ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರದ ಹೇಡಿತನದಿಂದಾಗಿ ಮುಂಬರುವ ದಿನಗಳಲ್ಲಿ ಕರುನಾಡಿಗೆ ಕುಡಿಯುವ ನೀರಿನ ಹಾಹಾಕಾರ ಎದುರಾಗುವುದು ನಿಶ್ಚಿತ ಎಂದು ಬಿಜೆಪಿ ಟೀಕಿಸಿದೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಬಿಜೆಪಿ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಫೆಬ್ರುವರಿ ಮತ್ತು ಮಾರ್ಚ್ ತಿಂಗಳಲ್ಲಿ ಮತ್ತೆ 2.5 ಟಿಎಂಸಿ ನೀರು ಬಿಡಲು ಕರ್ನಾಟಕವನ್ನು ಒತ್ತಾಯಿಸಿದೆ ಎಂದು ಹೇಳಿದೆ.
ತಮಿಳುನಾಡಿನ ಅಧಿಕಾರಿಗಳು ನೀರಿಗಾಗಿ ಒತ್ತಾಯಿಸಿದರೆ, ಸಿಎಂ ಸ್ಟ್ಯಾಲಿನ್ ಮೇಲಿನ ವ್ಯಾಮೋಹಕ್ಕೆ ಸಿದ್ಧರಾಮಯ್ಯನವರು ತಮಿಳುನಾಡು ಸರ್ಕಾರಕ್ಕೆ ಸವಾಲೊಡ್ಡದೆ ಸುಮ್ಮನೆ ಬಂದಿದ್ದಾರೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.
ಈಗಾಗಲೇ ಕರ್ನಾಟಕದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ರಾಜಧಾನಿ ಬೆಂಗಳೂರಿನಲ್ಲೇ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣಗೊಂಡಿದ್ದು, ಒಂದು ವೇಳೆ ಕದ್ದು ಮುಚ್ಚಿ ಮತ್ತೊಮ್ಮೆ ನೀರು ಬಿಡುಗಡೆ ಮಾಡಿದರೆ ಹನಿ ನೀರಿಗೂ ಜನರು ಪರದಾಡುವುದು ನಿಶ್ಚಿತ! ಎಂದು ಬಿಜೆಪಿ ಎಚ್ಚರಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.