ADVERTISEMENT

ಉಪ ಚುನಾವಣೆ ನಾಮಪತ್ರ ಸಲ್ಲಿಕೆ ಅಂತ್ಯ: ಆರೋಪ– ಪ್ರತ್ಯಾರೋಪ

ಮುಖಂಡರ ಮಾತಿನ ಕಚ್ಚಾಟ ಶುರು

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2018, 18:47 IST
Last Updated 16 ಅಕ್ಟೋಬರ್ 2018, 18:47 IST

ಬೆಂಗಳೂರು: ಲೋಕಸಭಾ ಹಾಗೂ ವಿಧಾನಸಭಾ ಉಪಚುನಾವಣೆಯ ನಾಮಪತ್ರ ಸಲ್ಲಿಕೆ ಮಂಗಳವಾರ ಮುಕ್ತಾಯಗೊಂಡಿದೆ. ಜತೆ ಜತೆಗೆ, ರಾಜಕೀಯ ಮುಖಂಡರ ಬೀದಿ ಹಣಾಹಣಿ ಶುರುವಾಗಿದೆ.

ಜೆಡಿಎಸ್‌–ಕಾಂಗ್ರೆಸ್‌ ಮಿತ್ರ ಪಕ್ಷಗಳು ಹಾಗೂ ಬಿಜೆಪಿ ನಾಯಕರು ಪರಸ್ಪರ ಆರೋಪ–ಪ್ರತ್ಯಾರೋಪಗಳ ಸುರಿಮಳೆಗರೆಯಲು ಶುರು ಮಾಡಿಕೊಂಡಿದ್ದಾರೆ. ಕಾಂಗ್ರೆಸ್‌ ಆಂತರಿಕ ಕಚ್ಚಾಟವೂ ಬಹಿರಂಗಗೊಂಡಿದೆ.

ತಮ್ಮ ಆಪ್ತ ಶಾಸಕ ಬಿ.ನಾಗೇಂದ್ರ ಸಹೋದರ ವೆಂಕಟೇಶ ಪ್ರಸಾದ್‌ ಅವರಿಗೆ ಟಿಕೆಟ್‌ ಕೈತಪ್ಪಿದ್ದರಿಂದ ಸಿಟ್ಟಿಗೆದ್ದಿರುವ ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಅವರು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ವಿರುದ್ಧ ಟೀಕಾ‍ಪ್ರಹಾರ ನಡೆಸಿದ್ದಾರೆ.

ADVERTISEMENT

‘ನಾಯಕರಾದವರು ಎದೆ ಉಬ್ಬಿಸಿಕೊಂಡು ಓಡಾಡುವುದಲ್ಲ. ಮಾಧ್ಯಮಗಳ ಮುಂದೆ ಪ್ರಭಾವಿ ನಾಯಕ ಆಗುವುದಲ್ಲ. ಪಕ್ಷಕ್ಕಾಗಿ ಕೆಲಸ ಮಾಡುವ ಸಾಮಾನ್ಯ ಕಾರ್ಯಕರ್ತ ಕೂಡ ಪ್ರಭಾವಿ ಮುಖಂಡ. ನಾನು ಡಿ.ಕೆ.ಶಿವಕುಮಾರ್‌ ಜತೆಗೆ ಪ್ರಚಾರ ನಡೆಸುವುದಿಲ್ಲ’ ಎಂದು ಅವರು ಘೋಷಿಸಿದರು.

‘ನಾನು ಇಲ್ಲಿಗೆ ಯುದ್ಧ ಮಾಡಲು ಬಂದಿಲ್ಲ. ಈ ತರಹದ ಟೀಕೆಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ’ ಎಂದು ಶಿವಕುಮಾರ್‌ ಪ್ರತಿಕ್ರಿಯಿಸಿದರು.

ಶಿವಮೊಗ್ಗದಲ್ಲಿ ಯಡಿಯೂರಪ್ಪ ಹಾಗೂ ಎಸ್‌. ಬಂಗಾರಪ್ಪ ಕುಟುಂಬಗಳ ಜಿದ್ದಾಜಿದ್ದಿಗೆ ವೇದಿಕೆ ಸಿದ್ಧವಾಗಿದೆ.

ಜಮಖಂಡಿ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಆನಂದ್‌ ನ್ಯಾಮಗೌಡ ನಾಮಪತ್ರ ಸಲ್ಲಿಕೆಯ ವೇಳೆ ‘ಕೈ’‍ಪಾಳಯ ಶಕ್ತಿ ಪ್ರದರ್ಶನ ನಡೆಸಿದೆ. ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಯಡಿಯೂರಪ್ಪ ಮಧ್ಯೆ ತೀವ್ರ ಕೆಸರೆರಚಾಟ ನಡೆದಿದೆ.

ಈ ನಡುವೆ, ಸಂಗಮೇಶ ನಿರಾಣಿ ಅವರ ಅಮಾನತು ಆದೇಶವನ್ನು ಯಡಿಯೂರಪ್ಪ ವಾಪಸ್‌ ಪಡೆದಿದ್ದಾರೆ. ಈ ಮೂಲಕ ಬಂಡಾಯ ಶಮನಕ್ಕೆ ಯತ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.