ADVERTISEMENT

ನದಿ ಕಣಿವೆ ಮತ್ತು ಜಲ ವಿದ್ಯುತ್‌ ಯೋಜನೆ: ದಾಖಲೆ ಸಲ್ಲಿಸಲು ಕೇಂದ್ರಕ್ಕೆ ನಿರ್ದೇಶನ

ತಜ್ಞ ಮೌಲ್ಯಮಾಪಕರ ಸಮಿತಿಗೆ ನೇಮಕಾತಿ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2021, 17:51 IST
Last Updated 1 ಏಪ್ರಿಲ್ 2021, 17:51 IST

ಬೆಂಗಳೂರು: ನದಿ ಕಣಿವೆ ಮತ್ತು ಜಲ ವಿದ್ಯುತ್‌ ಯೋಜನೆಗಳ ತಜ್ಞ ಮೌಲ್ಯಮಾಪಕರ ಸಮಿತಿಯ (ಇಎಸಿ) ಅಧ್ಯಕ್ಷರು ಹಾಗೂ ಸದಸ್ಯರ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸುವಂತೆ ಹೈಕೋರ್ಟ್‌ ಕೇಂದ್ರ ಸರ್ಕಾರಕ್ಕೆ ಗುರುವಾರ ನಿರ್ದೇಶನ ನೀಡಿದೆ.

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಕೆ. ಗೋಪಕುಮಾರ್‌ ಅವರನ್ನು ಇಎಸಿಯ ಅಧ್ಯಕ್ಷರನ್ನಾಗಿ ಮತ್ತು ಬಿ.ಕೆ. ಪಾಣಿಗ್ರಾಹಿ, ಆರ್‌.ವಿ. ಉದಯ್‌ ಕುಮಾರ್‌, ಚಂದ್ರಹಾಸ್ ದೇಶಪಾಂಡೆ ಮತ್ತು ಬಾಲರಾಜ್‌ ಜೋಶಿ ಅವರನ್ನು ಸದಸ್ಯರನ್ನಾಗಿ ನೇಮಿಸಿರುವುದನ್ನು ಪ್ರಶ್ನಿಸಿ ಬೆಂಗಳೂರಿನ ಯುನೈಟೆಡ್‌ ಕನ್ಸರ್ವೇಷನ್‌ ಮೂವ್‌ಮೆಂಟ್‌ ಚಾರಿಟಬಲ್‌ ಟ್ರಸ್ಟ್‌ ಸಂಸ್ಥೆಯು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದೆ.

ಪರಿಸರ ಪರಿಣಾಮ ಅಧ್ಯಯನಕ್ಕೆ (ಇಎಸ್‌ಎ) ಸಂಬಂಧಿಸಿದಂತೆ 2006ರಲ್ಲಿ ಹೊರಡಿಸಿರುವ ಅಧಿಸೂಚನೆಯಲ್ಲಿ ನಿಗದಿಪಡಿಸಿರುವ ಅರ್ಹತೆಗಳಿಗೆ ವಿರುದ್ಧವಾಗಿ ನೇಮಕಾತಿ ನಡೆದಿದೆ ಎಂದು ಅರ್ಜಿದಾರರು ದೂರಿದ್ದಾರೆ. ಐವರನ್ನು ನೇಮಕ ಮಾಡಿ 2020ರ ಜುಲೈ 13ರಂದು ಹೊರಡಿಸಿರುವ ಆದೇಶವನ್ನು ರದ್ದು ಮಾಡುವಂತೆ ಕೋರಿದ್ದಾರೆ.

ADVERTISEMENT

ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಆಕ್ಷೇಪಣೆ ಸಲ್ಲಿಸಿತ್ತು. ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕಾ ನೇತೃತ್ವದ ವಿಭಾಗೀಯ ಪೀಠ, ‘ಕೇಂದ್ರ ಸರ್ಕಾರ ಸಲ್ಲಿಸಿರುವ ಆಕ್ಷೇಪಣೆಯಲ್ಲಿ ಸರಿಯಾದ ಮಾಹಿತಿ ಇಲ್ಲ. ಮಹತ್ವದ ಸಮಿತಿಯೊಂದಕ್ಕೆ ಹೇಗೆ ನೇಮಕಾತಿ ನಡೆಸಲಾಗಿದೆ ಎಂಬುದರ ವಿವರಗಳನ್ನೇ ಒದಗಿಸಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿತು.

ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದ ಸಮಗ್ರ ವಿವರ ಹಾಗೂ ದಾಖಲೆಗಳನ್ನು ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದ ವಿಭಾಗೀಯ ಪೀಠ, ಮೇ 25ಕ್ಕೆ ವಿಚಾರಣೆ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.