ADVERTISEMENT

ಕೆಪಿಸಿಸಿ ಅಧ್ಯಕ್ಷ ಸ್ಥಾನ ತೊರೆಯುವ ಸುಳಿವು ನೀಡಿದ ಡಿ.ಕೆ.ಶಿವಕುಮಾರ್

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2025, 10:50 IST
Last Updated 19 ನವೆಂಬರ್ 2025, 10:50 IST
   

ಬೆಂಗಳೂರು: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ತಮ್ಮ ಬಳಿ ಇರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಸ್ಥಾನ ತೊರೆಯುವ ಸುಳಿವು ನೀಡಿದ್ದಾರೆ.

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಸುದ್ದಿ, ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಸಿದ್ದರಾಮಯ್ಯ ಅವರ ಆಪ್ತರ ಹೇಳಿಕೆಗಳು ಹಲವು ದಿನಗಳಿಂದ ಚರ್ಚೆಯ ವಿಷಯವಾಗಿವೆ. ಈ ಹೊತ್ತಲ್ಲೇ ಪಕ್ಷದ ಅಧ್ಯಕ್ಷ ಸ್ಥಾನ ತೊರೆಯುವ ಶಿವಕುಮಾರ್‌ ಅವರ ಮಾತುಗಳು ಕಾಂಗ್ರೆಸ್‌ ವಲಯದಲ್ಲಿ ಸಂಚಲನ ಮೂಡಿಸಿವೆ. 

ಶಿವಕುಮಾರ್‌ ಹೇಳಿದ್ದೇನು?: 

ಕಾಂಗ್ರೆಸ್‌ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ದಿವಂಗತ ಪ್ರಧಾನಿ ಇಂದಿರಾ ಗಾಂಧಿ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಅಧ್ಯಕ್ಷ ಸ್ಥಾನದಲ್ಲಿ ನಾನು ಶಾಶ್ವತವಾಗಿ ಇರಲು ಬಯಸುವುದಿಲ್ಲ. 2020ರಲ್ಲಿ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದ್ದೆ. ಈಗಾಗಲೇ ಐದು ವರ್ಷ ಪೂರೈಸಿದ್ದೇನೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಬಹುಮತ ಪಡೆದು ಅಧಿಕಾರಕ್ಕೆ ಬಂದಾಗ ಉಪ ಮುಖ್ಯಮಂತ್ರಿಯಾದೆ. ಆಗಲೇ ಅಧ್ಯಕ್ಷ ಸ್ಥಾನ ಬಿಡಲು ಸಿದ್ಧವಾಗಿದ್ದೆ. ಹೈಕಮಾಂಡ್‌ ನಾಯಕರಾದ ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರ ಸೂಚನೆಯಂತೆ ಮುಂದುವರಿದೆ. ಬರುವ ಮಾರ್ಚ್‌ಗೆ ಆರು ವರ್ಷ ತುಂಬುತ್ತದೆ. ಇತರರಿಗೂ ಅವಕಾಶ ನೀಡಬೇಕಿದೆ’ ಎಂದರು.

