ADVERTISEMENT

ಜಾತಿವಾರು ಸಮೀಕ್ಷೆ | ‘ಈಡಿಗ’ ಎಂದೇ ನಮೂದಿಸಲು ಸಂಘ ತೀರ್ಮಾನ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2025, 15:55 IST
Last Updated 17 ಸೆಪ್ಟೆಂಬರ್ 2025, 15:55 IST
ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘ ಆಯೋಜಿಸಿದ್ದ ಸಭೆಯಲ್ಲಿ ಸ್ವಾಮೀಜಿಗಳು, ಸಮುದಾಯದ ಮುಖಂಡರು ಭಾಗವಹಿಸಿದ್ದರು
ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘ ಆಯೋಜಿಸಿದ್ದ ಸಭೆಯಲ್ಲಿ ಸ್ವಾಮೀಜಿಗಳು, ಸಮುದಾಯದ ಮುಖಂಡರು ಭಾಗವಹಿಸಿದ್ದರು   

ಬೆಂಗಳೂರು: ‘ರಾಜ್ಯ ಸರ್ಕಾರದ ಸೌಲಭ್ಯಗಳನ್ನು ಪಡೆಯಬೇಕಾದರೆ ನಮ್ಮ ಒಗ್ಗಟ್ಟನ್ನು ಪ್ರದರ್ಶಿಸಿ, ಜಾತಿವಾರು ಸಮೀಕ್ಷೆಯಲ್ಲಿ 26 ಉಪ ಪಂಗಡಗಳನ್ನು ಒಳಗೊಂಡ ಈಡಿಗ ಸಮುದಾಯವನ್ನು ‘ಈಡಿಗ’ ಎಂದೇ ನಮೂದಿಸಬೇಕು’ ಎಂದು ಕರ್ನಾಟಕ ಆರ್ಯ ಈಡಿಗರ ಸಂಘದ ಸಭೆಯಲ್ಲಿ ಒಕ್ಕೊರಲಿನ ತೀರ್ಮಾನ ಕೈಗೊಳ್ಳಲಾಗಿದೆ.

ಸೋಲೂರಿನ ಆರ್ಯ ಈಡಿಗ ಮಹಾಸಂಸ್ಥಾನ ಮಠದ ವಿಖ್ಯಾತನಂದ ಸ್ವಾಮೀಜಿ, ಗರ್ತಿಕೆರೆಯ ನಾರಾಯಣ ಗುರು ಪೀಠದ ರೇಣುಕಾನಂದ ಸ್ವಾಮೀಜಿ, ದೇವಿಕಾನಂದ ಸ್ವಾಮೀಜಿ, ಚಿಕ್ಕಬಳ್ಳಾಪುರದ ಶಿವಸಾಯಿ ಸ್ವಾಮೀಜಿ, ಈಡಿಗರ ಸಂಘದ ಅಧ್ಯಕ್ಷ ಎಂ. ತಿಮ್ಮೇಗೌಡ, ಬಿಲ್ಲವ ಸಂಘದ ಅಧ್ಯಕ್ಷ ವೇದಕುಮಾರ್, ಈಡಿಗ ನೌಕರರ ಕ್ಷೇಮಾಭಿವೃದ್ಧಿ ಸಂಘದ ನಾಗರಾಜ್, ಈಡಿಗರ ಸಂಘದ ನಿರ್ದೇಶಕರಾದ ವಾಸು, ಪುರುಷೋತ್ತಮ್, ಮಂಜುನಾಥ್ ಅವರು ಬುಧವಾರ ನಡೆದ ಸಭೆಯಲ್ಲಿ ಭಾಗವಹಿಸಿದ್ದರು.

ಸಭೆ ಬಳಿಕ ಮಾತನಾಡಿದ ತಿಮ್ಮೇಗೌಡ, ‘ಜಾತಿವಾರು ಸಮೀಕ್ಷೆಯ ನೆಪದಲ್ಲಿ ಒಂದಾಗುವ ಕಾಲ ಕೂಡಿ ಬಂದಿದೆ. ಈಡಿಗ ಸಮುದಾಯದವರು ಸಮೀಕ್ಷೆಯ ಜಾತಿ ಕಾಲಂ ನಂಬರ್ 9ರಲ್ಲಿ ‘ಈಡಿಗ’, ಉಪ ಜಾತಿ ಕಲಂನಲ್ಲಿ ‘ದೀವರು’ ಎಂದು ನಮೂದಿಸಬೇಕು. ರಾಜ್ಯದೆಲ್ಲಡೆ ಈ ಕುರಿತು ಜಾಗೃತಿ ಮೂಡಿಸಲಾಗುವುದು’ ಎಂದು ಹೇಳಿದರು.

ADVERTISEMENT

ವಿಖ್ಯಾತನಂದ ಸ್ವಾಮೀಜಿ ಮಾತನಾಡಿ, ‘ಈಡಿಗ ಸಮುದಾಯ 26 ಉಪ ಪಂಗಡಗಳನ್ನು ಒಳಗೊಂಡ ಜನಾಂಗವಾಗಿದೆ. ಪ್ರತಿಯೊಬ್ಬರೂ ಸಮೀಕ್ಷೆಯಲ್ಲಿ ಈಡಿಗ ಎಂದು ಬರೆಯಿಸಿದರೆ ನಮ್ಮ ಒಗ್ಗಟ್ಟನ್ನು ತೋರಿಸಿದಂತಾಗುತ್ತದೆ’ ಎಂದರು.

ಗರ್ತಿಕೆರೆಯ ನಾರಾಯಣ ಗುರು ಪೀಠದ ರೇಣುಕಾನಂದ ಸ್ವಾಮೀಜಿ ಮಾತನಾಡಿ, ‘ಈಡಿಗ ಸಮುದಾಯ ಪ್ರಸ್ತುತ ಸಮೀಕ್ಷೆಯ ಸಂದರ್ಭದಲ್ಲಿ ನಮ್ಮ ಒಗ್ಗಟ್ಟನ್ನು ಪ್ರದರ್ಶಿಸುವ ಅವಶ್ಯ ಇದೆ’ ಎಂದು ಹೇಳಿದರು.

ಪತ್ರಕರ್ತ ಲಕ್ಷ್ಮಣ್ ಕೊಡಸೆ ಮಾತನಾಡಿ, ‘ಶಿವಮೊಗ್ಗ ಜಿಲ್ಲೆಯಲ್ಲಿ ಜಾತಿ ನಮೂದಿಸುವ ಕುರಿತು ಗೊಂದಲವಿದೆ. ಇದನ್ನು ಅವರಿಗೆ ಸಂಘ ಮನವರಿಕೆ ಮಾಡಬೇಕಿದೆ. ಕುರುಬ ಸಮುದಾಯದ ಮಾದರಿಯಲ್ಲಿ ಸಂಘದ ವತಿಯಿಂದ ಜನಾಂಗೀಯ ಅಧ್ಯಯನ ನಡೆಸುವುದು ಅಗತ್ಯವಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.