ಬೆಂಗಳೂರು: ‘ವೈವಿಧ್ಯವನ್ನು ಸರಳೀಕರಿಸಲು ಹೋಗಬಾರದು. ಅದನ್ನು ಹಾಗೆಯೇ ಉಳಿಸಿಕೊಂಡರೆ ಅದು ನಮ್ಮನ್ನು ಏಕರೂಪದ ಕಡೆಗೆ ಕೊಂಡೊಯ್ಯುತ್ತದೆ’ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ಸುರೇಶ್ ಸೋನಿ ಶುಕ್ರವಾರ ತಿಳಿಸಿದರು.
ಗಾಂಧಿವಾದಿ ಧರಂಪಾಲ್ ಜನ್ಮಶತಾಬ್ದಿ ವರ್ಷದ ಅಂಗವಾಗಿ ರಾಷ್ಟ್ರೋತ್ಥಾನ ಪರಿಷತ್ ಹಮ್ಮಿಕೊಂಡಿದ್ದ ಐದು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಧರಂಪಾಲ್ ಅನೇಕ ಮಹತ್ವದ ದಾಖಲೆಗಳನ್ನು ಸಂಗ್ರಹಿಸಿದ್ದಾರೆ. ಅವುಗಳನ್ನು ಸಂರಕ್ಷಿಸಿಡಲಾಗಿದೆ. ಧರಂಪಾಲ್ ಸಾಹಿತ್ಯವನ್ನು ಜನರಿಗೆ ತಲುಪಿಸಬೇಕಿದ್ದು, ಅವುಗಳನ್ನು ಸಣ್ಣ ಸಣ್ಣ ಪುಸ್ತಕಗಳನ್ನಾಗಿ ಮಾಡಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಂತದ ಮಕ್ಕಳಿಗೆ ವಿತರಿಸಬೇಕಿದೆ. ವಿಶ್ವವಿದ್ಯಾಲಯ, ಅಕಾಡೆಮಿ ಹಾಗೂ ಕೌನ್ಸಿಲ್ಗಳಲ್ಲಿರುವವರು ಅಧ್ಯಯನ ನಡೆಸಿ ದಾಖಲೆಗಳಲ್ಲಿ ಅಡಕವಾಗಿರುವ ಅಂಶಗಳನ್ನು ಮುಂದಿನ ಪೀಳಿಗೆಗೆ ಹೇಗೆ ತಲುಪಿಸಬಹುದು ಎಂಬುದರ ಬಗ್ಗೆ ಚಿಂತನೆ ನಡೆಸಬೇಕಿದೆ’ ಎಂದರು.
‘ಭಾರತವನ್ನು ನಿರ್ಮಿಸುವ ಮೊದಲು ಅದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಧರಂಪಾಲ್ ಯಾವಾಗಲೂ ಹೇಳುತ್ತಿದ್ದರು. ಈ ಪುಸ್ತಕಗಳನ್ನು ಹೊರತರುವ ಮೂಲಕ ನಾವು ಈ ದಿಶೆಯಲ್ಲಿ ಹೆಜ್ಜೆ ಇಟ್ಟಿದ್ದೇವೆ’ ಎಂದು ಹೇಳಿದರು.
‘ಧರಂಪಾಲ್ ಕ್ಲಾಸಿಕ್ ಸೀರಿಸ್’ ಮೂಲಕ ಹೊರ ತಂದಿರುವ ‘ಪಂಚಾಯತ್ ರಾಜ್ ಆ್ಯಸ್ ದಿ ಬೇಸಿಸ್ ಆಫ್ ಇಂಡಿಯನ್ ಪಾಲಿಟಿ’, ‘ಇಂಡಿಯನ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ ಇನ್ ದಿ ಎಯಿಟಿಂತ್ ಸೆಂಚುರಿ’, ‘ಸಿವಿಲ್ ಡಿಸ್ಒಬಿಡಿಯನ್ಸ್ ಆ್ಯಂಡ್ ಇಂಡಿಯನ್ ಟ್ರೆಡಿಷನ್’, ‘ದಿ ಬ್ಯುಟಿಫುಲ್ ಟ್ರೀ’ ಹಾಗೂ ‘ಭಾರತೀಯ ಚಿತ್ತ ಮಾನಸ್ ಆ್ಯಂಡ್ ಕಲಾ’ ಪುಸ್ತಕಗಳ ಕುರಿತು ಇವುಗಳ ಸಂಪಾದಕರಾದ ಡಾ.ಜೆ.ಕೆ.ಬಜಾಜ್ ಮಾಹಿತಿ ನೀಡಿದರು.
ಕೇಂದ್ರ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಡಾ.ಕೆ.ವಿಜಯ ರಾಘವನ್, ಜಲಗಾಂವ್ನ ಗಾಂಧಿ ಸಂಶೋಧನಾ ಪ್ರತಿಷ್ಠಾನದ ಡಾ.ಗೀತಾ ಧರಂಪಾಲ್ ಅವರು ವಿಡಿಯೊ ಸಂದೇಶದ ಮೂಲಕ ಧರಂಪಾಲ್ ಅವರ ಕೊಡುಗೆಗಳನ್ನು ಸ್ಮರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.