ADVERTISEMENT

ಇಂತಹ ಅನಿರೀಕ್ಷಿತ ಹೇಳಿಕೆಯಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಾರ್ಯಕರ್ತರು ಗೊಂದಲಕ್ಕೆ ಒಳಗಾದರು. ಕೆಲವರು ಆಕ್ಷೇಪ ವ್ಯಕ್ತಪಡಿಸಿದರು. ಅವರನ್ನೆಲ್ಲಾ ಸಮಾಧಾನಪಡಿಸಿದ ಶಿವಕುಮಾರ್‌, ‘ನಾನು ಈ ಸ್ಥಾನದಲ್ಲಿ ಇರುತ್ತೇನೋ, ಇರುವುದಿಲ್ಲವೋ ಎಂಬುದು ಮುಖ್ಯವಲ್ಲ. ಸ್ಥಾನ ತೊರೆದರೂ, ನಾಯಕತ್ವ, ಪಕ್ಷದ ಮುಂಚೂಣಿಯಲ್ಲಿದ್ದು ಕೆಲಸ ಮಾಡುತ್ತೇನೆ. ನಾನು ಎಲ್ಲಿದ್ದೇನೆ, ಏನಾಗಿದ್ದೇನೆ ಎನ್ನುವುದು ಮುಖ್ಯವಲ್ಲ. ನನ್ನ ಅವಧಿಯಲ್ಲಿ ಮಾಡಿದ ಒಳ್ಳೆಯ ಕೆಲಸಗಳು ಶಾಶ್ವತವಾಗಿರುತ್ತವೆ. ಈ ಅವಧಿಯಲ್ಲಿ ನೂರು ಕಾಂಗ್ರೆಸ್ ಕಚೇರಿ ನಿರ್ಮಿಸಬೇಕು ಎಂಬುದು ನನ್ನ ಬಯಕೆ. ಪಕ್ಷದ ಅಧ್ಯಕ್ಷನಾಗಿ ಒಂದು ಮಾದರಿಯನ್ನು ರೂಪಿಸಿದ್ದೇನೆ. ಗಾಂಧಿ ಕುಟುಂಬ ಹಾಗೂ ಎಐಸಿಸಿ ಅಧ್ಯಕ್ಷರು ಬಯಸುವವರೆಗೂ ಕೆಲಸ ಮಾಡುತ್ತೇಲೇ ಇರುತ್ತೇನೆ’ ಎಂದು ಹೇಳಿದರು. 

ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಬಳಿಕ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಸರ್ಕಾರದಲ್ಲಿ ಶಿವಕುಮಾರ್ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಕೆಪಿಸಿಸಿ ಸಾರಥ್ಯವನ್ನು ಬೇರೆಯವರಿಗೆ ನೀಡಬೇಕು ಎಂಬ ಬೇಡಿಕೆಯನ್ನು ಹಲವರು ಹೈಕಮಾಂಡ್‌ ಮುಂದಿಟ್ಟಿದ್ದರು. 2024ರ ಲೋಕಸಭಾ ಚುನಾವಣೆಯ ನಂತರ ಬೇರೆಯವರಿಗೆ ಅವಕಾಶ ನೀಡುವುದಾಗಿ ಹೈಕಮಾಂಡ್‌ ನಾಯಕರು ಹೇಳಿದ್ದರು.

ಲೋಕಸಭೆ ಚುನಾವಣೆ ಬಳಿಕವೂ ಶಿವಕುಮಾರ್ ಮುಂದುವರಿದರು. ಆ ತರುವಾಯ, ಶಿವಕುಮಾರ್ ಅವರು ಸ್ಥಾನ ತ್ಯಜಿಸಿ, ಬೇರೆಯವರಿಗೆ ಅವಕಾಶ ಕೊಡಲಿ ಎಂಬ ಬೇಡಿಕೆಯನ್ನು ಹಲವರು ಬಹಿರಂಗವಾಗಿಯೇ ಮಂಡಿಸಿದ್ದರು.

‘ಕೆಲವರಿಗೆ ಅಧಿಕಾರ ಮಾತ್ರ ಬೇಕು’

‘ಕೆಲವರಿಗೆ ಅಧಿಕಾರ ಮಾತ್ರ ಬೇಕು. ಕಾಂಗ್ರೆಸ್‌ ಕಚೇರಿ ದೇವಾಲಯ ಎಂಬುದನ್ನು ಕೆಲವರು ಮರೆತಿದ್ದಾರೆ’ ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು.

‘100 ಕಾಂಗ್ರೆಸ್‌ ಕಚೇರಿಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ಹಮ್ಮಿಕೊಂಡಿದ್ದೇವೆ. ಇದಕ್ಕೆ ಯಾರು ಸಹಕಾರ ನೀಡಿದ್ದಾರೆ, ನೀಡಿಲ್ಲ ಎಂದು ಪಟ್ಟಿ ನೀಡಲು ಎಐಸಿಸಿ ನಾಯಕರು ಸೂಚಿಸಿದ್ದಾರೆ. ಕೆಲವರು ಆಸಕ್ತಿ ತೋರಿದ್ದಾರೆ, ಕೆಲವರು ತೋರಿಲ್ಲ. ಇದಕ್ಕೆ ಉತ್ತರ ನೀಡುವುದಿಲ್ಲ. ದೆಹಲಿ ನಾಯಕರು ಸರಿಯಾದ ಸಮಯದಲ್ಲಿ ಉತ್ತರ ನೀಡುತ್ತಾರೆ’ ಎಂದು ಹೇಳಿದರು.

