ADVERTISEMENT

ಡೆಲ್ಟಾ ಪ್ಲಸ್‌ ತಳಿ ವೇಗ, ತೀವ್ರತೆ ಅಧಿಕ: ಡಾ. ಸಿ.ಎನ್. ಮಂಜುನಾಥ್

​ಪ್ರಜಾವಾಣಿ ವಾರ್ತೆ
Published 24 ಜೂನ್ 2021, 5:58 IST
Last Updated 24 ಜೂನ್ 2021, 5:58 IST
ಡಾ.ಸಿ.ಎನ್. ಮಂಜುನಾಥ್
ಡಾ.ಸಿ.ಎನ್. ಮಂಜುನಾಥ್   

ಬೆಂಗಳೂರು: ‘ಡೆಲ್ಟಾ ಪ್ಲಸ್‌ ರೂಪಾಂತರ ತಳಿಯಾಗಿದ್ದು, ವೇಗವಾಗಿ ಹರಡಲಿದೆ. ಹೀಗಾಗಿ, ಅದರ ತೀವ್ರತೆ ಜಾಸ್ತಿ ಇರುತ್ತದೆ’ ಎಂದು ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಹಾಗೂ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯರೂ ಆಗಿರುವ ಡಾ.ಸಿ.ಎನ್. ಮಂಜುನಾಥ್ ಹೇಳಿದರು.

ಡೆಲ್ಟಾ ಪ್ಲಸ್‌ ಇದರ ಬಗ್ಗೆ ಹೆಚ್ಚಿನ ಅಧ್ಯಯನಗಳು ನಡೆಯಬೇಕಿದೆ. ಎರಡನೇ ಅಲೆಯಲ್ಲಿ ಡೆಲ್ಟಾ ತಳಿಯ ವೈರಾಣುವಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್‌ ಪ್ರಕರಣಗಳು ವರದಿಯಾಗಿವೆ. ನಾಲ್ಕರಿಂದ ಐದು ತಿಂಗಳ ಅವಧಿಯಲ್ಲಿ ವೈರಾಣು ರೂಪಾಂತರಗೊಳ್ಳುವುದು ಸಾಮಾನ್ಯವಾಗಿದ್ದು, ಅನಗತ್ಯವಾಗಿ ಆತಂಕ ಪಡಬೇಕಾಗಿಲ್ಲ. ಆದರೆ, ಈ ವರ್ಷ ಪೂರ್ತಿ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು ಎಂದರು.

ಕರ್ನಾಟಕದಲ್ಲಿ ಎರಡನೇ ಅಲೆ ಇನ್ನೂ ಪೂರ್ಣಗೊಂಡಿಲ್ಲ. ವಿದೇಶಗಳಲ್ಲಿ ಈಗಾಗಲೇ ಮೂರನೇ ಅಲೆ ಕಾಣಿಸಿಕೊಂಡಿದೆ. ದೇಶದಲ್ಲಿ ಮಹಾರಾಷ್ಟ್ರ ಹಾಗೂ ದೆಹಲಿಯಲ್ಲಿ ಎರಡನೇ ಅಲೆ ಮೊದಲು ಕಾಣಿಸಿಕೊಂಡಿತ್ತು. ಹೀಗಾಗಿ, ಮೂರನೇ ಅಲೆ ಕೂಡ ಅಲ್ಲಿಯೇ ಮೊದಲು ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಆ ರಾಜ್ಯಗಳಲ್ಲಿ ಪ್ರಕರಣಗಳ ಸಂಖ್ಯೆ ಏರುಗತಿ ಪಡೆಯುವ ಮುನ್ಸೂಚನೆ ದೊರೆಯುತ್ತಿದ್ದಂತೆ ಪರಿಸ್ಥಿತಿಯನ್ನು ಎದುರಿಸಲು ಸಕಲ ರೀತಿಯಲ್ಲಿಯೂ ಸನ್ನದರಾಗಬೇಕು. ಈಗಾಗಲೇ ಮಾರುಕಟ್ಟೆಯಲ್ಲಿರುವ ಲಸಿಕೆಗಳು ರೂಪಾಂತರಗೊಂಡಿರುವ ವೈರಾಣುವಿನ ವಿರುದ್ಧ ಕೂಡ ಕಾರ್ಯನಿರ್ವಹಿಸಲು ಸಮರ್ಥವಾಗಿವೆ. ಹಾಗಾಗಿ, ಆದಷ್ಟು ಬೇಗ ಎಲ್ಲರೂ ಲಸಿಕೆ ಪಡೆದುಕೊಳ್ಳಬೇಕು. ಈ ವರ್ಷದ ಅಂತ್ಯದವರೆಗೂ ಸಭೆ–ಸಮಾರಂಭಗಳನ್ನು ನಡೆಸಬಾರದು’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.