ADVERTISEMENT

ಅನುದಾನ ಕಡಿತ: ಸಚಿವ ಶಿವಕುಮಾರ್‌ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2019, 19:07 IST
Last Updated 4 ಜುಲೈ 2019, 19:07 IST

ಬೆಂಗಳೂರು: ‘ಕನ್ನಡ ಸಾಹಿತ್ಯ, ಸಂಸ್ಕೃತಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಸಂಘ, ಸಂಸ್ಥೆಗಳಿಗೆ ಅನುದಾನ ನಿಲ್ಲಿಸುತ್ತೇನೆ ಎಂದು ಹೇಳಿಲ್ಲ. ಅನುದಾನ ನೀಡಲು ಮಾರ್ಗದರ್ಶಿ ಸೂತ್ರ ರೂಪಿಸಲಾಗುವುದು’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

ಸಂಘಗಳಿಗೆ ನೀಡುತ್ತಿರುವ ಅನುದಾನ ಸ್ಥಗಿತಗೊಳಿಸುವುದಾಗಿ ಹೇಳಿಕೆ ನೀಡಿದ್ದ ಸಚಿವರು, ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಗುರುವಾರ ಈ ಸ್ಪಷ್ಟನೆ ನೀಡಿದ್ದಾರೆ.

ನೈಜ ಸಂಘ, ಸಂಸ್ಥೆಗಳು ನಡೆಸುವ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡಲಾಗುವುದು. ಅಕ್ರಮ ನಡೆಸುವ ಸಂಘಟನೆಗಳಿಗೆ ಕಡಿವಾಣ ಹಾಕುವುದು ಸರ್ಕಾರದ ಉದ್ದೇಶವಾಗಿದೆ. ನೋಂದಣಿ ಆಗದ ಲೆಟರ್ ಹೆಡ್ ಸಂಸ್ಥೆಗಳು, ಕಾರ್ಯಕ್ರಮ ನಡೆಸದೆ ಅನುದಾನ ಪಡೆದುಕೊಳ್ಳುವುದು, ಒಂದೇ ಕಾರ್ಯಕ್ರಮಕ್ಕೆ ಹಲವೆಡೆ ಅನುದಾನ ಪಡೆದು ದುರ್ಬಳಕೆ ಮಾಡಿಕೊಳ್ಳುತ್ತಿರುವ ದೂರು ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.

ADVERTISEMENT

ಹೊಸ ನಿಯಮಗಳು ಪ್ರಸಕ್ತ ಸಾಲಿನಿಂದ ಅನ್ವಯ ಆಗುತ್ತವೆ.‘ಕರ್ನಾಟಕ ಸಂಸ್ಕೃತಿ’ ಎಂಬ ಹೊಸ ಕಾರ್ಯಕ್ರಮಕ್ಕೂ ಅನುದಾನ ನಿಯಂತ್ರಣಕ್ಕೂ ಯಾವುದೇ ಸಂಬಂಧ ಇಲ್ಲ. ಸ್ಥಳೀಯ ಕಲಾವಿದರು, ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸುವುದು ಹಾಗೂ ಜತೆಗೆ ಇಲಾಖೆ ಹಣ ಸದ್ಬಳಕೆ ಮಾಡುವುದು ಈ ಕಾರ್ಯಕ್ರಮದ ಉದ್ದೇಶ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.