ADVERTISEMENT

ಡಿಕೆಶಿ 50 ದಿನಗಳ ಬಂಧನದಿಂದ ಮುಕ್ತ; ಸಂತಸದಲ್ಲಿ ಬಿಕ್ಕಿ ಬಿಕ್ಕಿ ಅತ್ತ ಸುರೇಶ್

ಜಾಮೀನು ಮಂಜೂರು

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2019, 11:09 IST
Last Updated 23 ಅಕ್ಟೋಬರ್ 2019, 11:09 IST
ಡಿ.ಕೆ.ಶಿವಕುಮಾರ್‌ ಬೆಂಬಲಿಗರು –ಸಾಂದರ್ಭಿಕ ಚಿತ್ರ
ಡಿ.ಕೆ.ಶಿವಕುಮಾರ್‌ ಬೆಂಬಲಿಗರು –ಸಾಂದರ್ಭಿಕ ಚಿತ್ರ   

ನವದೆಹಲಿ: ವಿಚಾರಣೆಗೆಂದು ಕಾಂಗ್ರೆಸ್‌ ಮುಖಂಡ, ಶಾಸಕ ಡಿ.ಕೆ.ಶಿವಕುಮಾರ್‌ ಅವರನ್ನು ದೆಹಲಿಯ ಕಚೇರಿಗೆ ಕರೆಸಿಕೊಂಡಿದ್ದ ಜಾರಿ ನಿರ್ದೇಶನಾಲಯ(ಇ.ಡಿ) ಸೆಪ್ಟೆಂಬರ್‌ 3ರಂದು ಬಂಧಿಸಿತ್ತು. ಐವತ್ತು ದಿನ ಬಂಧನದಲ್ಲಿದ್ದ ಡಿ.ಕೆ.ಶಿವಕುಮಾರ್‌ ಅವರಿಗೆ ಬುಧವಾರ ಜಾಮೀನು ಮಂಜೂರಾಗುತ್ತಿದ್ದಂತೆ ಅವರ ಸಹೋದರ ಬಿಕ್ಕಿ ಬಿಕ್ಕಿ ಅತ್ತರು.

'ಇ.ಡಿ.ಯಿಂದ ಈಗಾಗಲೇ 14 ಜನರ ವಿಚಾರಣೆ ನಡೆದಿದ್ದು ಯಾವುದೇ ರೀತಿಯ ಸಾಕ್ಷ್ಯ ನಾಶದ ಸಾಧ್ಯತೆ ಇಲ್ಲ' ಎಂದು ಅಭಿಪ್ರಾಯಪಟ್ಟ ದೆಹಲಿ ಹೈಕೋರ್ಟ್‌ ನ್ಯಾಯಮೂರ್ತಿ ಸುರೇಶಕುಮಾರ ‌ಕೈತ್ಷರತ್ತುಬದ್ಧ ಜಾಮೀನು ಮಂಜೂರು ಮಾಡಿದರು.

ಜಾಮೀನು ಆದೇಶ ಪ್ರಕಟಿಸುತ್ತಿದ್ದಂತೆ ನ್ಯಾಯಾಲಯದ ಆವರಣದಲ್ಲಿಯೇ ಸಂಸದ ಡಿ.ಕೆ.ಸುರೇಶ್‌ ಕಣ್ಣೀರು ಸುರಿಸಿದರು.ಜಾಮೀನು ದೊರೆತಿದ್ದರಿಂದ ಶಿವಕುಮಾರ್‌ ಅವರ ಬೆಂಬಲಿಗರು ಸಂತಸದಿಂದ ಕಣ್ಣೀರಾದರು.

ಆರೋಗ್ಯ ಸ್ಥಿತಿ ಹಿನ್ನೆಲೆಯಲ್ಲಿ ಹಾಗೂ ದೇಶ‌ ಬಿಟ್ಟು ಪಲಾಯನ ಮಾಡುವ ಸಾಧ್ಯತೆ ಇಲ್ಲದ್ದರಿಂದ ಜಾಮೀನು ಮಂಜೂರು ಮಾಡಲಾಗಿದೆ.₹25 ಲಕ್ಷ ಮೌಲ್ಯದ ಎರಡು ಬಾಂಡ್‌ಗಳು ಮತ್ತು ಇಬ್ಬರು ಸೆಕ್ಯುರಿಟಿ ನೀಡಬೇಕು, ವಿಚಾರಣೆಗೆ ಸಹಕರಿಸಬೇಕೆಂದು ಕೋರ್ಟ್‌ ಷರತ್ತು ವಿಧಿಸಿದೆ.

ಸಂಭ್ರಮಾಚರಣೆ

ಕನಕಪುರದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ರಾಮನಗರದ ಐಜೂರು ವೃತ್ತದಲ್ಲಿಯೂ ಕಾರ್ಯಕರ್ತರಿಂದ‌ ಸಂಭ್ರಮಾಚರಣೆ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.