ಪ್ರಜಾವಾಣಿ ವಾರ್ತೆ
ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ಅಸಹಜವಾಗಿ ಸಾವಿಗೀಡಾದ ಶವಗಳನ್ನು ಹೂತು ಹಾಕಲಾಗಿದೆ ಎಂಬ ದೂರಿನ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್ಐಟಿ), ಧರ್ಮಸ್ಥಳ– ಸುಬ್ರಹ್ಮಣ್ಯ ರಸ್ತೆಯ ಬೋಳಿಯಾರು ಕಾಡಿನೊಳಗೆ ಶುಕ್ರವಾರ ಶೋಧ ನಡೆಸಿತು.
ಸಾಕ್ಷಿ ದೂರುದಾರ ಗುರುತಿಸಿದ್ದ 12 ಕಡೆ ಈವರೆಗೆ ಶೋಧ ನಡೆದಿತ್ತು. 13ನೇ ಜಾಗ ಧರ್ಮಸ್ಥಳದ ಕಿಂಡಿ ಅಣೆಕಟ್ಟೆ ಸಮೀಪವಿದೆ. ಅಲ್ಲಿ ನೆಲ ಅಗೆಯುವ ಕಾರ್ಯ ಕೈಬಿಡಲಾಗಿತ್ತು. ಅಲ್ಲಿ ಗ್ರೌಂಡ್ ಪೆನಟ್ರೇಟ್ ರಾಡಾರ್ (ಜಿಪಿಆರ್) ತಂತ್ರಜ್ಞಾನವನ್ನು ಬಳಸಿ ಶೋಧ ನಡೆಸುವ ಸಾಧ್ಯತೆ ಇದೆ.
ಶುಕ್ರವಾರ ಬೆಳಿಗ್ಗೆ ಸಾಕ್ಷಿ ದೂರುದಾರನ ಜೊತೆಗೂಡಿ ಧರ್ಮಸ್ಥಳದಿಂದ 3 ಕಿ.ಮೀ ದೂರದ ಬೋಳಿಯಾರು ಕಾಡಿನೊಳಗೆ ಹೋಯಿತು. ಕಾಡಿನೊಳಗೆ ಸುಮಾರು ಅರ್ಧ ಕಿಲೊಮೀಟರ್ ದೂರದಲ್ಲಿ ದೂರುದಾರ ಜಾಗ ತೋರಿಸಿದ ಎನ್ನಲಾಗಿದೆ.
ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್, ಎಸ್ಐಟಿಯ ಎಸ್.ಪಿ ಜಿತೇಂದ್ರ ಕುಮಾರ್ ದಯಾಮ ಮತ್ತಿತರ ಅಧಿಕಾರಿಗಳ ಸಮಕ್ಷಮದಲ್ಲಿ ಸಂಜೆಯವರೆಗೂ ಕಾರ್ಮಿಕರು ಭೂಮಿ ಅಗೆದರು. ಆದರೆ ಮೃತದೇಹಗಳ ಕುರುಹು ಪತ್ತೆಯಾಗಲಿಲ್ಲ ಎಂದು ಎಸ್ಐಟಿ ಮೂಲಗಳು ತಿಳಿಸಿವೆ.
ಬಿಗಿ ಬಂದೋಬಸ್ತ್
ಧರ್ಮಸ್ಥಳದ ಪಾಂಗಾಳ ಮತ್ತು ಉಜಿರೆಯ ಬೆನಕ ಆಸ್ಪತ್ರೆ ಬಳಿ ಬುಧವಾರ ಎರಡು ಗುಂಪುಗಳ ನಡುವೆ ಘರ್ಷಣೆಯಾಗಿತ್ತು. ನಂತರ ಎಸ್ಐಟಿ ಕಾರ್ಯಾಚರಣೆಗೆ ಜಿಲ್ಲಾ ಪೊಲೀಸರು ಹೆಚ್ಚಿನ ಭದ್ರತೆ ಒದಗಿಸಿದ್ದು, ಶುಕ್ರವಾರ ಬೋಳಿಯಾರ್ನ ಕಾಡಿನೊಳಗೆ ತೆರಳುವಾಗಲೂ ಭಾರಿ ಭದ್ರತೆ ಇತ್ತು.
ಧರ್ಮಸ್ಥಳದಿಂದ ಮುಖ್ಯರಸ್ತೆಯಲ್ಲಿ ಅಂದಾಜು ಮೂರು ಕಿ.ಮೀ ದೂರದವರೆಗೆ ಸಾಗಿದ ಅಧಿಕಾರಿಗಳು ನಂತರ ಕಾಡಿನೊಳಗೆ ಪ್ರವೇಶಿಸಿದರು. ಆ ದಾರಿಯನ್ನು ಪ್ರವೇಶಿಸುವಲ್ಲಿ ‘ಪೊಲೀಸ್ ಟೇಪ್’ ಹಾಕಲಾಯಿತು. ಕಾರ್ಯಾಚರಣೆ ಮುಗಿಯುವವರೆಗೆ ಸಿಬ್ಬಂದಿ ಅಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.