ಧಾರವಾಡ: ‘ಧಾರವಾಡ ಸಾಹಿತ್ಯ ಸಂಭ್ರಮದ ಏಳನೇ ಆವೃತ್ತಿಯು ಬರುವ ಜ. 18ರಿಂದ ಮೂರು ದಿನಗಳ ಕಾಲ ಜರುಗಲಿದೆ’ ಎಂದು ಟ್ರಸ್ಟ್ನ ಅಧ್ಯಕ್ಷ ರಾಘವೇಂದ್ರ ಪಾಟೀಲ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ‘ಈ ಬಾರಿಯ ಸಾಹಿತ್ಯ ಸಂಭ್ರಮವನ್ನು ಡಾ. ಗಿರಡ್ಡಿ ಗೋವಿಂದರಾಜ ಅವರಿಗೆ ಅರ್ಪಿಸುವ ಮೂಲಕ ವಿಶೇಷ ಸಾಂಸ್ಕೃತಿಕ ಸಂವಾದ ರೂಪಿಸಲು ನಿರ್ಧರಿಸಲಾಗಿದೆ’ ಎಂದಿದ್ದಾರೆ.
‘ಓದು, ಚರ್ಚೆ, ಸಂವಾದಗಳೊಂದಿಗೆ ಹಳೆಗನ್ನಡ ಕಾವ್ಯದ ಗಮಕ-ವ್ಯಾಖ್ಯಾನ, ಜಾನಪದ ಕಲಾ ಪ್ರದರ್ಶನಗಳನ್ನು ಒಳಗೊಳ್ಳುವ ಮತ್ತು ಇಂದಿನ ಕನ್ನಡ ಸಾಹಿತ್ಯ-ಸಂಸ್ಕೃತಿಗಳ ಜ್ವಲಂತ ಸಮಸ್ಯೆಗಳ ಚಿಂತನವು ಮೂರು ದಿನಗಳ ಕಾಲ ನಡೆಯಲಿದೆ. ಒಟ್ಟು 15 ಗೋಷ್ಠಿಗಳು ಜರುಗಲಿವೆ. ಕನ್ನಡದ ವಿವಿಧ ಪೀಳಿಗೆಗೆ ಸೇರಿದ ಸುಮಾರು 200 ಸಾಹಿತಿಗಳು ಇದರಲ್ಲಿ ಭಾಗವಹಿಸಲಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.
‘ಇಡೀ ಕರ್ನಾಟಕದ ಸಾಹಿತ್ಯ ಸಮಾವೇಶಗಳಿಗೆ ಒಂದು ಹೊಸ ಮಾದರಿಯನ್ನು ಒದಗಿಸಿದ ಧಾರವಾಡ ಸಾಹಿತ್ಯ ಸಂಭ್ರಮವು, ಸಮಸ್ಯೆಗಳ ಅರ್ಥಪೂರ್ಣ ಚರ್ಚೆಗೆ ಅವಕಾಶ ಒದಗಿಸಿದೆ.ಇದು ಯಾವದೇ ಪಂಥ ಪಂಗಡಗಳಿಗೆ ಸೀಮಿತವಾಗದೆ ಒಂದು ಮುಕ್ತ ಚರ್ಚೆಯ ವೇದಿಕೆಯಾಗಿದೆ. ಇದರಲ್ಲಿ ಪಾಲ್ಗೊಳ್ಳಲಿಚ್ಛಿಸುವ ಪ್ರತಿನಿಧಿಗಳಿಗೆ ಡಿ. 15ರ ನಂತರ ನೋಂದಣಿ ಆರಂಭವಾಗಲಿದೆ’ ಎಂದು ಪಾಟೀಲ ಅವರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.