ADVERTISEMENT

ನಟ ದ್ವಾರಕೀಶ್‌ಗೆ ಜೀವ ಬೆದರಿಕೆ; ದೂರು

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2020, 20:15 IST
Last Updated 1 ಫೆಬ್ರುವರಿ 2020, 20:15 IST
   

ಬೆಂಗಳೂರು: ‘ಸಿನಿಮಾ ಹಂಚಿಕೆದಾರ ಜಯಣ್ಣ, ಅವರ ಸ್ನೇಹಿತ ರಮೇಶ್ ಹಾಗೂ ಇತರರು ಮನೆಗೆ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆಯೊಡ್ಡಿದ್ದಾರೆ’ ಎಂದು ಆರೋಪಿಸಿ ಹಿರಿಯ ನಟ ದ್ವಾರಕೀಶ್ ಎಚ್‌ಎಸ್‌ಆರ್ ಲೇಔಟ್ ಠಾಣೆಗೆ ದೂರು ನೀಡಿದ್ದಾರೆ.

‘ದ್ವಾರಕೀಶ್ ಚಿತ್ರದಿಂದ ನಿರ್ಮಿಸಲಾಗಿದ್ದ 'ಆಯುಷ್ಮಾನ್ ಭವ' ಸಿನಿಮಾ ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು. ಅಷ್ಟೇನು ಯಶಸ್ಸು ಕಂಡಿರಲಿಲ್ಲ. ಸಿನಿಮಾ ಹಂಚಿಕೆ ವಿಚಾರವಾಗಿ ಜಯಣ್ಣ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಅದರಂತೆ ಹಣ ಕೊಟ್ಟಿರಲಿಲ್ಲ. ಅದನ್ನು ಕೇಳಲು ಜಯಣ್ಣ ಸ್ನೇಹಿತರ ಜೊತೆ ಮನೆಗೆ ಹೋಗಿದ್ದಾಗ ಈ ಘಟನೆ ನಡೆದಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಗಲಾಟೆ ಸಂಬಂಧ ದ್ವಾರಕೀಶ್ ನೀಡಿರುವ ದೂರು ಪರಿಶೀಲಿಸುತ್ತಿದ್ದೇವೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ADVERTISEMENT

ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ದ್ವಾರಕೀಶ್ ಪುತ್ರ ಯೋಗೀಶ್, ‘ನಾನು ಇಲ್ಲದ ವೇಳೆ ಮನೆಗೆ ಬಂದು ತಂದೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆ.ಯಾವುದೇ ವ್ಯವಹಾರವಾದರೂ ಮನೆಯಿಂದ ಹೊರಗಡೆ ಇರಬೇಕು. ಮನೆಗೆ ಬಂದು ಬೆದರಿಕೆ ಹಾಕುವ ಅವಶ್ಯಕತೆ ಇರಲಿಲ್ಲ’ ಎಂದಿದ್ದಾರೆ.

ಪ್ರತಿಕ್ರಿಯೆ ಪಡೆಯಲು ಜಯಣ್ಣ ಲಭ್ಯರಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.