ADVERTISEMENT

ತುಂತುರು ಮಳೆ: ಥಂಡಿಗೆ ಥರಗುಟ್ಟಿದ ಜನ, ಮಲೆನಾಡಾದ ಬಯಲುಸೀಮೆ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2021, 19:32 IST
Last Updated 11 ನವೆಂಬರ್ 2021, 19:32 IST
ತುಮಕೂರು ನಗರದಲ್ಲಿ ಮಳೆಯಲ್ಲಿ ಛತ್ರಿ ಹಿಡಿದು ಸಾಗಿದ ಯುವತಿಯರು.
ತುಮಕೂರು ನಗರದಲ್ಲಿ ಮಳೆಯಲ್ಲಿ ಛತ್ರಿ ಹಿಡಿದು ಸಾಗಿದ ಯುವತಿಯರು.   

ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವ ಕಾರಣ ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿಬುಧವಾರ ರಾತ್ರಿಯಿಂದ ಜಿಟಿ ಜಿಟಿ ಮಳೆ ಸುರಿಯುತ್ತಿದ್ದುಬಯಲುಸೀಮೆಯ ಜಿಲ್ಲೆಗಳು ವಾತಾವರಣ ಮಲೆನಾಡನ್ನು ನೆನಪಿಸುತ್ತಿದೆ.

ಎರಡು ದಿನದಿಂದತಾಪಮಾನ ದಿಢೀರ್‌ ಕುಸಿದಿದ್ದು, ಉಷ್ಣಾಂಶ 15–16 ಡಿಗ್ರಿ ಸೆಲ್ಸಿಷಸ್‌ಗೆ ಕುಸಿದಿದೆ. ಬೆಳಿಗ್ಗೆಯಿಂದ ರಾತ್ರಿಯವರೆಗೂ ತುಂತುರು ಮಳೆ ತೊಟ್ಟಿಕ್ಕಿತ್ತು.ದಟ್ಟವಾದ ಮೋಡ ಮುಸುಕಿದ ವಾತಾವರಣದಬಿಸಿಲು ಕಾಣಲೇ ಇಲ್ಲ. ಮೂಲೆ ಸೇರಿದ್ದ ಛತ್ರಿಗಳು, ಸ್ವೆಟರ್ ಮತ್ತು ಜರ್ಕಿನ್ಜಡಿ ಮಳೆ ಮತ್ತು ತೀವ್ರ ಚಳಿಯಿಂದಾಗಿ ಹೊರಬಂದಿವೆ.ಬಣ್ಣ, ಬಣ್ಣದ ಕೊಡೆ, ಜರ್ಕಿನ್‌ ತೊಟ್ಟ ಮಕ್ಕಳುಮಳೆಯಲ್ಲೇ ಶಾಲೆ, ಕಾಲೇಜುಗಳತ್ತ ಹೆಜ್ಜೆ ಹಾಕಿದರು.

ಮಳೆಯ ಅಬ್ಬರ ಅಷ್ಟಾಗಿ ಇರದಿದ್ದರೂಜಡಿ ಮಳೆಯಿಂದಾಗಿರಸ್ತೆಗಳಲ್ಲಿ ಜನರ ಸಂಚಾರ ಕಡಿಮೆ ಇತ್ತು. ರಸ್ತೆಗಳಲ್ಲಿ ವಾಹನ ಸಂಚಾರ ಮತ್ತು ಜನರ ಓಡಾಟ ವಿರಳವಾಗಿತ್ತು.ಮಳೆಯ ಕಾರಣದಿಂದ ವ್ಯಾಪಾರಿಗಳ ಮುಖದಲ್ಲಿಯೂ ಕಳೆ ಇರಲಿಲ್ಲ. ಮಾರುಕಟ್ಟೆ ಮತ್ತು ವಾಣಿಜ್ಯ ಸ್ಥಳಗಳಲ್ಲಿ ಬಹುಪಾಲು ಅಂಗಡಿಗಳು ಇಡೀ ದಿನ ಮುಚ್ಚಿದ್ದವು. ಎಪಿಎಂಸಿಗಳಲ್ಲಿ ದಿನನಿತ್ಯದಂತೆ ವಹಿವಾಟು ನಡೆಯಲಿಲ್ಲ. ಸರ್ಕಾರಿ ಕಚೇರಿಗಳು ತೆರೆದರೂ ಜನದಟ್ಟಣೆ ಕಡಿಮೆಯಿತ್ತು. ಹೊಲಗಳಲ್ಲಿ ನೀರು ನಿಂತಿದ್ದು, ರಸ್ತೆಗುಂಡಿಗಳಲ್ಲೂ ಮಳೆ ನೀರು ತುಂಬಿ ವಾಹನ ಸವಾರರು ಪರದಾಡಿದರು.

