ADVERTISEMENT

ಸ್ವಂತಕ್ಕೆ ಆತ್ಮಹತ್ಯೆ ಮಾಡಿಕೊಂಡವರನ್ನೆಲ್ಲ ರೈತರು ಎನ್ನಲಾಗುತ್ತದೆಯೇ? -ಡಿಕೆಶಿ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2023, 15:21 IST
Last Updated 6 ಸೆಪ್ಟೆಂಬರ್ 2023, 15:21 IST
<div class="paragraphs"><p>ಡಿ.ಕೆ. ಶಿವಕುಮಾರ್‌</p></div>

ಡಿ.ಕೆ. ಶಿವಕುಮಾರ್‌

   

ಬೆಂಗಳೂರು: ‘ಎಲ್ಲಿದೆ ಹೇಳಿ ಆತ್ಮಹತ್ಯೆ? ಸ್ವಂತಕ್ಕೆ ಯಾರಾದರೂ ಮಾಡಿಕೊಂಡವರನ್ನೆಲ್ಲ ರೈತರು ಎನ್ನಲಾಗುತ್ತದೆಯೇ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಪ್ರಶ್ನಿಸಿದ್ದಾರೆ.

ರೈತರ ಆತ್ಮಹತ್ಯೆಗೆ ಸಂಬಂಧಿಸಿದಂತೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಡಿ.ಕೆ. ಶಿವಕುಮಾರ್‌ ನೀಡಿರುವ ಈ ಹೇಳಿಕೆಯ ವಿಡಿಯೊ ತುಣುಕನ್ನು ‘ಇಂಡಿಯಾ ಟುಡೆ’ ಹಂಚಿಕೊಂಡಿದೆ. ಅದನ್ನು ಬಿಜೆಪಿಯ ಐ.ಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ತಮ್ಮ ‘X’ ಖಾತೆಯಲ್ಲಿ (ಟ್ವಿಟರ್‌) ಪೋಸ್ಟ್ ಮಾಡಿದ್ದಾರೆ.

ADVERTISEMENT

‘ಕರ್ನಾಟಕದ ಸಚಿವರೊಬ್ಬರ ಹೇಳಿಕೆಯ ಬಳಿಕ ಇದೀಗ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರೈತರ ಆತ್ಮಹತ್ಯೆಯನ್ನು ‘ನಕಲಿ’ ಎಂದು ಆರೋಪಿಸಿದ್ದಾರೆ! ನಕಲಿ ಆತ್ಮಹತ್ಯೆಯ ನಂತರ ಪರಿಹಾರ ಪಡೆಯಲು ಬದುಕುವುದು ಹೇಗೆ? ಇದು ಕೇವಲ ವಿಲಕ್ಷಣ ಹೇಳಿಕೆಯಲ್ಲ, ರೈತರ ಬಗ್ಗೆ ಭಾರಿ ಅವಹೇಳನಕಾರಿ ಹೇಳಿಕೆ. ಗ್ರಾಮೀಣ ಭಾಗದಲ್ಲಿನ ಸಂಕಷ್ಟ ಮತ್ತು ರೈತರ ಆತ್ಮಹತ್ಯೆಯನ್ನು ಕಾಂಗ್ರೆಸ್‌ ನಿರಾಕರಿಸುತ್ತಿರುವುದು ಸರಿಯಲ್ಲ’ ಎಂದು ತಮ್ಮ ಪೋಸ್ಟ್‌ನಲ್ಲಿ ಮಾಳವೀಯ ಹೇಳಿದ್ದಾರೆ.

‘ರೈತರ ಆತ್ಮಹತ್ಯೆ ಪ್ರಕರಣಗಳು 2015ಕ್ಕೂ ಮೊದಲು ಕಡಿಮೆ ಇದ್ದವು. ₹ 5 ಲಕ್ಷ ಪರಿಹಾರ ಕೊಡಲು ಆರಂಭವಾದ ಬಳಿಕ ಪ್ರಕರಣಗಳು ವರದಿಯಾಗುವುದು ಜಾಸ್ತಿಯಾಯಿತು’ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿಕೆ ನೀಡಿದ ಬೆನ್ನಲ್ಲೆ, ಡಿ.ಕೆ ಶಿವಕುಮಾರ್‌ ನೀಡಿರುವ ಈ ಹೇಳಿಕೆಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.