ಬೆಂಗಳೂರು: ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ಪರಿಷ್ಕರಿಸಿದ ಪಠ್ಯಪುಸ್ತಕದಲ್ಲಿ ನಾಡಿನ ಮಹನೀಯರಿಗೆ ಅವಮಾನ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್,‘ನಾಡಿನ ದಾರ್ಶನಿಕರು, ಮಹನೀಯರಿಗೆ ಅಪಮಾನವಾದಾಗ ಸ್ವಾಮೀಜಿಗಳು ಕೈಕಟ್ಟಿ ಕೂರಬಾರದು’ ಎಂದು ಆಗ್ರಹಿಸಿದ್ದಾರೆ.
‘ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ನಾಡಿನ ಸ್ವಾಮೀಜಿಗಳ ಸೇವೆ ಅನನ್ಯ . ಅದೇ ಕ್ಷೇತ್ರಗಳ ಮೇಲೆ ಸರ್ಕಾರ ಮತ್ತಿತರರು ದಾಳಿ ನಡೆಸಿದಾಗ, ನಾಡಿನ ದಾರ್ಶನಿಕರು, ಮಹನೀಯರಿಗೆ ಅಪಮಾನವಾದಾಗ ಸ್ವಾಮೀಜಿಗಳು ಕೈಕಟ್ಟಿ ಕೂರಬಾರದು’ ಎಂದು ಹೇಳಿದ್ದಾರೆ.
‘ತಮ್ಮ ಮುಕ್ತ ಅಭಿಪ್ರಾಯವನ್ನು ಸ್ವಾಮೀಜಿಗಳು ವ್ಯಕ್ತಪಡಿಸಬೇಕು. ಹಾಗಂತ ಅವರು ಬೀದಿಗಿಳಿದು ಹೋರಾಟ ಮಾಡಬೇಕೆಂದು ನಾನು ಹೇಳುವುದಿಲ್ಲ. ಆದರೆ ಮಾರ್ಗದರ್ಶನ ನೀಡಬೇಕು. ಸಮಾಜವನ್ನು ಸನ್ಮಾರ್ಗದಲ್ಲಿ ಮುನ್ನಡೆಸಬೇಕು’ ಎಂದು ಶಿವಕುಮಾರ್ ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.