
ದಿನೇಶ್ ಗುಂಡೂರಾವ್
ಬೆಂಗಳೂರು: ರಾಜ್ಯದ ವಿವಿಧ ಜಿಲ್ಲಾ ಆಸ್ಪತ್ರೆಗಳಲ್ಲಿ ಸಿಟಿ ಸ್ಕ್ಯಾನ್ ಮತ್ತು ಎಂಆರ್ಐಗೆ ಸೇವೆ ಸ್ಥಗಿತಗೊಂಡಿರುವುದರಿಂದ 13 ಜಿಲ್ಲಾ ಆಸ್ಪತ್ರೆಗಳಲ್ಲಿ ಶನಿವಾರದಿಂದಲೇ ಪರ್ಯಾಯ ವ್ಯವಸ್ಥೆ ಮಾಡಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಕ್ರಸ್ನ ಡಯಾಗ್ನೋಸ್ಟಿಕ್ ಲಿಮಿಟೆಡ್ ತನ್ನ ಸೇವೆ ನಿಲ್ಲಿಸಿರುವುದರಿಂದ 13 ಜಿಲ್ಲಾಸ್ಪತ್ರೆಗಳಲ್ಲಿ ರೋಗಿಗಳಿಗೆ ಸಮಸ್ಯೆ ಆಗಿದೆ. ಆಸ್ಪತ್ರೆಗಳ ಸಮೀಪದ ಎಂಆರ್ಐ, ಸಿಟಿ ಸ್ಕ್ಯಾನಿಂಗ್ ಕೇಂದ್ರಗಳಲ್ಲಿ ಸೇವೆ ಪಡೆಯಲು ಅವಕಾಶ ನೀಡಲಾಗುವುದು ಎಂದು ಅವರು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
‘2019 ರಿಂದ ಬಾಕಿ ಇರುವ ₹140 ಕೋಟಿ ಪಾವತಿಸುವಂತೆ ಕ್ರಸ್ನ ಡಯಾಗ್ನೋಸ್ಟಿಕ್ ಒತ್ತಾಯಿಸಿದೆ. ಆದರೆ, ಸಿಟಿ ಸ್ಕ್ಯಾನ್ ಮತ್ತು ಎಂಆರ್ಐ ಪರೀಕ್ಷೆಯ ಬಿಲ್ನಲ್ಲಿ ಸಾಕಷ್ಟು ವ್ಯತ್ಯಾಸಗಳು ಕಂಡುಬಂದಿವೆ. ಅವರು ಹೇಳಿದಷ್ಟು ಹಣ ಕೊಡಲು ಸಾಧ್ಯವಿಲ್ಲ. ಆದ್ದರಿಂದ ಎಷ್ಟು ಕೊಡಬೇಕು ಮತ್ತು ಯಾವಾಗ ಕೊಡಬೇಕು ಎಂಬುದನ್ನು ತೀರ್ಮಾನ ಮಾಡಿ ಬಿಲ್ ಪಾವತಿಸುತ್ತೇವೆ. ಬಿಲ್ ಪಾವತಿಗೆ ಸರ್ಕಾರದ ಬಳಿ ಹಣದ ಕೊರತೆ ಇಲ್ಲ. ವಿರೋಧ ಪಕ್ಷಗಳು ಸುಮ್ಮನೆ ಅಪಪ್ರಚಾರ ಮಾಡುತ್ತಿವೆ’ ಎಂದರು.
ಇವರು ಇಡೀ ದೇಹದ ಸ್ಕ್ಯಾನ್ ಮಾಡುವುದರ ಬದಲು, ಬೇರೆ ಬೇರೆ ಅಂಗಗಳ ಸ್ಕ್ಯಾನ್ ಮಾಡಿದ ಬಿಲ್ಗಳನ್ನು ಕೊಟ್ಟಿದ್ದಾರೆ. ಹೀಗಾಗಿ ಪ್ರತಿ ದಿನದ ಸ್ಕ್ಯಾನ್ ಸಂಖ್ಯೆ ಸಂಶಯಾಸ್ಪದ ರೀತಿಯಲ್ಲಿ ಏರಿಕೆಯಾಗಿತ್ತು. ಹೀಗಾಗಿ ಸುತ್ತೋಲೆ ಹೊರಡಿಸಿ, ದೇಹದ ಪ್ರತ್ಯೇಕ ಸ್ಕ್ಯಾನಿಂಗ್ ಮಾಡುವುದಕ್ಕೆ ಅವಕಾಶವಿಲ್ಲ, ಇಡೀ ದೇಹದ ಸ್ಕ್ಯಾನಿಂಗ್ ಮಾಡಬೇಕೆಂದು ಸೂಚಿಸಲಾಗಿತ್ತು. ಆ ಬಳಿಕ ದೈನಂದಿನ ಸ್ಕ್ಯಾನಿಂಗ್ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿತ್ತು ಎಂದು ದಿನೇಶ್ ಅವರು ಅಂಕಿ–ಸಂಖ್ಯೆ ಉಲ್ಲೇಖಿಸಿ ವಿವರಿಸಿದರು.
