ಮೈಸೂರು: ಧರ್ಮದ ಉಳಿವಿಗಾಗಿ ಹೋರಾಟ ನಡೆಸುವ ‘ಧರ್ಮಹಿಂಸೆ’ ಶ್ರೇಷ್ಠವಾದದ್ದು ಎಂದು ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ ಇಲ್ಲಿ ಶನಿವಾರ ಹೇಳಿದರು.
ಲೇಖಕ ಡಾ.ಸುಧಾಕರ ಹೊಸಳ್ಳಿ ಅವರ ‘ರಾಮಮಂದಿರ ಮತ್ತು ಸುಗ್ರೀವಾಜ್ಞೆ ಸಾಧ್ಯತೆ– ಒಂದು ಅವಲೋಕನ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
ದೇಶದಲ್ಲಿ ಹಿಂದೂಗಳು ಯಾವುದೇ ಮಸೀದಿ ಕೆಡವಿ ದೇವಾಲಯ ನಿರ್ಮಿಸಿಲ್ಲ. ಜೈನರು ಬಸದಿಗಳನ್ನು ಕಟ್ಟಿಲ್ಲ. ಆದರೆ, ಮುಸ್ಲಿಮರು ದೇವಾಲಯಗಳನ್ನು ಕೆಡವಿ ಮಸೀದಿ ನಿರ್ಮಿಸಿದ ನೂರಾರು ಉದಾಹರಣೆಗಳಿವೆ. ಭಾರತೀಯ ಸಾಂಸ್ಕೃತಿಕ ಸಂಕೇತ ರಾಮ. ಅಯೋಧ್ಯೆಯಲ್ಲಿ ಹುಟ್ಟಿದ ರಾಮ, ಪೌರಾಣಿಕ ವ್ಯಕ್ತಿಯಾದರೂ ಐತಿಹಾಸಿಕ ವ್ಯಕ್ತಿ ಆಗಿರಲೇಬೇಕು. ಅಯೋಧ್ಯೆಯಲ್ಲಿ ಹಿಂದೂ ದೇವಾಲಯ ಇತ್ತು. ಇದಕ್ಕೆ ಸಾಕಷ್ಟು ಪುರಾವೆಗಳು ಇವೆ ಎಂದು ಅಭಿಪ್ರಾಯಪಟ್ಟರು.
ರಕ್ಷಣೆ ಕೊಡಲಿ: ‘ರಾಮ– ಸೀತೆ ಹೆಂಡ ಕುಡಿಯುತ್ತಿದ್ದರು, ಮಾಂಸಾಹಾರಿ ಆಗಿದ್ದರು ಎಂದು ಪ್ರೊ.ಭಗವಾನ್ ಬರೆದಿದ್ದಾರೆ. ಅವರಿಗೆ ಈಗ ಪೊಲೀಸರ ರಕ್ಷಣೆ ನೀಡಲಾಗಿದೆ. ಆದರೆ, ಭಗವಾನ್, ಚಂದ್ರಶೇಖರ ಪಾಟೀಲ ಅವರು ದೇವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿರುವುದು ಸರಿಯಲ್ಲ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.