ADVERTISEMENT

‘ಇಟಲಿ ಟೆಂಪಲ್‌’ಗೆ ಕಪ್ಪ ಒಪ್ಪಿಸಿದರೆ ಡಿಕೆಶಿ ಸಿಎಂ: ಆರ್‌. ಅಶೋಕ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2025, 11:40 IST
Last Updated 23 ಅಕ್ಟೋಬರ್ 2025, 11:40 IST
   

ದಾವಣಗೆರೆ: ಚಾಮುಂಡೇಶ್ವರಿ, ಮಾರಮ್ಮ ದೇಗುಲ ಕಾಂಗ್ರೆಸ್‌ಗೆ ಇಷ್ಟವಾಗುವುದಿಲ್ಲ. ದೆಹಲಿಯಲ್ಲಿರುವ ‘ಇಟಲಿ ಟೆಂಪಲ್‌’ ಸುತ್ತಿ ಸರಿಯಾದ ಕಪ್ಪ ಒಪ್ಪಿಸಿದರೆ ಮಾತ್ರ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮುಖ್ಯಮಂತ್ರಿಯಾಗುತ್ತಾರೆ ಎಂದು ವಿರೋಧ ಪಕ್ಷದ ನಾಯಕ ಆರ್‌. ಅಶೋಕ ತಿಳಿಸಿದರು.

‘ಡಿ.ಕೆ. ಶಿವಕುಮಾರ್‌ ದಾರಿತಪ್ಪಿದ ಮಗನಂತೆ ವರ್ತಿಸುತ್ತಿದ್ದಾರೆ. ಬೆಂಗಳೂರಿನ ರಸ್ತೆಗಳ ಗುಂಡಿ ಮುಚ್ಚುವುದು ಬಿಟ್ಟು ದೇಗುಲಗಳಿಗೆ ಅಲೆದಾಡುತ್ತಿದ್ದಾರೆ. ದೇಗುಲ ದರ್ಶನ (ಟೆಂಪಲ್‌ ರನ್‌) ಮಾಡಿದರೆ ಪ್ರಯೋಜನವಿಲ್ಲ ಎಂಬುದನ್ನು ಕಾಂಗ್ರೆಸ್‌ ನಾಯಕರೇ ಹೇಳಿದ್ದಾರೆ. ಕಾಂಗ್ರೆಸ್‌ನ ದೊಡ್ಡ ದೇಗುಲ ಸುತ್ತದೇ ಹೋದರೆ ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ’ ಎಂದು ಗುರುವಾರ ಸುದ್ದಿಗಾರರ ಬಳಿ ಅಭಿಪ್ರಾಯ ವ್ಯಕ್ತಪಡಿಸಿದರು.

‘ನವೆಂಬರ್‌ ಕ್ರಾಂತಿಯ ಬಗ್ಗೆ ನಾನು ನೀಡಿದ ಹೇಳಿಕೆಯನ್ನು ಕಾಂಗ್ರೆಸ್‌ ಅಲ್ಲಗಳೆದಿತ್ತು. ಸಿದ್ದರಾಮಯ್ಯ ಅವರ ರಾಜಕೀಯ ಸಂಧ್ಯಾಕಾಲದ ಬಗ್ಗೆ ಪುತ್ರರೂ ಆಗಿರುವ ವಿಧಾನಪರಿಷತ್‌ ಸದಸ್ಯ ಯತೀಂದ್ರ ಬಹಿರಂಗ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್‌ ಒಡೆದ ಮನೆಯಾಗಿದ್ದು, ಡಿ.ಕೆ.ಶಿವಕುಮಾರ್‌ ಅವರಿಗೆ ಪಂಗನಾಮ ಹಾಕಲು ವ್ಯವಸ್ಥಿತ ಪ್ರಯತ್ನ ನಡೆಯುತ್ತಿದೆ’ ಎಂದರು.