‘ನಾವು ತೆಗೆದುಕೊಂಡ ಕಟ್ಟುನಿಟ್ಟಿನ ಕ್ರಮದ ಕಾರಣ ಕಳೆದ ಒಂದೂವರೆ ವರ್ಷದಲ್ಲಿ ಸರ್ಕಾರಕ್ಕೆ ಸುಮಾರು ₹200 ಕೋಟಿ ಉಳಿತಾಯ ಆಗಿದೆ. ಹಣ ಬಿಡುಗಡೆಗಾಗಿ ಹಲವು ರೀತಿಯ ಒತ್ತಡಗಳನ್ನು ತಂದಿದ್ದರು. ನಾವು ಅದಕ್ಕೆ ಬಗ್ಗಲಿಲ್ಲ. ಆ ಅವಧಿಯಲ್ಲಿ ಅಂಗಾಂಗಳ ಸ್ಕ್ಯಾನಿಂಗ್ ಮಾಡಿದ್ದಕ್ಕೆ ದೃಢಿಕರಣ ಪತ್ರ ಕೊಟ್ಟರೆ ಮಾತ್ರ ಹಣ ಬಿಡುಗಡೆ ಮಾಡುವುದಾಗಿ ಷರತ್ತು ಹಾಕಿದ್ದೇವೆ’ ಎಂದು ತಿಳಿಸಿದರು.
‘ಸರ್ಕಾರಿ ಆಸ್ಪತ್ರೆಗಳಲ್ಲಿ ಎಂಆರ್ಐ ಮತ್ತು ಸಿಟಿ ಸ್ಕ್ಯಾನ್ಗಳ ಸೇವೆ ನಿಲ್ಲಿಸಿರುವ ವಿಚಾರದಲ್ಲಿ ವಿರೋಧ ಪಕ್ಷಗಳು ಸತ್ಯಕ್ಕೆ ದೂರವಾದ ಆರೋಪಗಳನ್ನು ಮಾಡುತ್ತಿವೆ. ಸರ್ಕಾರದ ಬಳಿ ಹಣ ಇಲ್ಲ ಎಂದೂ ಆರೋಪಿಸಿವೆ. ಅವರ ಆರೋಪದಲ್ಲಿ ಹುರುಳಿಲ್ಲ. ಖಾಸಗಿ ಕಂಪನಿ ಬರೆದ ಪತ್ರವನ್ನು ಆಧರಿಸಿ ಆರೋಪಗಳನ್ನು ಮಾಡುತ್ತಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡುವುದಿಲ್ಲ. ಸಾರ್ವಜನಿಕರಿಗೆ ತೊಂದರೆ ಆಗದಂತೆ ವ್ಯವಸ್ಥೆ ಮಾಡುವುದು ನಮ್ಮ ಕರ್ತವ್ಯ’ ಎಂದರು.
‘ಏಳು ಸರ್ಕಾರಿ ಆಸ್ಪತ್ರೆಗಳಲ್ಲಿ ಎಂಆರ್ಐ ಮತ್ತು ಮೂರು ಸಿಟಿ ಸ್ಕ್ಯಾನ್ಗಳನ್ನು ಖರೀದಿಸಲು ಟೆಂಡರ್ ಕರೆಯಲಾಗಿದೆ. ಇಲಾಖೆ ವತಿಯಿಂದಲೇ ಯಂತ್ರಗಳನ್ನು ಪೂರೈಕೆ ಮಾಡುತ್ತೇವೆ’ ಎಂದು ಹೇಳಿದರು.
1200 ಜನರಿಗೆ ನೇಮಕ ಪತ್ರ ವಿತರಣೆ
ಇಂದು ಆರೋಗ್ಯ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಭರ್ತಿ ಆಗಿರುವ ಸುಮಾರು 1200 ಜನರಿಗೆ ನೇಮಕಾತಿ ಪತ್ರಗಳನ್ನು ಅಂಬೇಡ್ಕರ್ ಭವನದಲ್ಲಿ ಶನಿವಾರ ನಡೆಯುವ ಕಾರ್ಯಕ್ರಮದಲ್ಲಿ ವಿತರಿಸಲಾಗುವುದು ಎಂದು ದಿನೇಶ್ ಗುಂಡೂರಾವ್ ಹೇಳಿದರು. ಡಿ ಫಾರ್ಮಾ ಓದುತ್ತಿರುವ 223 ಮಂದಿ ವಿದ್ಯಾರ್ಥಿಗಳಿಗೆ ಒಂದು ವರ್ಷದ ಇಂಟರ್ನ್ಶಿಪ್ ಕಾರ್ಯಕ್ರಮಕ್ಕೆ ಅನುಮತಿ ನೀಡಿದ್ದೇವೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಅವರು ಕೆಲಸ ಮಾಡುತ್ತಾರೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.