ಬೆಂಗಳೂರು: ‘ಪ್ರಧಾನಿ ನರೇಂದ್ರ ಮೋದಿ ಅವರು ಮನ್–ಕಿ–ಬಾತ್ ಮೂಲಕ ಜನಸಾಮಾನ್ಯರ ಸ್ಫೂರ್ತಿದಾಯಕ ಯಶೋಗಾಥೆಗಳನ್ನು ಹೇಳಿದ್ದಾರೆ. ಈ ಕಾರ್ಯಕ್ರಮದಿಂದ ಹಲವು ಸಾಮಾಜಿಕ ಆಂದೋಲನಗಳೂ ನಡೆದಿವೆ’ ಎಂದು ಕೇಂದ್ರ ಸಚಿವ ಹಾಗೂ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
ಬಿಜೆಪಿಯ ಕಚೇರಿಯಲ್ಲಿ ಮನ್–ಕಿ–ಬಾತ್ನ 100ನೇ ಸಂಚಿಕೆ ವೀಕ್ಷಿಸಿದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿ ಈ ವಿಷಯ ತಿಳಿಸಿದರು.
‘ಈ ಕಾರ್ಯಕ್ರಮ ಕೇವಲ ಪ್ರಧಾನ ಮಂತ್ರಿಯವರ ಕಾರ್ಯಕ್ರಮವಲ್ಲ. ಇದು ಜನಾಂದೋಲನ ಕಾರ್ಯಕ್ರಮ. ಪ್ರಧಾನಿಯವರು ಪ್ರತಿನಿಧಿಯಷ್ಟೇ, ಎಲ್ಲರ ಪಾಲ್ಗೊಳ್ಳುವಿಕೆಯೊಂದಿಗೆ ಕಾರ್ಯಕ್ರಮ 100 ಸಂಚಿಕೆಗಳನ್ನು ಪೂರೈಸಿದೆ. ಸಾಮಾನ್ಯ ಜನರ ಆಶೋತ್ತರಗಳು ಮತ್ತು ಭಾವನೆಗಳನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದ ಪವಿತ್ರ ದಿನ ಇದಾಗಿದೆ’ ಎಂದರು.
‘ಪ್ರಧಾನಿಯವರು ಕೆಲವು ವಿಷಯಗಳನ್ನು ಎರಡು– ಮೂರು ಸಂಚಿಕೆಗಳಲ್ಲಿ ಪುನರಾವರ್ತಿಸಿದ್ದಾರೆ. ಇದು ನೀತಿಗಳ ಅನುಷ್ಠಾನಕ್ಕೆ ಅನುವು ಮಾಡಿಕೊಟ್ಟಿದೆ. ಇದರಿಂದ ಪ್ರೇರಣೆ ಪಡೆದು ಹಲವರು ಸಣ್ಣ ಉದ್ಯಮಗಳನ್ನು ಆರಂಭಿಸಿರುವುದು ಬೆಳಕಿಗೆ ಬಂದಿದೆ. ಅನೇಕರು ಬದುಕು ಕಟ್ಟಿಕೊಂಡಿದ್ದಾರೆ. ಸಂಸ್ಕೃತಿ, ಪರಂಪರೆ ಉತ್ತೇಜಿಸುವ, ಪರಿಸರ ಸಂರಕ್ಷಣೆ ಸಂದೇಶದ ವಿಶಿಷ್ಟ ಪ್ರಯೋಗವಾಗಿದೆ’ ಎಂದು ಪ್ರಧಾನ್ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.