೂರು’ ವಿಷಯವಾಗಿ ಮಾತನಾಡಿದರು. ‘ತ್ಯಾಜ್ಯ ನಿರ್ವಹಣೆಯಲ್ಲಿ ಜನರ ಸಹಭಾಗಿತ್ವ ಜವಾಬ್ದಾರಿ ಅತಿ ಅವಶ್ಯ’ ಎಂದು ಬಿಬಿಎಂಪಿಯ ವಿಶೇಷ ಆಯುಕ್ತೆ ಪ್ರೀತಿ ಗೆಹ್ಲೋಟ್‌ ಹೇಳಿದರು. ‘ತ್ಯಾಜ್ಯ ನಿರ್ವಹಣೆ ‘ರಾಕೆಟ್‌ ಸೈನ್ಸ್‌’ ಅಲ್ಲ. ಬಿಬಿಎಂಪಿ ತ್ಯಾಜ್ಯ ಸಂಗ್ರಹದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು’ ಎಂದು ಹಸಿರು ದಳದ ನಳಿನಿ ಶೇಖರ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.