ಬಾಗಲಕೋಟೆ:ತಾಲ್ಲೂಕಿನ ಕಳಸಕೊಪ್ಪ ಕೆರೆಗೆ ಶುಕ್ರವಾರ ಈಶ್ವರಪ್ಪ ಬಾಗಿನ ಅರ್ಪಿಸಿದರು. ಈ ವೇಳೆ ಸುದ್ದಿಗಾರರು ಜನಾರ್ದನ ರೆಡ್ಡಿ ಕುರಿತು ಕೇಳಿದಪ್ರಶ್ನೆಗೆ ಕೋಪಗೊಂಡರು. ‘ನಮಗೂ ಅದಕ್ಕೆ ಸಂಬಂಧವಿಲ್ಲರೀ’ ಎಂದ ಈಶ್ವರಪ್ಪ. ‘ಬೇರೆ ಏನಾದ್ರೂ ಇದ್ರೆ ಕೇಳಿ’ ಎಂದರು.
ಟಿಪ್ಪು ಜಯಂತಿ ಆಚರಣೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ನಮ್ಮಲ್ಲಿ ಯಾರ ಮೈಯಲ್ಲೂ ಟಿಪ್ಪು ರಕ್ತ ಹರಿಯುತ್ತಿಲ್ಲ. ಬದಲಿಗೆ ಭಾರತಾಂಬೆ, ಸ್ವಾತಂತ್ರ್ಯ ಹೋರಾಟಗಾರರ ರಕ್ತ ಹರಿಯುತ್ತಿದೆ. ಆದ್ರೆ ಯಾಕೆ ಸರ್ಕಾರ ಈ ವಿಚಾರವನ್ನು ಇಷ್ಟೊಂದು ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ ಅನ್ನೋದು ನನಗೆ ಗೊತ್ತಾಗುತ್ತಿಲ್ಲ.ಟಿಪ್ಪು ಜಯಂತಿ ಆಚರಣೆ ಆರಂಭದಿಂದಲೂ ಹಿಂದೂ ಕಾರ್ಯಕರ್ತರ ಹತ್ಯೆ ಆಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಇದೇ ಕುಮಾರಸ್ವಾಮಿ ಮಡಿಕೇರಿಯಲ್ಲಿ ಕುಟ್ಟಪ್ಪ ಮನೆಗೆ ಹೋದಾಗ ನಾನು ಸಿಎಂ ಆದರೆ ಟಿಪ್ಪು ಜಯಂತಿ ಆಚರಣೆಗೆ ಬಿಡೋಲ್ಲ ಎಂದಿದ್ರು. ಆಗ ಇವರಿಗೆ ರಾಜ್ಯದ ಸಿಎಂ ಆಗ್ತೀನಿ ಎಂದು ಕಲ್ಪನೆಯಲ್ಲಿ ಇರಲಿಲ್ಲವೆ. ಹಿಂದೆ ಹಿಂದೂ-ಮುಸ್ಲಿಮರು ಸಂತೋಷವಾಗಿದ್ರು..
ಈಗಕಾಂಗ್ರೆಸ್ ನವರು ಟಿಪ್ಪು ಜಯಂತಿ ಹೆಸರಲ್ಲಿ ಇಬ್ಬರ ಮಧ್ಯೆ ಬೆಂಕಿ ಹಚ್ಙಿ ಆಟ ನೋಡುತ್ತಿದ್ದಾರೆ.ಜನ ಸತ್ತರೆ, ಇವರಿಗೆ ಆನಂದವಾಗುವುದೋ ಏನೋಗೊತ್ತಿಲ್ಲ’ ಎಂದು ಕುಟುಕಿದರು.
‘ನಾಳೆ ಪಕ್ಷದ ಕೋರ್ ಕಮಿಟಿ ಸಭೆ ಇದೆ. ಅಲ್ಲಿ ಚರ್ಚಿಸಿ ಮುಂದಿನ ಹೋರಾಟದ ರೂಪುರೇಷೆ ನಿರ್ಧಾರ ಮಾಡುತ್ತೇವೆ. ಈಗ ಎಲ್ಲಾ ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆ ಮಾಡಲಾಗುತ್ತಿದೆ.ಟಿಪ್ಪು ಜಯಂತಿ ಆಚರಣೆ ವಿಚಾರದಲ್ಲಿ ಕುಮಾರಸ್ವಾಮಿ ಅವರಿಗೆ ನಿಲುವೇ ಇಲ್ಲ. ಎಲ್ಲಿಯವರೆಗೆ ಸರ್ಕಾರ ನಡೆಯುತ್ತೆ ನೋಡೋಣ. ಒಳ್ಳೆಯದೋ ಕೆಟ್ಟದ್ದೋ ನಡೆದುಕೊಂಡು ಹೋಗ್ತಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.