‘ಒಬ್ಬರ ಕೆಲಸ, ಮತ್ತೊಬ್ಬರಿಗೆ ಲಾಭ’

ಮಾಜಿ ಪ್ರಧಾನಿ ಇಂದಿರಾಗಾಂಧಿಯವರ ಮಾತುಗಳನ್ನು ‘ನುಡಿ ಮುತ್ತುಗಳು’ ಎಂಬ ಶೀರ್ಷಿಕೆಯಡಿ ಸೋನಿಯಾಗಾಂಧಿ ಸಂಗ್ರಹಿಸಿದ್ದಾರೆ. ಈ ಪುಸ್ತಕದ ಕನ್ನಡ ಅನುವಾದ ಕೃತಿಯನ್ನು ಬಿಡುಗಡೆ ಮಾಡಿದ ಶಿವಕುಮಾರ್‌, ಅದರಲ್ಲಿರುವ ಮಾತುಗಳನ್ನು ಉಲ್ಲೇಖಿಸಿದರು.

ಅವು ಹೀಗಿವೆ:

–ಒಬ್ಬ ಕೆಲಸ ಮಾಡುವವನು, ಮತ್ತೊಬ್ಬ ಅದರ ಲಾಭ ಪಡೆದುಕೊಳ್ಳುವವನು 

–ಗೌರವ ಎನ್ನುವುದು ಕೇಳಿ ಪಡೆಯುವಂತಹುದಲ್ಲ, ಗಳಿಸುವಂತಹದ್ದು 

–ಎದುರಾಳಿ ನಿನ್ನನ್ನು ನಿಯಂತ್ರಿಸುವ ಮುನ್ನ, ನೀನು ನಿನ್ನನ್ನು ನಿಯಂತ್ರಿಸು

–ಆತ್ಮವಿಶ್ವಾಸ ಮುಖ್ಯ, ಎಲ್ಲಿ ಶ್ರಮ ಇದೆಯೋ, ಅಲ್ಲಿ ಖಂಡಿತ ಫಲವಿದೆ

‘ಎಲ್ಲೂ ಓಡಿ ಹೋಗುವುದಿಲ್ಲ’

‘ರಾಜ್ಯದಲ್ಲಿ ಕಾಂಗ್ರೆಸ್‌ ಬೇರುಗಳು ಗಟ್ಟಿಯಾಗಿವೆ. ಖಂಡಿತವಾಗಿಯೂ ಕರ್ನಾಟಕದಲ್ಲಿ ಪಕ್ಷ ಅಧಿಕಾರವನ್ನು ಉಳಿಸಿಕೊಳ್ಳುತ್ತದೆ. ಪಕ್ಷದ ಕಾರ್ಯಕರ್ತರೂ ಆತ್ಮವಿಶ್ವಾಸ ಕಳೆದುಕೊಳ್ಳಬಾರದು. ನಾನು ಎಲ್ಲೂ ಓಡಿಹೋಗುವುದಿಲ್ಲ’ ಎಂದು ಶಿವಕುಮಾರ್‌ ಹೇಳಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ‘ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್‌ ಪಕ್ಷ ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತದೆ. ಪಕ್ಷ ಏನು ಹೇಳುತ್ತದೆಯೋ ಅದನ್ನು ಪಾಲಿಸುತ್ತೇನೆ’ ಎಂದರು.

ಕಾರ್ಯಕ್ರಮ ಮುಗಿದು ಭವನದಿಂದ ಹೊರಬರುತ್ತಿದ್ದಂತೆ ಕಾಂಗ್ರೆಸ್‌ ಕಾರ್ಯಕರ್ತರು ಮುಂದಿನ ಮುಖ್ಯಮಂತ್ರಿ ‘ಡಿ.ಕೆ. ಶಿವಕುಮಾರ್‌’ ಎಂಬ ಘೋಷಣೆ ಕೂಗಿದರು. ಜೈಕಾರ ಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.