ADVERTISEMENT

ನಮಗೆ ಆಪರೇಷನ್ ಹಸ್ತದ ಅನಿವಾರ್ಯತೆ ಇಲ್ಲ: ಡಿ.ಕೆ. ಸುರೇಶ್

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2023, 15:34 IST
Last Updated 28 ಆಗಸ್ಟ್ 2023, 15:34 IST
ಸಂಸದ ಡಿ.ಕೆ. ಸುರೇಶ್
ಸಂಸದ ಡಿ.ಕೆ. ಸುರೇಶ್   

ಬೆಂಗಳೂರು: ‘ಆಪರೇಷನ್ ಹಸ್ತ ಮಾಡುವ ಅನಿವಾರ್ಯ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಇಲ್ಲ. ನಮ್ಮ ತತ್ವ, ಸಿದ್ಧಾಂತ ಯಾರು ಒಪ್ಪಿಕೊಳ್ಳುತ್ತಾರೊ ಅಂಥವರಿಗೆ ಪಕ್ಷಕ್ಕೆ ಸ್ವಾಗತವಿದೆ’ ಎಂದು ಸಂಸದ ಡಿ.ಕೆ. ಸುರೇಶ್ ಹೇಳಿದರು.

ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಅವರು, ‘ಬಿಜೆಪಿ ಶಾಸಕರು, ಸಂಸದರು ನನ್ನ ಜೊತೆ ಚೆನ್ನಾಗಿದ್ದಾರೆ. ಸ್ಥಳೀಯ ಮಟ್ಟದಲ್ಲಿ ವಿರೋಧ ಇಲ್ಲದವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತೇವೆ. ನಿರೀಕ್ಷೆ ಇಟ್ಟುಕೊಂಡು ಬರುವವರ ಗೌರವಕ್ಕೆ ಚ್ಯುತಿ ಬಾರದಂತೆ ನೋಡಿಕೊಳ್ಳಬೇಕಾಗಿರುವುದು ನಮ್ಮ ಕರ್ತವ್ಯ’ ಎಂದರು.

‘ಸದ್ಯ ಆಪರೇಷನ್ ಹಸ್ತ ಎನ್ನುವ ಪದವೇ ನಮ್ಮ ಬಳಿ ಇಲ್ಲ. ಎಲ್ಲಿ ನಮಗೆ ಸೋಲಾಗಿದೆ, ಕಾರ್ಯಕರ್ತರಿಗೆ ಸಮಸ್ಯೆಯಾಗಿದೆ, ಅಲ್ಲಿ ನಾವು ಪಕ್ಷ ಸಂಘಟನೆ ಮಾಡುತ್ತೇವೆ. ನಾವು ಯಾರನ್ನೂ ಪಕ್ಷಕ್ಕೆ ಸೆಳೆಯುವ ಪ್ರಯತ್ನ ಮಾಡುತ್ತಿಲ್ಲ. ಪಕ್ಷ ದುರ್ಬಲವಾಗಿರುವ ಕಡೆಗಳಲ್ಲಿ ಸಂಘಟನೆ ಗಟ್ಟಿ ಮಾಡುವಂತೆ ಕೆಪಿಸಿಸಿ ಅಧ್ಯಕ್ಷರು, ವರಿಷ್ಠರು ಸೂಚನೆ ನೀಡಿದ್ದಾರೆ’ ಎಂದರು.

ADVERTISEMENT

ಬೆಂಗಳೂರು ಉತ್ತರ ಕ್ಷೇತ್ರ ಲೋಕಸಭಾ ಕೇತ್ರದಿಂದ ಕಣಕ್ಕಿಳಿಯುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ‘ಸದ್ಯಕ್ಕೆ ರಾಜಕಾರಣವೇ ಸಾಕು ಎಂದು ನಾನಿದ್ದೇನೆ. ಉತ್ತರನೋ, ದಕ್ಷಿಣನೋ, ಪೂರ್ವಾನೋ, ಪಶ್ಚಿಮನೋ ನನಗೆ ಗೊತ್ತಿಲ್ಲ. ನನ್ನನ್ನು ರಾಜಕೀಯವಾಗಿ ಬೆಳೆಸುತ್ತಿರುವವರ ತೀರ್ಮಾನವೇ ಅಂತಿಮ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.