ADVERTISEMENT

ಬಹಮನಿ ಕೋಟೆಯಲ್ಲಿ ಪೂಜೆಗೆ ಯತ್ನ; ದಿವ್ಯಾ ಹಾಗರಗಿ ಸೇರಿ ಹಲವರ ಬಂಧನ, ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2026, 11:01 IST
Last Updated 15 ಫೆಬ್ರುವರಿ 2026, 11:01 IST
<div class="paragraphs"><p>ಕಲಬುರಗಿ ‌ಕೋಟೆ ಎದುರು ಪ್ರತಿಭಟನಕಾರರನ್ನು‌ ವಶಕ್ಕೆ ಪಡೆದ ಪೊಲೀಸರು</p></div>

ಕಲಬುರಗಿ ‌ಕೋಟೆ ಎದುರು ಪ್ರತಿಭಟನಕಾರರನ್ನು‌ ವಶಕ್ಕೆ ಪಡೆದ ಪೊಲೀಸರು

   

ಕಲಬುರಗಿ: ನಗರದ ಬಹಮನಿ ಕೋಟೆ ಆವರಣದಲ್ಲಿರುವ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಅಂಗವಾಗಿ ಪೂಜೆಗೆ ಅನುಮತಿ ಪಡೆಯದೇ ಕಲಬುರಗಿ ಕೋಟೆಯೊಳಗೆ ಪ್ರವೇಶಿಸಿ ಪೂಜೆಗೆ ಯತ್ನಿಸಿದ ಪಿಎಸ್‌ಐ ನೇಮಕಾತಿ ಅಕ್ರಮದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಸೇರಿದಂತೆ ಹಲವರನ್ನು ಪೊಲೀಸರು ಭಾನುವಾರ ವಶಕ್ಕೆ ಪಡೆದು, ಬಳಿಕ ಬಿಡುಗಡೆ ಮಾಡಿದ್ದಾರೆ.

ಮಹಾಶಿವರಾತ್ರಿ ಅಂಗವಾಗಿ ಕಲಬುರಗಿಯ ಬಹುಮನಿ ಕೋಟೆಯೊಳಗೆ ಸ್ವಯಂಭು ಸೋಮೇಶ್ವರ ಮಂದಿರವಿದ್ದು, ಶಿವರಾತ್ರಿ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಲು ದಿವ್ಯಾ ಹಾಗರಗಿ ಹಾಗೂ ಇತರರು 'ಹರ‌ಹರ‌ ಮಹಾದೇವ' ಘೋಷಣೆ ಕೂಗುತ್ತ ಪೂಜಾ ಸಾಮಗ್ರಿಗಳೊಂದಿಗೆ ಆಗಮಿಸಿದ್ದರು.

ADVERTISEMENT

ಆದರೆ, ಅವರನ್ನು ಪೊಲೀಸರು ತಡೆದರು. ಬಹಮನಿ‌ ಕೋಟೆ ಭಾರತೀಯ ಪುರಾತತ್ವ ಇಲಾಖೆಯಡಿ ಬರುತ್ತದೆ. ಅಲ್ಲಿ ಪೂಜೆ ಸಲ್ಲಿಸಲು ಸಾರ್ವಜನಿಕರಿಗೆ ಪುರಾತತ್ವ ಇಲಾಖೆ ಅನುಮತಿ ನೀಡಿಲ್ಲ. ಹೀಗಾಗಿ ಪೂಜೆಗೆ ಅವಕಾಶ‌ವಿಲ್ಲ‌. ನೀವೆಲ್ಲ ಇಲ್ಲಿಂದ ನಿರ್ಗಮಿಸಬೇಕು ಎಂದು ಎಸಿಪಿ‌ ಶಿವನಗೌಡ ಪಾಟೀಲ ಹಿಂದೂಪರ‌ ಘಟನೆಗಳ ಮುಖಂಡರಿಗೆ ಮನವಿ ಮಾಡಿದರು. ಆದರೆ, ಇದಕ್ಕೆ ಹಿಂದೂಪರ ಸಂಘಟನೆಗಳ ಮುಖಂಡರು ವಿರೋಧ ವ್ಯಕ್ತಪಡಿಸಿದರು. 'ಹೋದಬಾರಿ ಪೂಜೆಗೆ ಇಲ್ಲದ ಅನುಮತಿ ಈಗೇಕೆ?'ಎಂದು ಪ್ರಶ್ನಿಸಿದರು.

ಪೊಲೀಸರು ಪೂಜೆಗೆ ಅವಕಾಶ ನೀಡದಿದ್ದರಿಂದ ಕೆಲ ಕಾಲ ನಡುರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಪೂಜೆ ಮುಂದಾಳತ್ವ ವಹಿಸಿದ್ದ ದಿವ್ಯಾ ಹಾಗರಗಿ, ಸಾಗರ ರಾಠೋಡ, ಅಣ್ಣರಾವ ಪಾಟೀಲ, ಭರತ ಮಡಿವಾಳ, ಶಶಿಕುಮಾರ ಶೆಟ್ಟಿ ಸೇರಿದಂತೆ ಹಲವು ಹಿಂದೂಪರ ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೊಲೀಸರು ವಾಹನದಲ್ಲಿ ಕೂರಿಸಿಕೊಂಡು ಹೋಗಿ ಫರಹತಾಬಾದ್ ಠಾಣೆಗೆ ಕರೆದೊಯ್ದರು. ನಂತರ ಬಿಡುಗಡೆ ಮಾಡಿದರು.

ಇದಕ್ಕೂ ಮುನ್ನ ಮಾತನಾಡಿದ ದಿವ್ಯಾ ಹಾಗರಗಿ, 'ಕೋಟೆಯೊಳಗಿನ ಮಂದಿರದಲ್ಲಿ ಸಾರ್ವಜನಿಕರಿಗೆ ನಿತ್ಯ ಪೂಜೆಗೆ ಅವಕಾಶ ನೀಡಬೇಕು. 2-3 ವರ್ಷಗಳಿಂದ ಪೂಜೆ ಸಲ್ಲಿಸಿಕೊಂಡು ಬರುತ್ತಿದ್ದರೂ ಈ ಬಾರಿ ಪುರಾತತ್ವ ಇಲಾಖೆ ಅವಕಾಶ ನೀಡಿಲ್ಲ. ಅಧಿಕಾರಿಗಳ ಈ ನಿರ್ಧಾರ ಖಂಡನೀಯ. ಹಿಂದೂ ಸಮಾಜವು ಎಚ್ಚೆತ್ತುಕೊಳ್ಳದಿದ್ದರೆ ಭವಿಷ್ಯದಲ್ಲಿ ಉಳಿಗಾಲವಿಲ್ಲ' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.