ADVERTISEMENT

ರಾಗಿ ಬೆಳೆಯುವ ಪ್ರದೇಶದಲ್ಲಿ ಮಳೆ ಸ್ವಲ್ಪ ಮಟ್ಟಿಗೆ ಸಂಕಷ್ಟ ತಂದೊಡ್ಡಿದೆ.ಟೊಮೆಟೊ, ಬೀನ್ಸ್‌ ಸೇರಿದಂತೆ ತೋಟಗಾರಿಕೆ ಬೆಳೆಗಳು ನೆಲಕಚ್ಚಿವೆ. ಇನ್ನೇನು ರಾಗಿ ಕೊಯ್ಲಿಗೆ ಬಂದಿದ್ದು ಇದೇ ರೀತಿ ಮಳೆ ಬಿದ್ದು, ಬೆಳೆದು ನಿಂತಿರುವ ಬೆಳೆ ನೆಲಕ್ಕೆ ಮಲಗಿದರೆ ತೆನೆ ಮಣ್ಣು ಪಾಲಾಗುತ್ತದೆ ಎಂಬ ಆತಂಕ ರೈತರಲ್ಲಿ ಮನೆ ಮಾಡಿದೆ.ದ್ವಿದಳ ಧಾನ್ಯ ಹಾಗೂ ತೆಂಗು, ಅಡಿಕೆ ಸೇರಿದಂತೆ ತೋಟಗಾರಿಕೆ ಬೆಳೆಗಳಿಗೆ ಮಳೆ ಅನುಕೂಲವಾಗಲಿದೆ.

ಸಂಜೆಯವರೆಗೂ ಬಹುತೇಕ ಕಡೆ ಸೂರ್ಯನ ದರ್ಶನವಾಗಲಿಲ್ಲ. ಮಳೆ ನಿಲ್ಲುವ ಲಕ್ಷಣಗಳೂ ಗೋಚರಿಸಲಿಲ್ಲ. ಚಳಿಯ ನಡುವೆಯೂ ಮಳೆಯಲ್ಲೇ ಜನ ಸುತ್ತಾಡಬೇಕಾಯಿತು.

ಕೆ.ಆರ್. ಮಾರುಕಟ್ಟೆ, ನಗರದ ಪ್ರಮುಖ ಪೆಟ್ರೋಲ್ ಬಂಕ್‌, ಅಂಗಡಿ, ಮಳಿಗೆ ಹಾಗೂ ಮಾಲ್‌ಗಳಲ್ಲಿ ಜನ ಗುಂಪು ಗುಂಪಾಗಿ ನಿಂತ ಆಶ್ರಯ ಪಡೆದಿದ್ದ ಕಂಡುಬಂತು.

ಕೊಡೆಯೇ ದಿನದ ಸಂಗಾತಿ: ಅಗತ್ಯ ವಸ್ತು ಹಾಗೂ ತರಕಾರಿ ತರಲು ಸಹ ಮಳೆ ಸಮಯ ನೀಡಲಿಲ್ಲ. ಬಹುತೇಕ ಕಡೆ, ಮನೆಯಿಂದ ಹೊರಬಂದ ಜನರೆಲ್ಲರಿಗೂ ಕೊಡೆಯೇ ಸಂಗಾತಿ ಆಗಿತ್ತು.

ಕೊಡೆ ಹಿಡಿದು ಅಂಗಡಿ ಹಾಗೂ ಮಾರುಕಟ್ಟೆಗಳಿಗೆ ಬಂದಿದ್ದ ಜನ, ಅಗತ್ಯ ವಸ್ತುಗಳನ್ನು ಖರೀದಿಸಿಕೊಂಡು ಹೋದರು.

