ADVERTISEMENT

ಧಾರವಾಡ: ಒಂದೇ ಜಮೀನಿಗೆ ಎರಡು ಪರಿಹಾರ; ಜಾರಿ ನಿರ್ದೇಶನಾಲಯ ಹೆಚ್ಚುವರಿ ದೂರು

ಧಾರವಾಡದ ಗಾಮನಗಟ್ಟಿ ಕೈಗಾರಿಕಾ ಪ್ರದೇಶಕ್ಕಾಗಿ ಜಮೀನು ಸ್ವಾಧೀನ ಪ್ರಕರಣ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2025, 14:23 IST
Last Updated 9 ಸೆಪ್ಟೆಂಬರ್ 2025, 14:23 IST
ಜಾರಿ ನಿರ್ದೇಶನಾಲಯ 
ಜಾರಿ ನಿರ್ದೇಶನಾಲಯ    

ಬೆಂಗಳೂರು: ಧಾರವಾಡದ ಗಾಮನಗಟ್ಟಿ ಕೈಗಾರಿಕಾ ಪ್ರದೇಶಕ್ಕಾಗಿ ಸ್ವಾಧೀನಪಡಿಸಿಕೊಂಡಿದ್ದ ಜಮೀನಿಗೆ, ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು (ಕೆಐಎಡಿಬಿ) ಎರಡು ಬಾರಿ ಪರಿಹಾರ ನೀಡಿದ ಪ್ರಕರಣದಲ್ಲಿ 17 ಮಂದಿಯ ವಿರುದ್ಧ ಜಾರಿ ನಿರ್ದೇಶನಾಲಯವು (ಇ.ಡಿ) ಮಂಗಳವಾರ ಹೆಚ್ಚುವರಿ ದೂರು ದಾಖಲಿಸಿದೆ.

ಎರಡನೇ ಬಾರಿ ಪರಿಹಾರ ಪಡೆಯುವಲ್ಲಿ ಪ್ಯಾನ್, ಆಧಾರ್ ವಿವರಗಳನ್ನು ಒದಗಿಸಿದ್ದ ವ್ಯಕ್ತಿಗಳನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಜತೆಗೆ ಪರಿಹಾರದ ಹಣವು ಯಾರಿಗೆಲ್ಲ ವರ್ಗಾವಣೆ ಆಗಿದೆಯೋ ಅವರ ವಿರುದ್ಧವೂ ದೂರು ದಾಖಲಿಸಿದೆ. ಕೆಲವೇ ವ್ಯಕ್ತಿಗಳ ಮಧ್ಯೆ ಈ ಹಣದ ವಹಿವಾಟು ನಡೆದಿದ್ದು, ಎಲ್ಲರೂ ಸಂಚು ರೂಪಿಸಿ ಅಕ್ರಮ ಎಸಗಿದ್ದಾರೆ ಎಂಬ ವಿವರ ದೂರಿನಲ್ಲಿದೆ ಎಂದು ಮೂಲಗಳು ಮಾಹಿತಿ ತಿಳಿಸಿವೆ.

2010–12ರ ಅವಧಿಯಲ್ಲಿ ಮಂಡಳಿಯು ಸ್ವಾಧೀನಪಡಿಸಿಕೊಂಡಿದ್ದ ಜಮೀನಿಗೆ 2012ರಲ್ಲೇ ಪರಿಹಾರ ಒದಗಿಸಲಾಗಿತ್ತು. ಆದರೆ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ, 2021–22ನೇ ಆರ್ಥಿಕ ವರ್ಷದಲ್ಲಿ ಹಲವು ಜಮೀನುಗಳಿಗೆ ಎರಡನೇ ಬಾರಿಗೆ ಒಟ್ಟು ₹19.99 ಕೋಟಿ ಪರಿಹಾರ ನೀಡಲಾಗಿತ್ತು. 

ADVERTISEMENT

ಈ ಪ್ರಕರಣದಲ್ಲಿ ತನಿಖೆ ಆರಂಭಿಸಿದ್ದ ಇ.ಡಿಯು, ಇದೇ ರೀತಿ ಒಟ್ಟು 31 ಜಮೀನುಗಳಿಗೆ ಎರಡು ಬಾರಿ ಪರಿಹಾರವಾಗಿ ಒಟ್ಟು ₹72 ಕೋಟಿ ಪಾವತಿ ಮಾಡಲಾಗಿದೆ ಎಂಬುದನ್ನು ಪತ್ತೆ ಮಾಡಿತ್ತು. ಅಕ್ರಮ ನಡೆದ ಅವಧಿಯಲ್ಲಿ ಕೆಐಎಡಿಬಿ ಧಾರವಾಡ ವಿಶೇಷ ಭೂಸ್ವಾಧೀನಾಧಿಕಾರಿ ಆಗಿದ್ದ, ನಿವೃತ್ತ ಅಧಿಕಾರಿ ವಸಂತಕುಮಾರ್ ದುರ್ಗಪ್ಪ ಸಜ್ಜನ್‌ ಮತ್ತು ಭೂ ದಲ್ಲಾಳಿ ಮೈಬೂಬ್‌ ಅಲ್ಲಾಬಕ್ಷ್‌ ದುಂಡಾಸಿ ಅವರನ್ನು ಬಂಧಿಸಿತ್ತು.

ಈ ಇಬ್ಬರೂ ಸೇರಿ ಒಟ್ಟು 22 ಮಂದಿಯ ವಿರುದ್ಧ ಈ ಹಿಂದೆಯೇ ಪ್ರಾಸಿಕ್ಯೂಷನ್‌ ದೂರು ದಾಖಲಿಸಿತ್ತು. ‘ಈ ಎಲ್ಲ ಅಕ್ರಮಗಳು ವಸಂತಕುಮಾರ್ ದುರ್ಗಪ್ಪ ಸಜ್ಜನ್‌ ಅಣತಿಯಂತೆಯೇ ನಡೆದಿದೆ. ಪರಿಹಾರ ಪಡೆದ ನೀಡಿದ ಪ್ರಕರಣಗಳಲ್ಲಿ ಅಕ್ರಮವಾಗಿ ತೆರಿಗೆ ಆದಾಯ ಹಿಂಪಾವತಿ ಪಡೆದಿರುವುದು ಪತ್ತೆಯಾಗಿದೆ’ ಎಂದು ನ್ಯಾಯಾಲಯಕ್ಕೆ ತಿಳಿಸಿತ್ತು. ಈಗ ಮೂಲ ಪ್ರಾಸಿಕ್ಯೂಷನ್‌ ದೂರಿಗೆ ಪೂರಕವಾಗಿ, ಮಂಗಳೂರಿನ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯಕ್ಕೆ ಹೆಚ್ಚುವರಿ ದೂರು ನೀಡಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.