
ಡಿಕೆಶಿ
ಬೆಂಗಳೂರು: ‘ಮೆಕ್ಕೆಜೋಳ, ಕಬ್ಬು ದರ ನಿಗದಿ ಮತ್ತು ನೀರಾವರಿ ಯೋಜನೆ ಕುರಿತು ಸಂಸದರ ಜೊತೆ ಚರ್ಚಿಸಿ, ಈ ವಿಚಾರವಾಗಿ ಕೇಂದ್ರದ ಮೇಲೆ ಒತ್ತಡ ಹಾಕಲು ದೆಹಲಿಗೆ ಹೋಗುತ್ತೇವೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಮುಖ್ಯಮಂತ್ರಿ ಜೊತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೆಕ್ಕೆಜೋಳ, ಕಬ್ಬು ದರ ನಿಗದಿ ಹಾಗೂ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಸಂಸತ್ ಅಧಿವೇಶನದಲ್ಲಿ ಸಂಸದರು ಧ್ವನಿ ಎತ್ತಬೇಕಿದೆ. ಈ ವಿಚಾರವಾಗಿ ಸಂಸದರ ಜೊತೆ ನಾವು ಚರ್ಚೆ ಮಾಡಬೇಕಿದೆ’ ಎಂದರು.
‘ಮೆಕ್ಕೆಜೋಳ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಸಹಕಾರ ನೀಡುತ್ತಿಲ್ಲ. ಈ ವಿಚಾರದಲ್ಲಿಯೂ ಕೇಂದ್ರದ ನೆರವು ಪಡೆಯುವುದು ರಾಜ್ಯದ ಹಕ್ಕು. ಮುಖ್ಯಮಂತ್ರಿಯವರು ಪ್ರಧಾನ ಮಂತ್ರಿ ಅವರನ್ನು ಇತ್ತೀಚೆಗೆ ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ನಾವೆಲ್ಲರೂ ಒಟ್ಟಾಗಿ ರಾಜ್ಯದ ಹಿತ ಕಾಪಾಡಬೇಕಿದೆ. ನಿಯೋಗದ ಜೊತೆ ಬರುವಂತೆ ಕೇಂದ್ರ ಸಚಿವರಿಗೂ ತಿಳಿಸಿದ್ದೇವೆ’ ಎಂದರು.
‘ಮೇಕೆದಾಟು ಯೋಜನೆ ವಿಚಾರದಲ್ಲಿ ಈಗ ಚೆಂಡು ಕೇಂದ್ರ ಸರ್ಕಾರದ ಜಲ ಆಯೋಗದ ಅಂಗಳದಲ್ಲಿದೆ. ನಾವು ಇದಕ್ಕೆ ಪರಿಷ್ಕೃತ ಡಿಪಿಆರ್ ಸಲ್ಲಿಸುತ್ತೇವೆ. ಜೊತೆಗೆ, ಇತರೆ ನೀರಾವರಿ ಯೋಜನೆಗಳ ಬಗ್ಗೆಯೂ ಚರ್ಚೆ ಮಾಡಬೇಕಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.