ADVERTISEMENT

‘ಬಿಹಾರ ಚುನಾವಣೆಗೆ ₹400 ಕೋಟಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಕಾಂಗ್ರೆಸ್‌ ಹೈಕಮಾಂಡ್‌ ಟಾರ್ಗೆಟ್‌ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮನೆಯಲ್ಲಿ ಔತಣಕೂಟ ಏರ್ಪಡಿಸಿ ಸಚಿವರಿಗೆ ಈ ವಿಚಾರ ಮುಟ್ಟಿಸಿದ್ದಾರೆ. ಇಲಾಖಾವಾರು ಕಪ್ಪವನ್ನು ನಿಗದಿಪಡಿಸಲಾಗಿದೆ. ಕಪ್ಪ ಕೊಟ್ಟವರನ್ನು ಮಾತ್ರ ಸಂಪುಟದಲ್ಲಿ ಉಳಿಸಿಕೊಳ್ಳಲಾಗುತ್ತಿದೆ. ಸಚಿವ ಸ್ಥಾನಕ್ಕೆ ಕಪ್ಪವೇ ಮಾನದಂಡ’ ಎಂದು ಹೇಳಿದರು.

‘ರಾಜ್ಯ ಸರ್ಕಾರ ಎಲ್ಲ ವಿಚಾರದಲ್ಲಿ ಎಡವಿದೆ. ಬೊಕ್ಕಸದಲ್ಲಿ ಹಣವಿಲ್ಲದೇ ಖಾಲಿ ಡಬ್ಬದಂತೆ ಸದ್ದು ಮಾಡುತ್ತಿದೆ. ನೌಕರರಿಗೆ ವೇತನ ನೀಡಲು ಕೂಡ ಸರ್ಕಾರದ ಬಳಿ ಹಣವಿಲ್ಲ. ಅಭಿವೃದ್ಧಿ ಸಂಪೂರ್ಣ ಗೌಣವಾಗಿದೆ. ಈ ವಿಚಾರವನ್ನು ಮರೆಮಾಚಲು ಪ್ರಿಯಾಂಕ್‌ ಖರ್ಗೆ ಅವರನ್ನು ಮುಂದೆ ಬಿಟ್ಟು ಆರ್‌ಎಸ್‌ಎಸ್‌ ನಿರ್ಬಂಧದ ಕುರಿತು ಹೇಳಿಕೆ ಕೊಡಿಸಲಾಗಿದೆ’ ಎಂದು ಆರೋಪಿಸಿದರು.

‘ರಾಷ್ಟ್ರ ಭೂಮಿಯ ತುಂಡಲ್ಲ. ರಾಷ್ಟ್ರೀಯ ಭಾವನೆ ಮೂಡಿದರೆ ಮಾತ್ರ ನಮ್ಮನ್ನು ರಕ್ಷಣೆ ಮಾಡಿಕೊಳ್ಳಲು ಸಾಧ್ಯ. ಈ ಕಾರ್ಯವನ್ನು ಆರ್‌ಎಸ್ಎಸ್‌ ಮಾಡುತ್ತಿದೆ. ಕೆಲವರಿಗೆ ಈ ಬಗ್ಗೆ ತಪ್ಪು ಅಭಿಪ್ರಾಯವಿದೆ. ಅವರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಯುತ್ತಿದೆ. ಪೂರ್ವಾಗ್ರಹಪೀಡಿತರ ಬಗ್ಗೆ ಆರ್‌ಎಸ್ಎಸ್‌ ತಲೆಕೆಡಿಸಿಕೊಳ್ಳುವುದಿಲ್ಲ’ ಎಂದು ವಿಧಾನಪರಿಷತ್‌ ಸದಸ್ಯ ಸಿ.ಟಿ.ರವಿ ಹೇಳಿದರು.

‘ತುರ್ತು ಪರಿಸ್ಥಿತಿಯನ್ನು ಹೇರಿ ಪ್ರಜಾಪ್ರಭುತ್ವವನ್ನೇ ಜೈಲಿಗೆ ಹಾಕಿದ್ದು ಕಾಂಗ್ರೆಸ್‌. ಸಂವಿಧಾನವನ್ನೇ ಐಸಿಯುನಲ್ಲಿ ಇಡಲಾಗಿತ್ತು. ಇದನ್ನು ಶಾಶ್ವತವಾಗಿ ಮುಂದುವರಿಸಲು ಸಾಧ್ಯವಾಗಲಿಲ್ಲ. ಹಳೆಯ ಚಾಳಿ ಆಗಾಗ ಮರುಕಳಿಸುತ್ತಿದೆ. ಸಾಮಾಜಿಕ ಸದ್ಭಾವನೆ ಬೆಳೆಸುವ ಆರ್‌ಎಸ್‌ಎಸ್‌ ನಿಷೇಧಿಸಲು ಸಾಧ್ಯವಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.