ADVERTISEMENT

ಇ.ಡಿ. ಅಧಿಕಾರಿಗಳಿಂದ ಕನಕಪುರದಲ್ಲಿ ಡಿಕೆಶಿ ತಾಯಿ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2020, 16:39 IST
Last Updated 11 ಫೆಬ್ರುವರಿ 2020, 16:39 IST
   

ಕೋಡಿಹಳ್ಳಿ (ಕನಕಪುರ): ಅಕ್ರಮ ಹಣ ವರ್ಗಾವಣೆ, ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿ ಕನಕಪುರ ಶಾಸಕ ಡಿ.ಕೆ. ಶಿವಕುಮಾರ್ ಅವರ ತಾಯಿ ಗೌರಮ್ಮ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮಂಗಳವಾರ ಕೋಡಿಹಳ್ಳಿಯಲ್ಲಿನ ಅವರ ನಿವಾಸದಲ್ಲಿ ವಿಚಾರಣೆಗೆ ಒಳಪಡಿಸಿದರು.

ಮಧ್ಯಾಹ್ನ 1 ಗಂಟೆ ಸುಮಾರಿಗೆ ಮನೆಗೆ ಬಂದ ಐವರು ಅಧಿಕಾರಿಗಳು ಸತತ ಆರು ಗಂಟೆ ಕಾಲ ಮನೆಯಲ್ಲಿನ ಮಹಡಿಯ ಕೋಣೆಯೊಂದರಲ್ಲಿ ಗೌರಮ್ಮ ಅವರನ್ನು ವಿಚಾರಣೆ ಮಾಡಿದರು. ಅವರ ಖಾತೆಯಲ್ಲಿನ ಹಣ ವರ್ಗಾವಣೆ, ಆಸ್ತಿಗಳು ಹಾಗೂ ಆದಾಯದ ಮೂಲದ ಕುರಿತು ಮಾಹಿತಿ ಪಡೆದರು.

ವಿಚಾರಣೆ ಬಳಿಕ ಸಾಕ್ಷಿಯ ಹೇಳಿಕೆಯನ್ನು ಲಿಖಿತ ರೂಪದಲ್ಲಿ ದಾಖಲಿಸಿದ್ದು, ಇಂಗ್ಲಿಷ್‌ಗೆ ಭಾಷಾಂತರಿಸಿ ಸಹಿ ಪಡೆಯಲಾಯಿತು ಎಂದು ತಿಳಿದುಬಂದಿದೆ. ರಾತ್ರಿ 8.50ರ ಸುಮಾರಿಗೆ ಅಧಿಕಾರಿಗಳು ಅಲ್ಲಿಂದ ನಿರ್ಗಮಿಸಿದ್ದು, ಬುಧವಾರವೂ ವಿಚಾರಣೆ ನಡೆಯುವ ಬಗ್ಗೆ ಮಾಹಿತಿ ನೀಡಲಿಲ್ಲ.

ADVERTISEMENT

ವಿಚಾರಣೆಗೂ ಮುನ್ನ ಬೆಳಿಗ್ಗೆ ಗೌರಮ್ಮರ ಆರೋಗ್ಯ ತಪಾಸಣೆ ನಡೆಯಿತು. ವೈದ್ಯರು ಅನುಮತಿ ನೀಡಿದ ಬಳಿಕವಷ್ಟೇ ಅಧಿಕಾರಿಗಳು ವಿಚಾರಣೆ ಆರಂಭಿಸಿದರು. ಪುತ್ರರಾದ ಡಿ.ಕೆ. ಶಿವಕುಮಾರ್, ಸಂಸದ ಡಿ.ಕೆ. ಸುರೇಶ್‌ ಸೋಮವಾರ ರಾತ್ರಿಯೇ ಕೋಡಿಹಳ್ಳಿಗೆ ಬಂದಿದ್ದು, ವಿಚಾರಣೆ ವಿಚಾರದಲ್ಲಿ ತಾಯಿಗೆ ಅಗತ್ಯ ಸಲಹೆ ನೀಡಿದ್ದರು. ಆದರೆ, ವಿಚಾರಣೆ ವೇಳೆ ಅವರಿಬ್ಬರನ್ನು ಅಧಿಕಾರಿಗಳು ದೂರ ಇರಿಸಿದ್ದರು. ಡಿಕೆಶಿ ಪತ್ನಿ ಉಷಾ, ಪುತ್ರಿ ಐಶ್ವರ್ಯ ಅವರೂ ಮನೆಯಲ್ಲಿದ್ದರು. ಪೊಲೀಸರು ಕಟ್ಟಡದ ಸುತ್ತ ಬಿಗಿ ಭದ್ರತೆ ಒದಗಿಸಿದ್ದರು. ಕುಟುಂಬ ಸದಸ್ಯರನ್ನು ಹೊರತುಪಡಿಸಿ ಅನ್ಯರಿಗೆ ಮನೆಯೊಳಗೆ ಪ್ರವೇಶ ನಿರಾಕರಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.