ಚಿತ್ರದುರ್ಗ: ಮೊದಲ ಮಾನವರಹಿತ ಯುದ್ಧವಿಮಾನದ ಪರೀಕ್ಷಾರ್ಥ ಹಾರಾಟ ಚಳ್ಳಕೆರೆ ತಾಲ್ಲೂಕಿನ ರಕ್ಷಣಾ ಸಂಶೋಧನ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್ಡಿಒ) ವಿಮಾನ ಪರೀಕ್ಷಾ ನೆಲೆಯಲ್ಲಿ (ಎಟಿಆರ್) ಶುಕ್ರವಾರ ಯಶಸ್ವಿಯಾಗಿ ನಡೆಯಿತು.
ಇಲ್ಲಿ ನಡೆದ ಪರೀಕ್ಷಾರ್ಥ ಹಾರಾಟದಲ್ಲಿ, ಆಗಸಕ್ಕೆ ಹಾರಿದ ಯುದ್ಧವಿಮಾನವು ಅಷ್ಟೇ ನಿಖರವಾಗಿ ಕೆಳಗೆ ಇಳಿದು ಭರವಸೆ ಮೂಡಿಸಿತು. ರಕ್ಷಣಾ ತಂತ್ರಜ್ಞಾನದಲ್ಲಿ ಸ್ವಾವಲಂಬನೆ ಸಾಧಿಸುತ್ತಿರುವ ಭಾರತ, ಮಾನವರಹಿತ ವಿಮಾನಗಳ ಅಭಿವೃದ್ಧಿಯಂತಹ ಕ್ಲಿಷ್ಟಕರ ತಂತ್ರಜ್ಞಾನದಲ್ಲಿಯೂ ಮೈಲಿಗಲ್ಲು ಸಾಧಿಸಿದಂತಾಯಿತು.
ಬೆಂಗಳೂರಿನಲ್ಲಿರುವ ಡಿಆರ್ಡಿಒ ಅಂಗಸಂಸ್ಥೆಯಾದ ವೈಮಾನಿಕ ಅಭಿವೃದ್ಧಿ ಸಂಸ್ಥೆ (ಎಡಿಇ) ಈ ಯುದ್ಧವಿಮಾನವನ್ನು ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಿದೆ. ವೈಮಾನಿಕ ವಾಹನವನ್ನು ನಿಯಂತ್ರಿಸುವ ಏವಿಯಾನಿಕ್ಸ್ ವ್ಯವಸ್ಥೆಯನ್ನು ದೇಶೀಯವಾಗಿಯೇಸಿದ್ಧಪಡಿಸಲಾಗಿದೆ. ಡಿಆರ್ಡಿಒದ ಈ ಸಾಧನೆಗೆರಕ್ಷಣಾ ಸಚಿವ ರಾಜನಾಥ ಸಿಂಗ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಯುದ್ಧವಿಮಾನ ನಿರ್ಮಾಣದಲ್ಲಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಇದೊಂದು ಮಹತ್ತರ ಸಾಧನೆ. ಆತ್ಮನಿರ್ಭರ ಭಾರತದ ದಾರಿಯಲ್ಲಿ ಇದು ಮಹತ್ವದ ಹೆಜ್ಜೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಮೊದಲ ಮಾನವರಹಿತ ಯುದ್ಧವಿಮಾನದ ಪರೀಕ್ಷಾರ್ಥ ಯಶಸ್ವಿ ಹಾರಾಟ ಕುರಿತು ಡಿಆರ್ಡಿಒ ಟ್ವೀಟ್ ಮಾಡಿದೆ. ಚಿತ್ರದುರ್ಗದ ಡಿಆರ್ಡಿಒದಲ್ಲಿ ಚಾಲಕ ರಹಿತ ವಿಮಾನ ಹಾರಾಟ ನಡೆಸಿದೆ. ಇದು ಸ್ವಾಯತ್ತ ವಿಮಾನಗಳ ಕಡೆಗೆ ಒಂದು ಪ್ರಮುಖ ಸಾಧನೆಯಾಗಿದೆ ಎಂದು ಟ್ವೀಟ್ ಮಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.