ADVERTISEMENT

ಕೊಳೆಗೇರಿ ಜನರ ಬಗ್ಗೆ ಬಿಜೆಪಿಗೆ ಇಂತಹ ಅಸಡ್ಡೆ ಯಾಕೆ: ಡಿಕೆಶಿ ಪ್ರಶ್ನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಜೂನ್ 2022, 15:01 IST
Last Updated 16 ಜೂನ್ 2022, 15:01 IST
ಡಿ.ಕೆ ಶಿವಕುಮಾರ್‌
ಡಿ.ಕೆ ಶಿವಕುಮಾರ್‌   

ಬೆಂಗಳೂರು: ರಾಯಚೂರಿನಲ್ಲಿ ಕಲುಷಿತ ನೀರಿನಿಂದಾಗಿ ಆರು ಜನ ಮೃತಪಟ್ಟಿರುವ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಪ್ರತಿಕ್ರಿಯಿಸಿದ್ದು, ‘ಕೊಳೆಗೇರಿ ಜನರ ಬಗ್ಗೆ ಬಿಜೆಪಿಗೆ ಇಂತಹ ಅಸಡ್ಡೆ ಯಾಕೆ?’ ಎಂದು ಪ್ರಶ್ನಿಸಿದ್ದಾರೆ.

ರಾಯಚೂರಿನ ಜನರಿಗೆ ನಗರಸಭೆ ಪೂರೈಸುವ ನೀರು ಕುಲುಷಿತಗೊಂಡಿದೆ. ಕೊಳೆಗೇರಿ ಪ್ರದೇಶದ ಜನರು ಇದೇ ನೀರು ಕುಡಿದು ಅನಾರೋಗ್ಯಕ್ಕೆ ಒಳಗಾಗಿದ್ದು, ಈಗಾಗಲೇ ಆರು ಮಂದಿ ಮೃತಪಟ್ಟಿದ್ದಾರೆ. ಈ ಬಗ್ಗೆ ಪ್ರಜಾವಾಣಿಯು ಗುರುವಾರದ (ಜೂನ್‌ 16) ಸಂಚಿಕೆಯಲ್ಲಿ, ‘ಕಲುಷಿತ ನೀರು: ಪತ್ತೆಯಾಗದ ಮೂಲ’ ಎಂಬ ಶೀರ್ಷಿಕೆಯಡಿ, ಮುಖಪುಟದಲ್ಲಿ ವರದಿ ಪ್ರಕಟಿಸಿತ್ತು.

ಈ ವರದಿಯನ್ನು ಲಗತ್ತಿಸಿ ಟ್ವಿಟರ್‌ನಲ್ಲಿ ಪೋಸ್ಟ್‌ ಪ್ರಕಟಿಸಿರುವ ಡಿ.ಕೆ ಶಿವಕುಮಾರ್‌, ‘ರಾಯಚೂರಿನ ಕೊಳೆಗೇರಿ ಪ್ರದೇಶದ ಜನ ಕುಡಿಯುವ ನೀರು ಕಲುಷಿತಗೊಂಡ ಕಾರಣ ಸಾವಿಗೀಡಾಗುತ್ತಿದ್ದೂ, ಬಿಜೆಪಿ ಸರ್ಕಾರ ಗಮನಿಸುತ್ತಿಲ್ಲ. ಇಲ್ಲಿಯವರೆಗೆ 6 ಜನರ ಪ್ರಾಣಹಾನಿಯಾಗಿದೆ. ಆದರೂ ಈ ಕಲುಷಿತ ನೀರಿನ ಮೂಲ ಪತ್ತೆಹಚ್ಚುವ ಕಾರ್ಯ ನಡೆದಿಲ್ಲ. ದ್ವೇಷ ರಾಜಕಾರಣದಲ್ಲಿ ಮುಳುಗಿರುವ ಬಿಜೆಪಿಗೆ ಜನರ ಸಂಕಷ್ಟದ ಬಗ್ಗೆ ಅರಿವಿಲ್ಲ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಇನ್ನು ಮೃತಪಟ್ಟವರ ಕುಟುಂಬಕ್ಕೆ ಮುಖ್ಯಮಂತ್ರಿಗಳು ಪರಿಹಾರ ಘೋಷಣೆ ಮಾಡಿ ಮೌನವಹಿಸಿದ್ದಾರೆ. ಸಿಎಂ ಆದವರ ಕರ್ತವ್ಯ ಇಷ್ಟಕ್ಕೇ ಸೀಮಿತವೇ? ಜನರ ಕಷ್ಟಕ್ಕೆ ಸ್ಪಂದಿಸದ ಈ ಬಿಜೆಪಿ ಸರ್ಕಾರ ನೈತಿಕತೆ ಜೊತೆಗೆ ಜವಬ್ದಾರಿಯನ್ನೂ ಮರೆತಿದೆಯೇ. ಕೊಳೆಗೇರಿ ಜನರ ಬಗ್ಗೆ ಬಿಜೆಪಿಗೆ ಇಂತಹ ಅಸಡ್ಡೆ ಯಾಕೆ? ಬಿಜೆಪಿ ನಾಯಕರೇ ಇದಕ್ಕೆ ನಿಮ್ಮ ಉತ್ತರ ಏನು?’ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ತುಂಗಭದ್ರಾ ನದಿಯಿಂದ ಕಾಲುವೆ ಮೂಲಕ ರಾಂಪುರ ಕೆರೆಯಲ್ಲಿ ಸಂಗ್ರಹವಾಗುವ ನೀರು ತಿಳಿ ನೀಲಿ ಬಣ್ಣದಿಂದ ಕೂಡಿದೆ. ಕೆರೆಯಿಂದ ಶುದ್ಧೀಕರಣ ಘಟಕಕ್ಕೆ ಹರಿಯುವ ನೀರು ತಿಳಿ ಹಸಿರು ಬಣ್ಣಕ್ಕೆ ತಿರುಗುತ್ತದೆ. ಅಲ್ಲಿಂದ ಓವರ್‌ಹೆಡ್‌ ಟ್ಯಾಂಕ್‌ಗಳಿಗೆ ತುಂಬಿಸಲಾಗುತ್ತದೆ. ಅಲ್ಲಿಂದ ಮನೆಗಳಿಗೆ ತಲುಪುವಷ್ಟರಲ್ಲಿ ನೀರು ಹಳದಿ ಹಾಗೂ ಗಾಢ ಹಸಿರು ಬಣ್ಣಕ್ಕೆ ತಿರುಗಿರುತ್ತದೆ. ಕಲುಷಿತ ನೀರು ಪೂರೈಕೆಯಿಂದ ನಗರದಲ್ಲಿ 15 ದಿನಗಳ ಅಂತರದಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ. ಮೃತರ ಕುಟುಂಬಕ್ಕೆ ನಗರಸಭೆ ₹10 ಲಕ್ಷ ಪರಿಹಾರ ಘೋಷಿಸಿದ್ದು, ಮೂರು ಕುಟುಂಬಕ್ಕೆ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.