ತಮ್ಮ ಕೆಲಸಕ್ಕೆಂದು ಕಾರಿನಲ್ಲಿ ಸುತ್ತಾಡುತ್ತಿದ್ದ ಸಾರ್ವಜನಿಕರು, ಕಾರಿನಿಂದ ಇಳಿಯುವಾಗಲೂ ಕೊಡೆ ಮೊರೆ ಹೋದರು. ದ್ವಿಚಕ್ರ ವಾಹನ ಸವಾರರು, ರೇನ್‌ಕೋಟ್ ಹಾಗೂ ಜರ್ಕಿನ್‌ಗಳನ್ನು ಧರಿಸಿಕೊಂಡು ಸಂಚರಿಸಿದರು.

ನಿಧಾನಗತಿ ಚಾಲನೆಯಿಂದ ದಟ್ಟಣೆ: ಜಿಟಿ ಜಿಟಿ ನಡುವೆಯೂ ಕೆಲವೆಡೆ ಜೋರು ಮಳೆ ಸುರಿಯಿತು. ಇದರಿಂದಾಗಿ ರಸ್ತೆಯಲ್ಲಿ ಧಾರಾಕಾರ
ವಾಗಿ ನೀರು ಹರಿದು ಹೋಯಿತು. ಇಂಥ ರಸ್ತೆಗಳಲ್ಲಿ ವಾಹನಗಳು ನಿಧಾನಗತಿಯಲ್ಲಿ ಸಂಚರಿಸಿದ್ದರಿಂದ, ದಟ್ಟಣೆಯೂ ಕಂಡುಬಂತು.

ಮೆಜೆಸ್ಟಿಕ್ ಕೆಳ ಸೇತುವೆ, ಶಿವಾನಂದ ವೃತ್ತ ರಸ್ತೆ ಹಾಗೂ ಇತರೆಡೆ ರಸ್ತೆ ಮೇಲೆಯೇ ಸಾಕಷ್ಟು ಪ್ರಮಾಣದಲ್ಲಿ ನೀರು ಹರಿಯಿತು. ಇಲ್ಲೆಲ್ಲ ಸಂಚರಿಸಲು ಸವಾರರು ಪರದಾಡಿದರು.

‘ದಿನವಿಡೀ ಜಿಟಿ ಜಿಟಿ ಮಳೆ ನಿರೀಕ್ಷೆ ಇರಲಿಲ್ಲ. ನಗರದೆಲ್ಲೆಡೆ ಉತ್ತಮ ಮಳೆ ಆಗಿದೆ. ಅನಾಹುತಗಳ ಬಗ್ಗೆ ಯಾವುದೇ ದೂರುಗಳು ಬಂದಿಲ್ಲ’ ಎಂದು ಬಿಬಿಎಂಪಿ ಸಹಾಯವಾಣಿ ಅಧಿಕಾರಿ ಹೇಳಿದರು.

ಶಾಲೆ, ಕಾಲೇಜು ವಿದ್ಯಾರ್ಥಿಗಳಿಗೂ ತೊಂದರೆ: ಜಿಟಿ ಜಿಟಿ ಮಳೆಯಿಂದಾಗಿ ಶಾಲೆ ಹಾಗೂ ಕಾಲೇಜುಗಳಿಗೆ ಹೋಗಲು ವಿದ್ಯಾರ್ಥಿಗಳಿಗೆ ತೊಂದರೆ ಆಯಿತು. ಬೆಚ್ಚಗಿನ ಉಡುಪು ಧರಿಸಿ ಹಾಗೂ ಕೊಡೆ ಆಶ್ರಯದಲ್ಲಿ ಕೆಲ ವಿದ್ಯಾರ್ಥಿಗಳು ಶಾಲೆಗೆ ಹೋಗಿಬಂದರು. ಸುರಿಯುವ ಮಳೆಯಲ್ಲೇ ವಿದ್ಯಾರ್ಥಿಗಳನ್ನು ಪೋಷಕರು ದ್ವಿಚಕ್ರ ವಾಹನಗಳಲ್ಲಿ ಕರೆದೊಯ್ಯುತ್ತಿದ್ದ ದೃಶ್ಯಗಳೂ ಕಂಡುಬಂದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.